ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಸಂಘಟನೆಯು ಗ್ರಾಹಕರಿಗೆ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಎಟಿಎಂ, ಯುಪಿಐ ಮೂಲಕ ಹಿಂಪಡೆಯುವ ಯೋಜನೆ ಮೇ ಅಂತ್ಯ ಜೂನ್ನಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಎಟಿಎಂ, ಯುಪಿಐ ಮೂಲಕ ಪಿಎಫ್ ಹಣವನ್ನು ಅನಾರೋಗ್ಯ, ವಸತಿ, ಶಿಕ್ಷಣ ಮತ್ತು ಮದುವೆ ಕಾರಣಗಳಿಗೆ ಹಿಂಪಡೆಯಬಹುದು.
==ಮೇ 1ರಿಂದ ಎಟಿಎಂ ಹಣ ವಿತ್ಡ್ರಾ ಶುಲ್ಕ 2 ರು. ಹೆಚ್ಚಳ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಿರುವುದರಿಂದ, ಮೇ 1 ರಿಂದ ಭಾರತದಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ.ಇದರರ್ಥ ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಮೇ 1ರಿಂದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರು. ಪಾವತಿಸಬೇಕಾಗುತ್ತದೆ.ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸಿನೇತರ ವಹಿವಾಟುಗಳಿಗೆ, ಶುಲ್ಕವು 1 ರು. ಹೆಚ್ಚಾಗುತ್ತದೆ. ಪರಿಣಾಮವಾಗಿ, ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರು. ವೆಚ್ಚವಾಗಲಿದೆ, ಇದು ಹಿಂದಿನ 17 ರು.ಗಿಂತ 2 ರು. ಹೆಚ್ಚು,ಎಟಿಎಂ ಇಂಟರ್ಚೇಂಜ್ ಶುಲ್ಕ ಎಂದರೆ ಎಟಿಎಂ ಸೇವೆಗಳನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್ಗೆ ಪಾವತಿಸುವ ಶುಲ್ಕವಾಗಿದೆ.
==ಏ.1ರಿಂದ ಟೋಲ್ ದರದಲ್ಲಿ ಕೊಂಚ ವಿನಾಯ್ತಿ: ಗಡ್ಕರಿ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕ ಕೇಂದ್ರದಲ್ಲಿ ಪ್ರಯಾಣಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏ.1ರ ಒಳಗೆ ಹೊಸ ಟೋಲ್ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ವಾಹನ ಸವಾರರಿಗೆ ರಿಯಾಯ್ತಿ ಇರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ನೀತಿಯಲ್ಲಿ ಪ್ರಯಾಣಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ರಿಯಾಯ್ತಿ ದೊರೆಯುತ್ತದೆ. ಜೊತೆಗೆ ಸುಂಕ ವಸೂಲಿಯೂ ಸರಳೀಕರಿಸಲಾಗಿದೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲದೆ ಎಂದು ಹೇಳಿದರು.ಟೋಲ್ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಅವರು, 2023-24ರಲ್ಲಿ 64,809.86 ಕೋಟಿ ರು. ಟೋಲ್ ಸಂಗ್ರಹವಾಗಿದೆ. ಇದು ಶೇ.35ರಷ್ಟು ವೃದ್ಧಿಯಾಗಿದೆ ಎಂದು ತಿಳಿಸಿದರು.