ಲಖನೌ: ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ, ಅಂಗಡಿಯ ಮಾಲೀಕನೊಬ್ಬ ತನ್ನದೇ ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಸಿಹಿತಿನಿಸನ್ನು ತಿನ್ನಲು ನಿರಾಕರಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹಮೀರಪುರದ ಬೌದಾನಾ ಪಟ್ಟಣದಲ್ಲಿ ನಡೆದಿದೆ. ಇದು ಆಹಾರ ಸುರಕ್ಷತೆಯ ಬಗ್ಗೆ ಭಾರಿ ಕಳವಳ ಉಂಟುಮಾಡಿದೆ. ಹಬ್ಬದ ಋತುವಿನ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಮತ್ತು ಸ್ಥಳೀಯ ಆಡಳಿತದ ಜಂಟಿ ತಂಡವೊಂದು ಸಿಹಿತಿಂಡಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸುತ್ತಿತ್ತು. ಮಾ ವೈಷ್ಣೋ ಜೈ ಭವಾನಿ ಸ್ವೀಟ್ ಹೌಸ್ನ ಪರಿಶೀಲನೆಯ ವೇಳೆ, ಮಾಲೀಕ ಅನ್ನಿ ಬಾಬಾಗೆ ಬೆಳ್ಳಿಯ ಹಾಳೆ ಹೊದಿಸಿದ ಸಿಹಿತಿಂಡಿಯ ತುಂಡೊಂದನ್ನು ತಿನ್ನಲು ಹೇಳಿದ್ದಾರೆ. ಎಷ್ಟೇ ಒತ್ತಾಯಿಸಿದರೂ ಆತ ನಿರಾಕರಿಸಿದ್ದಾನೆ. ಈ ಬಗ್ಗೆ ಆತಂಕಗೊಂಡ ಅಧಿಕಾರಿಗಳು, ಇನ್ನೂ ಹಲವು ಅಂಗಡಿಗಳ ಸಿಹಿತಿನಿಸುಗಳನ್ನು ಪರೀಕ್ಷೆಗೆ ಕಳಿಸಿದ್ದಾರೆ.