ಇಸ್ಲಾಮಾಬಾದ್: ಭಾರತದ ವಿರುದ್ಧ ಉಗ್ರರನ್ನು ಛೂಬಿಟ್ಟು ದಾಳಿ ಮಾಡಿಸಿದ್ದಲ್ಲದೆ ಅಣ್ವಸ್ತ್ರ ತೋರಿಸಿ ಪೌರುಷ ಪ್ರದರ್ಶಿಸಿ ಕೊನೆಗೆ ಕದನ ವಿರಾಮಕ್ಕಾಗಿ ಅಂಗಲಾಚಿದ್ದ ಪಾಕಿಸ್ತಾನ ಇದೀಗ, ಉಭಯ ದೇಶಗಳ ನಡುವೆಯಿರುವ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆಗೆ ಬರುವಂತೆ ಭಾರತದೆದುರು ಗೋಗರೆಯತೊಡಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಂಬಾಲಾ ವಾಯುನೆಲೆ ಭೇಟಿ ನೀಡಿದ್ದನ್ನು ನಕಲಿಸುವಂತೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕಾಮ್ರಾ ವಾಯುನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದ ಪಾಕ್ ಪ್ರಧಾನಿ ಷಹಬಾಜ್ ಷರೀಫ್, ‘ಶಾಂತಿಗಾಗಿ ನಾವು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ’ ಎಂದಿದ್ದಾರೆ. ಜತೆಗೆ, ಶಾಂತಿ ಮಾತುಕತೆಯಲ್ಲಿ ಕಾಶ್ಮೀರದ ವಿಷಯವೂ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಅತ್ತ ಪ್ರಧಾನಿಯ ರಾಗವನ್ನೇ ಹಾಡಿರುವ ಉಪಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಕ್ ದಾರ್, ‘ಮೇ 18ರ ವರೆಗೆ ಕದನವಿರಾಮ ಘೋಷಣೆಯಾಗಿದೆಯಾದರೂ, ನೆರೆದೇಶಗಳಾಗಿರುವ ನಮ್ಮ ನಡುವಿನ ಸಮಸ್ಯೆಗಳು ಬಗೆಹರಿಯಬೇಕಾದರೆ ರಾಜಕೀಯ ಮಾತುಕತೆ ಅತ್ಯಗತ್ಯ. ಉಭಯ ದೇಶಗಳ ನಡುವೆ ಇರುವ ವಿದಾದಾತ್ಮಕ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು’ ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ.
ಭಾರತದ ನಿಲುವೇನು?:
ಈ ಮೊದಲು ಉಭಯ ದೇಶಗಳ ನಡುವೆ ಹಲವು ಬಾರಿ ಮಾತುಕತೆ ನಡೆದಿದ್ದರೂ, ಪ್ರತೀ ಬಾರಿ ಗಡಿಯಲ್ಲಿ ಕ್ಯಾತೆ ತೆಗೆದ ಅಥವಾ ಭಾರತದೊಳಗೆ ಅಶಾಂತಿ ಸೃಷ್ಟಿಸಿದ ಇತಿಹಾಸವುಳ್ಳ ಪಾಕಿಸ್ತಾನದ ಜತೆ ಮಾತುಕತೆ ನಡೆದರೆ ಶಾಂತಿಸ್ಥಾಪನೆಯಾಗುವ ಭರವಸೆ ಭಾರತಕ್ಕಿಲ್ಲ. ಆದ್ದರಿಂದ ಭಾರತ, ‘ಪಾಕ್ ಜತೆ ಮಾತುಕತೆ ನಡೆದರೆ ಅದು ಕೇವಲ ಪಿಒಕೆ ಮರಳಿಸುವಿಕೆ ಮತ್ತು ಉಗ್ರವಾದದ ಬಗೆಗಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.