ಪಹಲ್ಗಾಂ ದಾಳಿ : 26 ಮಂದಿಯನ್ನು ಭೀಕರವಾಗಿ ಹತ್ಯೆಗೈದ 3 ಉಗ್ರರ ರೇಖಾಚಿತ್ರ ಬಿಡುಗಡೆ

KannadaprabhaNewsNetwork | Updated : Apr 24 2025, 04:36 AM IST

ಸಾರಾಂಶ

26 ಮಂದಿಯನ್ನು ಭೀಕರವಾಗಿ ಹತ್ಯೆಗೈದ ಮೂವರು ಶಂಕಿತ ಉಗ್ರರ ರೇಖಾ ಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ.

ಶ್ರೀನಗರ್‌: 26 ಮಂದಿಯನ್ನು ಭೀಕರವಾಗಿ ಹತ್ಯೆಗೈದ ಮೂವರು ಶಂಕಿತ ಉಗ್ರರ ರೇಖಾ ಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ. ದಾಳಿಯಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಆಧರಿಸಿ ಚಿತ್ರಗಳನ್ನು ಬಿಡಿಸಲಾಗಿದೆ. 

ಆ ಮೂವರ ಹೆಸರು ಆಸಿಫ್‌ ಫೌಜಿ (ಮೂಸಾ), ಸುಲೇಮಾನ್‌ ಶಾ (ಯೂನಸ್‌) ಮತ್ತು ಅಬು ತಲ್ಹಾ (ಆಸಿಫ್‌) ಎಂದು ಹೇಳಲಾಗಿದೆ.ಇದೇ ವೇಳೆ, ಅತ್ತ 4 ಉಗ್ರರಿರುವ ಫೋಟೋ ಒಂದು ಹರಿದಾಡುತ್ತಿದ್ದು, ಅದರಲ್ಲಿರುವ ಮೂವರ ಚಹರೆಯೊಂದಿಗೆ ರೇಖಾ ಚಿತ್ರಗಳು ಹೋಲಿಕೆಯಾಗುತ್ತಿವೆ. ಅದರಲ್ಲಿ ಜುನೈದ್‌ ಎಂಬುವನನ್ನು ಈ ಮೊದಲೇ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ.

 ಈ ಉಗ್ರರು ಕಳೆದೊಂದು ತಿಂಗಳಿಂದ ಆ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅಂತೆಯೇ, ಫೂಂಛ್‌ನಲ್ಲಿ ನಡೆದ ದಾಳಿಯ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಉಗ್ರರ ಮಾಹಿತಿ ಕೊಟ್ಟವರಿಗೆ ₹20 ಲಕ್ಷ ಬಹುಮಾನ

ಶ್ರೀನಗರ: ಪಹಲ್ಗಾಂ ಕ್ರೂರದಾಳಿಗೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಗಳಿಕೆ ಕೆಲ ಉಗ್ರರ ಫೋಟೋಗಳನ್ನು ತೋರಿಸಿ ಅವರಿಂದ ಪಡೆದ ಮಾಹಿತಿಯ ಆಧಾರದಲ್ಲಿ ಭದ್ರತಾ ಸಂಸ್ಥೆಗಳು 3 ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ದಾಳಿಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ಘೋಷಿಸಿದ್ದಾರೆ.ರೇಖಾ ಚಿತ್ರದಲ್ಲಿರುವ ಉಗ್ರರು ಆಸಿಫ್‌ ಫೌಜಿ (ಮೂಸಾ), ಸುಲೇಮಾನ್‌ ಶಾ (ಯೂನಸ್‌) ಮತ್ತು ಅಬು ತಲ್ಹಾ (ಆಸಿಫ್‌) ಎಂದು ಹೇಳಲಾಗಿದೆ.

ಭಾರತ ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ: ಪಾಕ್ ಪಂಜಾಬ್‌ ಸಚಿವೆ

ಲಾಹೋರ್‌: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿನ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ತನ್ನ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಚಿವೆ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿರುವ ಅಲ್ಲಿನ ಸಚಿವೆ ಅಜ್ಮಾ ಬೊಖಾರಿ, ಸುಳ್ಳು ಆರೋಪದ ಮೇಲೆ ಭಾರತ ನಡೆಸುವ ಯಾವುದೇ ದುಸ್ಸಾಹಸವು ಭೀಕರ ಪರಿಣಾಮಗಳನ್ನು ಬೀರುತ್ತದೆ. ಕಳೆದ ಬಾರಿ ಅಭಿನಂದನ್‌ ವರ್ತಮಾನ್ ಅವರಿಗೆ ಚಹಾ ನೀಡಿದ್ದೆವು. ಈ ಬಾರಿ ಅಷ್ಟು ಕನಿಕರ ತೋರುವುದಿಲ್ಲ. ಅತಿಥಿ ಒಮ್ಮೆ ಬಂದರೆ ಸಹನೀಯ. ಆದರೆ ಪ್ರತಿ ಬಾರಿ ಬಂದರೆ, ಪಾಕಿಸ್ತಾನದ ಸೇನೆ, ಸರ್ಕಾರ ಮತ್ತು ಜನರು ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ’ ಎಂದು ಗುಡುಗಿದ್ದಾರೆ.

