ಇ-ಸ್ಕೂಟರ್‌ ಲೋಪಗಳ ಬಗ್ಗೆ ದೂರುಗಳ ನಡುವೆಯೇ ಓಲಾ ಇಲೆಕ್ಟ್ರಿಕ್‌ ಕಂಪನಿಯಲ್ಲಿ 500 ಉದ್ಯೋಗ ಕಡಿತ

KannadaprabhaNewsNetwork |  
Published : Nov 23, 2024, 12:33 AM ISTUpdated : Nov 23, 2024, 04:41 AM IST
ಓಲಾ | Kannada Prabha

ಸಾರಾಂಶ

ಇ-ಸ್ಕೂಟರ್‌ಗಳಲ್ಲಿ ಲೋಪಗಳ ಬಗ್ಗೆ ದೂರುಗಳು ಕೇಳಿಬರುತ್ತಿರುವ ನಡುವೆಯೇ ಓಲಾ ಇಲೆಕ್ಟ್ರಕ್‌ ಕಂಪನಿ 500 ಉದ್ಯೋಗಗಳನ್ನು ವಜಾ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ಇ-ಸ್ಕೂಟರ್‌ಗಳಲ್ಲಿ ಲೋಪಗಳ ಬಗ್ಗೆ ದೂರುಗಳು ಕೇಳಿಬರುತ್ತಿರುವ ನಡುವೆಯೇ ಓಲಾ ಇಲೆಕ್ಟ್ರಕ್‌ ಕಂಪನಿ 500 ಉದ್ಯೋಗಗಳನ್ನು ವಜಾ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ಹೇಳಿವೆ.

‘ಇತ್ತೀಚೆಗೆ ಕಂಪನಿಯ ಸ್ಕೂಟರ್‌ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು ಹಾಗೂ ಸ್ಕೂಟರ್‌ ನಿರ್ವಹಣೆ ಸಂಬಂಧ ನಾನಾ ಪ್ರಶ್ನೆಗಳು ಎದ್ದಿದ್ದವು. ಹೀಗಾಗಿ ಅನಗತ್ಯವಾಗಿರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದೆ ಈ ಪ್ರಕ್ರಿಯೆ 2024-25ರ ಸೆಪ್ಟೆಂಬರ್‌ನ ತ್ರೈಮಾಸಿಕದಲ್ಲಿ ಆರಂಭವಾಗಿದ್ದು, ಅನಗತ್ಯ ವಾಗಿರುವ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಈ ಪ್ರಕ್ರಿಯೆ ಈ ತಿಂಗಳ ಕೊನೆ ಮುಕ್ತಾಯವಾಗಲಿದೆ’ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಓಲಾ ದ್ವಿಚಕ್ರ ವಾಹನಗಳಲ್ಲಿ ಲೋಪಗಳ ಬಗ್ಗೆ ದೂರು ಬಂದ ಹಿನ್ನೆಲೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ತನಿಖೆಗೆ ಆದೇಶಿಸಿತ್ತು.

ದೋಣಿಗೆ ನೌಕಾಪಡೆ ಜಲಾಂತರ್ಗಾಮಿ ಡಿಕ್ಕಿ: 2 ಮೀನುಗಾರರು ನಾಪತ್ತೆ

ನವದೆಹಲಿ: ಗೋವಾ ಕರಾವಳಿಯ ಬಳಿ 13 ಮೀನುಗಾರರಿದ್ದ ಮೀನುಗಾರಿಕಾ ದೋಣಿಗೆ ಭಾರತೀಯ ನೌಕಾಪಡೆಯ ಜಲಂತರ್ಗಾಮಿ ನೌಕೆ ಹೊಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.ಗೋವಾ ಕರಾವಳಿಯಿಂದ 70 ನಾಟಿಕಲ್‌ ಮೈಲು ದೂರದಲ್ಲಿ ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿಗೆ ಮಾರ್ಥೋಮಾ ಹೆಸರಿನ ಮೀನುಗಾರಿಕಾ ಬೋಟ್‌ ಡಿಕ್ಕಿಯಾಗಿದೆ. ಘಟನೆ ಬಳಿಕ ಕಾರ್ಯಪ್ರವತ್ತರಾದ ಭಾರತೀಯ ನೌಕಾಪಡೆಯು ಮೀನುಗಾರರ ರಕ್ಷಣೆಗೆ 6 ಹಡಗು, ವಿಮಾನಗಳನ್ನು ನಿಯೋಜಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ 11 ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.ಈ ಘಡನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಸಚಿವಾಲಯ ತನಿಖೆಗೆ ಆದೇಶಿಸಿದೆ.

