ಅಮೆರಿಕ-ಇರಾನ್‌ ಕದನವಿರಾಮಕ್ಕೆ ಪಾಕ್‌ ಮಧ್ಯಸ್ಥಿಕೆ?

KannadaprabhaNewsNetwork |  
Published : Mar 25, 2026, 04:15 AM ISTUpdated : Mar 25, 2026, 05:10 AM IST
Pakistan PM Shehbaz Sharif

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ತಗ್ಗಿಸಲು ಪಾಕಿಸ್ತಾನ ಮಧ್ಯಸ್ಥಿಕೆಯ ಪಾತ್ರ ವಹಿಸಲು ಯತ್ನಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ‘ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್‌ ಸಂಧಾನ ಸಭೆಗೆ ಆತಿಥ್ಯ ವಹಿಸಲು ಸಿದ್ಧ’ ಎಂದು ಘೋಷಿಸಿದ್ದಾರೆ.

 ಇಸ್ಲಾಮಾಬಾದ್ : ಮಧ್ಯಪ್ರಾಚ್ಯದಲ್ಲಿ ಯುದ್ಧ ತಗ್ಗಿಸಲು ಪಾಕಿಸ್ತಾನ ಮಧ್ಯಸ್ಥಿಕೆಯ ಪಾತ್ರ ವಹಿಸಲು ಯತ್ನಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ‘ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್‌ ಸಂಧಾನ ಸಭೆಗೆ ಆತಿಥ್ಯ ವಹಿಸಲು ಸಿದ್ಧ’ ಎಂದು ಘೋಷಿಸಿದ್ದಾರೆ. 

ಪಾಕಿಸ್ತಾನ ಅಮೆರಿಕ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌ ಜತೆಗೂ ಉತ್ತಮ ಸಂಬಂಧ ಹೊಂದಿದೆ. ಅತ್ತ ಇರಾನ್‌ ಜತೆಗೂ ನಂಟು ಇದೆ. ಇದನ್ನು ಬಳಸಿಕೊಂಡು ಸಂಧಾನಕಾರನಾಗಿ ಕಾರ್ಯನಿರ್ವಹಿಸಲು ಯತ್ನಿಸುತ್ತಿದೆ ಎಂದು ಗೊತ್ತಾಗಿದೆ.ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದರೆ. ಪ್ರಧಾನಿ ಮುಹಮ್ಮದ್ ಶೆಹಬಾಜ್ ಷರೀಫ್ ಸೋಮವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಇದರ ನಡುವೆಯೇ ಟ್ರಂಪ್ 5 ದಿನದ ಕದನವಿರಾಮ ಘೋಷಿಸಿದ್ದು ಗಮನಾರ್ಹ.

ಸಂಧಾನಕ್ಕೆ ಪಾಕ್‌ ಯತ್ನವೇಕೆ?:

ಗಲ್ಫ್‌ನಲ್ಲಿ ಇಂಧನ ಮೂಲಸೌಕರ್ಯದ ಮೇಲಿನ ದಾಳಿ ನಡೆಯುತ್ತಿರುವುದು ಪಾಕಿಸ್ತಾನಕ್ಕೆ ನುಂಗಲಾಗದ ತುತ್ತಾಗುತ್ತಿದೆ. ಏಕೆಂದರೆ ಭಾರತದಂತೆ ಪಾಕ್‌ ಮಧ್ಯಪ್ರಾಚ್ಯದ ಅನಿಲ ಹಾಗೂ ಪೆಟ್ರೋಲ್-ಡೀಸೆಲ್‌ನ ಫಲಾನುಭವಿಯಾಗಿದೆ. ಈ ಮಧ್ಯೆ

ಯುದ್ಧವು ಅಪಾಯಕಾರಿ ಹಂತವನ್ನು ಪ್ರವೇಶಿಸುತ್ತಿರುವುದರಿಂದ ಪಾಕ್‌ಗೆ ಇಂಧನ ಕೊರತೆ ಆಗುತ್ತಿದೆ. ದೇಶದಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಹೀಗಾಗಿ ಇಂಧನ ಸಂರಕ್ಷಣೆಗಾಗಿ ಶಾಲೆಗಳನ್ನು ಮುಚ್ಚುವುದು ಮತ್ತು ಕಚೇರಿಗಳಿಗೆ ವರ್ಕ್‌ ಫ್ರಂ ಹೋಂ ಅವಕಾಶ ನೀಡಿ, ಕೋವಿಡ್ ಯುಗದ ಕಠಿಣ ಕ್ರಮಗಳತ್ತ ಮುಖ ಮಾಡಿದೆ. ಹಲವು ಟೂರ್ನಿಗಳು ರದ್ದಾಗಿ ಕ್ರೀಡಾಕ್ಷೇತ್ರಕ್ಕೂ ಯುದ್ಧದ ಹೊಡೆತ ಬಿದ್ದಿದೆ. ಹೀಗಾಗಿ ಪಾಕ್‌ ಶತಾಯ ಗತಾಯ ಯುದ್ಧ ನಿಲ್ಲಿಸಲು ಹವಣಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಪಾಕ್‌ ಸಂಧಾನದ ಬಗ್ಗೆ ಪ್ರತಿಕ್ರಿಯೆಗೆ ಅಮೆರಿಕ ನಕಾರ

ವಾಷಿಂಗ್ಟನ್: ‘ಪಾಕಿಸ್ತಾನವು ಇರಾನ್‌-ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸುತ್ತಿದೆ’ ಎಂಬ ವರದಿಗಳಿಗೆ ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್‌ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ‘ಸಂಧಾನಗಳನ್ನು ನಾವು ಪತ್ರಿಕೆಗಳ ಮೂಲಕ ನಡೆಸುವುದಿಲ್ಲ. ಏನೇ ಇದ್ದರೂ ಶ್ವೇತಭವನ ಘೋಷಣೆ ಮಾಡುತ್ತದೆ. ಅಂತೆಕಂತೆಗಳಿಗೆ ಆಸ್ಪದ ನೀಡಲ್ಲ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇ.ಡಿ. ದಾಳಿಗೆ ಅಡ್ಡಿ : ದೀದಿಗೆ ಸುಪ್ರೀಂ ಕೋರ್ಟ್‌ ಗುದ್ದು
ಹಿಂದೂ, ಸಿಖ್‌, ಬೌದ್ಧ ಧರ್ಮಕ್ಕಷ್ಟೇ ಎಸ್ಸಿ ಸ್ಥಾನ : ಸುಪ್ರೀಂಕೋರ್ಟ್‌