ನವದೆಹಲಿ: ಯುಜಿಸಿ-ನೆಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ಡಾರ್ಕ್ ನೆಟ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಇದರ ಬೆನ್ನಲ್ಲೇ ಟೆಲಿಗ್ರಾಂನಲ್ಲಿ ಮೂಲ ಪ್ರಶ್ನೆ ಪತ್ರಿಕೆ ಹೋಲುವ ಪತ್ರಿಕೆಯೇ ಹರಿದಾಡಿದೆ. ಇದೇ ಕಾರಣಕ್ಕೆ ಪರೀಕ್ಷೆ ರದ್ದುಪಡಿಸಲಾಯಿತು’ ಎಂದಿದ್ದಾರೆ.
ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾರ್ಕ್ನೆಟ್ನಲ್ಲಿ ನೆಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿತು. ಬಳಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಆದ ಟೆಲಿಗ್ರಾಂನಲ್ಲಿ ಮೂಲ ಪ್ರಶ್ನೆ ಪತ್ರಿಕೆಯೊಂದಿಗೆ ಹೊಂದಿಕೆಯಾಗುವ ಪ್ರಶ್ನೆಪತ್ರಿಕೆ ಹರಿದಾಡಿತು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದು ಮಾಡಲಾಯಿತು. ಈ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ’ ಎಂದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್, ‘ನಮಗೆ ಅಕ್ರಮ ನಡೆದಿದೆ ಎಂಬ ಯಾವುದೇ ದೂರುಗಳು ಬಂದಿಲ್ಲ. ಬದಲಿಗೆ ಲಭ್ಯವಾದ ಮಾಹಿತಿ (ಅಕ್ರಮ ನಡೆದ ಮಾಹಿತಿ) ಅನ್ವಯ ವಿದ್ಯಾರ್ಥಿಗಳ ಒಳಿತನ್ನು ಗಮನದಲ್ಲಿಟ್ಟುಕೊಂಡು ಸ್ವಯಂಪ್ರೇರಿತ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರ ಪರೀಕ್ಷೆಗೆ ಹೊಸ ದಿನಾಂಕ ಘೋಷಿಸಲಾಗುವುದು’ ಎಂದು ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಯುಜಿಸಿ-ನೆಟ್ ಪರೀಕ್ಷೆಯನ್ನು ಬುಧವಾರ ರದ್ದುಗೊಳಿಸಲಾಗಿತ್ತು. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅಕ್ರಮಗಳ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿತ್ತು.
==
ನೆಟ್ ಅಕ್ರಮ: ಭ್ರಷ್ಟಾಚಾರ ಕೇಸು ದಾಖಲಿಸಿ ಸಿಬಿಐ ತನಿಖೆ?
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ರದ್ದಾದ ಬೆನ್ನಲ್ಲೇ, ಸರ್ಕಾರದ ಸೂಚನೆ ಅನುಸಾರ ಸಿಬಿಐ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ನೆಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಗುಮಾನಿ ಇದ್ದು, ಭ್ರಷ್ಟಾಚಾರ ಕೇಸು ದಾಖಲಿಸಿ ತನಿಖೆ ನಡೆಸುವ ಸಂಭವವಿದೆ.
ಡಾರ್ಕ್ನೆಟ್ ಹಾಗೂ ಟೆಲಿಗ್ರಾಂನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆದ ಕಾರಣ ಜೂ.18 ರಂದು ನಡೆದಿದ್ದ ನೆಟ್ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯ ರದ್ದು ಮಾಡಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಪ್ರಶ್ನೆಪತ್ರಿಕೆ ತಯಾರಿಕೆ ಹಾಗೂ ಹಂಚಿಕೆ ವೇಳೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದೇ ಸೋರಿಕೆಗೆ ಕಾರಣ ಎನ್ನಲಾಗಿದೆ.ಹೀಗಾಗಿ ಪ್ರಮುಖವಾಗಿ ಪ್ರಶ್ನೆ ಪತ್ರಿಕೆ ತಯಾರಿಸಿದವರಿಂದ ಹಿಡಿದು ಪರೀಕ್ಷೆ ನಡೆಸಲು ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ನಿಯೋಜಿತರಾಗಿದ್ದ ಮೌಲ್ಯಮಾಪರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯೆತೆಯಿದೆ ಎಂದು ಅವು ತಿಳಿಸಿವೆ.ಪರೀಕ್ಷಾ ಪ್ರಶ್ನೆಪತ್ರಿಕೆಗಳ 2ರಿಂದ 3 ಸೆಟ್ಗಳನ್ನು ಸಿದ್ಧಪಡಿಸಲಾಗಿತ್ತು. ಇವನ್ನು ಸಿಬ್ಬಂದಿಯೇ ಸೋರಿಕೆ ಮಾಡಿರುವ ಗುಮಾನಿ ಇದೆ.