4 ಶಂಕಿತ ಉಗ್ರರ ಫೋಟೋ ವೈರಲ್‌

ಶ್ರೀನಗರ: ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆ ಆಧಾರದಲ್ಲಿ ಭದ್ರತಾ ಸಂಸ್ಥೆಗಳು 3 ಉಗ್ರರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, 4 ಉಗ್ರರಿರುವ ಫೋಟೋ ಒಂದು ಹರಿದಾಡತೊಡಗಿದೆ.ಫೋಟೋದಲ್ಲಿರುವ ಮೂವರ ಚಹರೆಯೊಂದಿಗೆ ರೇಖಾ ಚಿತ್ರಗಳು ಹೋಲಿಕೆಯಾಗುತ್ತಿವೆ. ಅದರಲ್ಲಿ ಜುನೈದ್‌ ಎಂಬುವನನ್ನು ಈ ಮೊದಲೇ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ಉಗ್ರರು ಕಳೆದೊಂದು ತಿಂಗಳಿಂದ ಆ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಅಂತೆಯೇ, ಫೂಂಛ್‌ನಲ್ಲಿ ನಡೆದ ದಾಳಿಯ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಂಗೆ ಎನ್‌ಐಎ ತಂಡ ಭೇಟಿ: ಮಾಹಿತಿ ಸಂಗ್ರಹ

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಸಂಬಂಧಿಸಿದಂತೆ ಇನ್ಸಪೆಕ್ಟರ್‌ ಜನರಲ್ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳ ತಂಡ ಬುಧವಾರ ಪಹಲ್ಗಾಂಗೆ ಭೇಟಿ ನೀಡಿದೆ.ಮಂಗಳವಾರ ನಡೆದ ಭೀಕರ ದಾಳಿಯ ತನಿಖೆಯನ್ನು ಈಗಾಗಲೇ ಕಾಶ್ಮೀರದ ಸ್ಥಳೀಯ ಪೊಲೀಸರು ನಡೆಸುತ್ತಿದ್ದಾರೆ. ಉಗ್ರ ದಾಳಿ ಆಗಿರುವ ಕಾರಣ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆದು ತಾನೂ ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದೆ.

ಲಷ್ಕರ್‌ ಎ ತೊಯ್ಬಾ ಸಂಘಟನೆಯ ನಂಟು ಹೊಂದಿದ್ದ ದ ರೆಸಿಸ್ಟನ್ಸ್‌ ಫ್ರಂಟ್‌ (ಟಿಆರ್‌ಎಫ್) ಈ ದಾಳಿಯ ಹೊಣೆ ಹೊತ್ತಿದೆ. 6-7 ಉಗ್ರರು ದಾಳಿ ನಡೆಸಿರುವ ಶಂಕೆಯಿದೆ.

ನರಮೇಧದ ಮಾಸ್ಟರ್‌ಮೈಂಡ್‌ ಕಸೂರಿ?

-ಲಷ್ಕರ್‌ನ ಕಸೂರಿ ರೂವಾರಿ?

ಕುಲ್ಗಾಂ: ಲಷ್ಕರ್‌ ಎ ತೊಯ್ಬಾ ಸಂಘಟನೆಯ ಕಮಾಂಡರ್‌ ಸೈಫುಲ್ಲಾ ಕಸೂರಿ ಅಲಿಯಾಸ್‌ ಖಾಲಿದ್‌ ಎಂಬಾತ ಪಹಲ್ಗಾಂ ಅಮಾನವೀಯ ದಾಳಿಯ ಮಾಸ್ಟರ್‌ಮೈಂಡ್‌ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ. ಈತನೊಂದಿಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಕೈಜೋಡಿಸಿರುವ ಶಂಕೆಯೂ ಇದೆ.ಗುಪ್ತಚರ ಸಂಸ್ಥೆಗಳ ಪ್ರಕಾರ, ಇತ್ತೀಚೆಗೆ ಗಡಿನುಸುಳಿ ಕಾಶ್ಮೀರದ ಕಣಿವೆ ಪ್ರವೇಶಿಸಿದ್ದ 6-7 ಉಗ್ರರು ಈ ದಾಳಿ ಮಾಡಿದ್ದಾರೆ.

 ಭಾರತಕ್ಕೆ ಬೇಕಾಗಿರುವ (ವಾಂಟೆಡ್‌) ಉಗ್ರ ಹಫೀಜ್ ಸಯೀದ್‌ನ ಸಹಾಯಕನೂ ಆಗಿದ್ದ ಕಸೂರಿಯ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.ಘಟನೆ ನಡೆದ ಕೆಲ ಗಂಟೆಗಳ ಬಳಿಕ ದಾಳಿಯ ಹೊಣೆಯನ್ನು ಲಷ್ಕರ್‌ ಎ ತೊಯ್ಬಾ ಸಂಘಟನೆಯ ಅಧೀನ ಸಂಘಟನೆಯಾದ ದ ರೆಸಿಸ್ಟೆಂನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಹೊತ್ತುಕೊಂಡಿದೆ.

Share this article