ಕೇರಳ ವಕ್ಫ್ ಭೂಮಿ ವಿವಾದ: ತನಿಖೆಗೆ ನ್ಯಾಯಾಂಗ ಆಯೋಗ ರಚನೆ

ತಿರುವನಂತಪುರಂ: ಕೇರಳದ ಮುನಂಬಂ ಎಂಬಲ್ಲಿ 600 ಕುಟುಂಬಗಳ ಜಮೀನನ್ನು ವಕ್ಫ್‌ ಮಂಡಳಿ ತನ್ನದು ಎಂಬ ಹಕ್ಕು ಸಾಧಿಸಿದ ವಿವಾದದ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್, ನ್ಯಾಯಾಂಗ ಆಯೋಗ ನೇಮಿಸಲು ನಿರ್ಧರಿಸಿದ್ದಾರೆ,ಸುಮಾರು 500 ಎಕರೆ ವಕ್ಫ್‌ ಭೂಮಿ ಕಬಳಿಕೆ ಆಗಿದೆ ಎಂದು ಆರೋಪಿಸಿ ಹಲವು ಕುಟುಂಬಗಳಿಗೆ ಮಂಡಳಿ ನೋಟಿಸ್‌ ನೀಡಿತ್ತು. ಹೀಗಾಗಿ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಡೆಸಿದ ವಿಜಯನ್‌, ನ್ಯಾ। ಸಿಎನ್‌ ರಾಮಚಂದ್ರನ್ ನಾಯರ್‌ ಅಧ್ಯಕ್ಷತೆಯ ಆಯೋಗ ರಚಿಸಿದ್ದಾರೆ.ಬಗ್ಗೆ ಕಾನೂನು ಸಚಿವ ಪಿ. ರಾಜೀವ್ ಮಾಹಿತಿ ನೀಡಿದ್ದು, ‘ಮುನಂಬಂನಿಂದ ಯಾರನ್ನೂ ಹೊರ ಹಾಕುವುದಿಲ್ಲ. ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಿಲ್ಲಿಸುವಂತೆ ವಕ್ಫ್‌ಗೆ ಸೂಚಿಸಲಾಗಿದೆ’ ಎಂದರು.

ಬ್ರಿಟನ್‌ನ 2ನೇ ದೊಡ್ಡ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಭೀತಿ

ಲಂಡನ್‌: ಬ್ರಿಟನ್‌ನ 2ನೇ ದೊಡ್ಡ ವಿಮಾನ ನಿಲ್ದಾಣವಾದ ಗ್ಯಾಟ್ವಿಕ್‌ನಲ್ಲಿ ಅಜ್ಞಾತ ಬ್ಯಾಗ್‌ ಪತ್ತೆ ಆಗಿದ್ದು ಬಾಂಬ್‌ ಇರುವ ಬಗ್ಗೆ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅದರ ದಕ್ಷಿಣ ಟರ್ಮಿನಲ್‌ನಲ್ಲಿನ ಪ್ರಯಾಣಿಕರನ್ನು ಸ್ಥಳಾಂತರಗೊಳಿಸಲಾಗಿದೆ.‘ಆ ಕಟ್ಟಡದೊಳಗೆ ಪ್ರಯಾಣಿಕರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ. ಅಲ್ಲಿಯ ವರೆಗೆ ಜನ ತಮ್ಮ ಪ್ರಯಾಣವನ್ನು ಮುಂದೂಡಬೇಕು’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ, ಮುಂದಿನ ಆದೇಶದ ವರೆಗೆ ಸಮೀಪದ ಗಾಟ್ವಿಕ್ ರೈಲು ನಿಲ್ದಾಣದಿಂದ ರೈಲು ಸೇವೆ ಇರುವುದಿಲ್ಲ ಎಂದು ತಿಳಿಸಿದ್ದಾರೆ

ಸಂವಿಧಾನದಲ್ಲಿ ಜಾತ್ಯತೀತ ಪದ: ನಾಡಿದ್ದು ತೀರ್ಪುನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಗೊಂಡಿರುವ ‘ಜಾತ್ಯತೀತತೆ’, ‘ಸಮಗ್ರತೆ’ ಮತ್ತು ‘ಸಮಾಜವಾದ’ ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕೇ ? ಬೇಡವೇ ಎನ್ನುವ ಬಗ್ಗೆ ಇದೇ ತಿಂಗಳ 25 ರಂದು ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್‌ ಜೈನ್ ಮತ್ತಿತ್ತರು ಜಾತ್ಯತೀತತೆ, ಸಮಗ್ರತೆ ಮತ್ತು ಸಮಾಜವಾದ ಎನ್ನುವ ಅಂಶವನ್ನು 1976ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನಕ್ಕೆ ಸೇರಿಸಲಾಗಿತ್ತು. ಇದನ್ನು ಸಂವಿಧಾನದಿಂದ ತೆಗೆದು ಹಾಕಬೇಕು ಎಂದು ಅರ್ಜಿ ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಸಂಜೀವ್ ಖನ್ನಾ ನೇತೃತ್ವದ ಪೀಠ, ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಸತ್‌ ಮಾಡಿರುವುದನ್ನೆಲ್ಲ ಶೂನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೂ ಈ ಪ್ರಕರಣದ ಬಗ್ಗೆ ನ.25ರಂದು ತೀರ್ಪು ನೀಡುತ್ತೇವೆ’ ಎಂದಿತು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