ಒಡಿಶಾ: 2 ದಶಕ ಕಳೆದರೂ ಮಾಸದ ನವೀನ್‌ ಜನಪ್ರಿಯತೆ

KannadaprabhaNewsNetwork |  
Published : Apr 07, 2024, 01:45 AM ISTUpdated : Apr 07, 2024, 06:17 AM IST
ಜೈ ಪಾಂಡ | Kannada Prabha

ಸಾರಾಂಶ

5 ವರ್ಷಗಳ ಅವಧಿ ಮುಗಿಯುವುದರೊಳಗೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗಿ ಸರ್ಕಾರಗಳು ಅಧಿಕಾರ ಕಳೆದುಕೊಳ್ಳುವುದು ಸಾಮಾನ್ಯ ಎನ್ನುವ ಇಂದಿನ ದಿನಗಳಲ್ಲಿ ಸತತ 2 ದಶಕಗಳಿಂದ ಜನಪ್ರಿಯತೆ ಉಳಿಸಿಕೊಂಡಿರುವುದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹಿರಿಮೆ.

ಭುವನೇಶ್ವರ: 5 ವರ್ಷಗಳ ಅವಧಿ ಮುಗಿಯುವುದರೊಳಗೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗಿ ಸರ್ಕಾರಗಳು ಅಧಿಕಾರ ಕಳೆದುಕೊಳ್ಳುವುದು ಸಾಮಾನ್ಯ ಎನ್ನುವ ಇಂದಿನ ದಿನಗಳಲ್ಲಿ ಸತತ 2 ದಶಕಗಳಿಂದ ಜನಪ್ರಿಯತೆ ಉಳಿಸಿಕೊಂಡಿರುವುದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹಿರಿಮೆ. 

ತನ್ನ ಮಾಜಿ ಮಿತ್ರಪಕ್ಷ ಬಿಜೆಪಿ ಪ್ರಭಾವ ಹೆಚ್ಚುತ್ತಿರುವ ಹೊರತಾಗಿ ಮತ್ತು ಕಾಂಗ್ರೆಸ್‌ 3ನೇ ಸ್ಥಾನದಲ್ಲಿ ನಿಂತು ಸ್ಪರ್ಧೆ ಒಡ್ಡುತ್ತಿರುವ ಹೊರತಾಗಿಯೂ ಈಗಲೂ ರಾಜ್ಯದಲ್ಲಿ ಬಿಜೆಡಿ ಮೇಲುಗೈ ಸಾಧಿಸಿದೆ.ರಾಜ್ಯದ 21 ಲೋಕಸಭೆಗೆ ಮತ್ತು 147 ವಿಧಾನಸಭಾ ಕ್ಷೇತ್ರಗಳಿಗೆ ಮೇ 13ರಿಂದ ಒಟ್ಟು 4 ಹಂತದಲ್ಲಿ ಚುನಾವಣೆ ನಿಗದಿಯಾಗಿದೆ.

ಬಿಜೆಡಿ ಮೇಲುಗೈ: ಸಿಎಂ ನವೀನ್‌ ಪಟ್ನಾಯಕ್ ಜನಪ್ರಿಯತೆ, 24 ವರ್ಷಗಳ ಆಡಳಿತದ ಹೊರತಾಗಿಯೂ ಕ್ಲೀನ್‌ ಇಮೇಜ್‌ ಈಗಲೂ ಬಿಜೆಡಿಯ ಪ್ರಮುಖ ಮತ್ತು ಅತ್ಯಂತ ದೊಡ್ಡ ಶಕ್ತಿ. ರಾಜ್ಯದ 4.5 ಕೋಟಿ ಮತದಾರರ ಪೈಕಿ 1 ಕೋಟಿಗಿಂತ ಹೆಚ್ಚು ಜನರು ಬಿಜೆಡಿಯ ನೊಂದಾಯಿತ ಕಾರ್ಯಕರ್ತರು ಎಂಬುದು ಪಕ್ಷದ ಹೆಗ್ಗಳಿಕೆ. ಇದರ ಜೊತೆಗೆ ಮಹಿಳಾ ಸಬಲೀಕರಣ ಕುರಿತಾದ ಯೋಜನೆಗಳು ಮಹಿಳಾ ವೋಟ್‌ಬ್ಯಾಂಕ್‌ ಪಕ್ಕಾ ಮಾಡಿದೆ.

ಆದರೆ ಪಕ್ಷದಲ್ಲಿ ನವೀನ್‌ ಹೊರತುಪಡಿಸಿದರೆ ಉಳಿದ ನಾಯಕರು ಯಾರು ಎಂದು ಕೇಳಿದರೆ ಯಾರೂ ಕಾಣಸಿಗರು. ಪಕ್ಷ 100ಕ್ಕಿಂತ ಹೆಚ್ಚು ಶಾಸಕರನ್ನು ಹೊಂದಿದ್ದರೂ, ನವೀನ್‌ ಮುಂದಿಲ್ಲದ ಹೊರತಾಗಿ ಪಕ್ಷವನ್ನು ಮುನ್ನಡೆಸುವ ಒಬ್ಬರೇ ಒಬ್ಬರು ಶಾಸಕರು ಸಿಗಲ್ಲ. ಇನ್ನು ವಿಧಾನಸಭೆಯ 147 ಮತ್ತು ಲೋಕಸಭೆಯ 21 ಸ್ಥಾನಕ್ಕೆ 10000ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ಸೀಟು ಸಿಗದೇ ಇರುವವರು ಬಂಡಾಯ ಏಳುವ ಸಾಧ್ಯತೆ ಪಕ್ಷಕ್ಕೆ ಕಂಟಕ ಆಗಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 112, ಬಿಜೆಪಿ 23, ಕಾಂಗ್ರೆಸ್‌ 9 ಸ್ಥಾನ ಗೆದ್ದಿತ್ತು.

ಬಿಜೆಪಿ ಬಲ ಹೆಚ್ಚಳ:

2009ರಿಂದಲೂ ಬಿಜೆಡಿ ಜೊತೆ ಬಿಜೆಪಿ ಮೈತ್ರಿ ಹೊಂದಿದ್ದರೂ ದೊಡ್ಡ ಸಾಧನೆ ಮಾಡಿದ್ದು ಕಡಿಮೆ. ಆದರೆ ತಮಿಳ್ನಾಡಂತೆ ಇಲ್ಲೂ ಪ್ರತ್ಯೇಕ ಹಾದಿಯಲ್ಲಿ ಯತ್ನವನ್ನು ಇದೀಗ ಬಿಜೆಪಿ ಮಾಡುತ್ತಿದೆ. ಪರಿಣಾಮ ಪಕ್ಷದ ನೆಲೆ ನಿಧಾನವಾಗಿ ವಿಸ್ತರಿಸುತ್ತಿದೆ. ಅದೀಗ ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ಮತ್ತು ಕೇಂದ್ರದ ಯೋಜನೆಗಳೇ ಬಿಜೆಪಿ ಅಸ್ತ್ರಗಳು. ಇನ್ನು ಇತ್ತೀನ ರಾಮಮಂದಿರ ಉದ್ಘಾಟನೆ ಬಿಜೆಪಿ ಬಲ ಹೆಚ್ಚಿಸಿದೆ. ಆದರೆ ಬಿಜೆಪಿಗೆ ಸ್ಥಳೀಯ ನಾಯಕರು ಇಲ್ಲದೇ ಇರುವುದು ಹಿನ್ನಡೆ. 

ಕಾಂಗ್ರೆಸ್‌:

ರಾಜ್ಯದಲ್ಲಿ ಕಳೆದ 24 ವರ್ಷಗಳಿಂದ ಕಾಂಗ್ರೆಸ್‌ ಅಧಿಕಾರದಲ್ಲಿಲ್ಲ. 2019ರವರೆಗೂ ಪ್ರಮುಖ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಇದೀಗ ಆ ಪಟ್ಟವನ್ನೂ ಕಳೆದುಕೊಂಡಿದೆ. ಅತಿಹಳೆಯ ಪಕ್ಷ, ಎಲ್ಲರಿಗೂ ಪರಿಚಿತ ಎಂಬುದೇ ಪಕ್ಷಕ್ಕಿರುವ ಏಕೈಕ ಆಸರೆ. ರಾಜ್ಯದ 314 ಬ್ಲಾಕ್‌ಗಳಲ್ಲಿ ಪಕ್ಷ ಇನ್ನೂ ತನ್ನ ಕಚೇರಿ ಹೊಂದಿದೆ ಎಂಬುದು ಅದರ ಅಸ್ತಿತ್ವ ಇನ್ನು ಚೆನ್ನಾಗಿಯೇ ಇದೆ ಎಂಬುದರ ಉದಾಹರಣೆ. ಆದರೆ ಸ್ಥಳೀಯರ ನಾಯಕರಲ್ಲಿನ ವೈಮನಸ್ಯ ಪಕ್ಷದ ಗೆಲುವಿಗೆ ಅಡ್ಡಿ ಮಾಡುವ ಭೀತಿ ಇದೆ.

ಸ್ಪರ್ಧೆ ಹೇಗೆ?ಈ ಬಾರಿ ಬಿಜೆಡಿ ಮತ್ತು ಬಿಜೆಪಿ ಮೈತ್ರಿ ಇನ್ನೇನು ಆಗಿಯೇ ಹೋಯಿತು ಎನ್ನುವ ಹಂತ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಮೈತ್ರಿ ಮುರಿದು ಬಿದ್ದ ಕಾರಣ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕೆ ಇಳಿಯಲು ನಿರ್ಧರಿಸಿವೆ. ಬಿಜೆಡಿಗೆ ಸಿಎಂ ನವೀನ್‌ ಪಟ್ನಾಯಕ್‌ 2 ದಶಕಗಳ ಆಡಳಿತ, ಅವರ ಜನಪ್ರಿಯತೆ, ಕ್ಲಿನ್‌ ಇಮೇಜ್‌ ಟ್ರಂಪ್‌ ಕಾರ್ಡ್‌. ಮತ್ತೊಂದೆಡೆ ಬಿಜೆಪಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನೇ ನಂಬಿಕೊಂಡು ಚುನಾವಣಾ ಕಣಕ್ಕೆ ಇಳಿದಿದೆ. ಇನ್ನು ಕಾಂಗ್ರೆಸ್‌ ಕಥೆ ಅಷ್ಟಕಷ್ಟೇ. ಒಂದೂವರೆ ದಶಕದಿಂದ ವಿಪಕ್ಷದಲ್ಲಿದ್ದ ಪಕ್ಷ ಇದೀಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕೇಂದ್ರ ನಾಯಕರಿಗೆ ರಾಜ್ಯ ಬೇಡವಾಗಿದೆ. ರಾಜ್ಯ ನಾಯಕರ ಕಚ್ಚಾಟ ನಿಂತಿಲ್ಲ. ಇಷ್ಟೆಲ್ಲಾ ಆಗಿ ಮುಗಿದ ಮೇಲೆ ಅವರು ಹೋರಾಟದ ಬಗ್ಗೆ ಯೋಜಿಸಬೇಕಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