ಏನಿದು ಪ್ರಕರಣ?- ಉತ್ತರಾಖಂಡದ ಮಳಿಗೆಯೊಂದರಲ್ಲಿ ಸೋನ್ಪಾಪಡಿ ಮಾರಾಟಕ್ಕಿಡಲಾಗಿತ್ತು- ಅದರ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿ ಲ್ಯಾಬ್ಗೆ ಕಳುಹಿಸಲಾಗಿತ್ತು- ಪ್ರಯೋಗಾಲಯದ ಪರೀಕ್ಷೆಯಲ್ಲಿ ಆ ಸಿಹಿ ತಿನಿಸು ಗುಣಮಟ್ಟ ಫೇಲಾಗಿತ್ತು- ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ವಿಚಾರಣೆ ನಡೆದು ತೀರ್ಪು ಬಂದಿದೆ- ಸೋನ್ ಪಾಪಡಿ ಮಾರಾಟಗಾರ, ಹಂಚಿಕೆದಾರ, ಕಂಪನಿ ಮ್ಯಾನೇಜರ್ಗೆ ಜೈಲು
ಡೆಹ್ರಾಡೂನ್: ಕಳಪೆ ಗುಣಮಟ್ಟದ ಸಿಹಿ ಉತ್ಪನ್ನ ಮಾರಾಟ ಮಾಡಿದ ಪ್ರಕರಣದಲ್ಲಿ ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿ ಸಂಸ್ಥೆಯ ಹಿರಿಯ ಅಧಿಕಾರಿ, ಉತ್ಪನ್ನದ ಹಂಚಿಕೆದಾರ ಮತ್ತು ಉತ್ಪನ್ನ ಮಾರಾಟ ಮಾಡಿದ ಅಂಗಡಿ ಮಾಲೀಕಗೆ ಉತ್ತರಾಖಂಡದ ನ್ಯಾಯಾಲಯ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.ಇತ್ತೀಚೆಗಷ್ಟೇ ಉತ್ತರಾಖಂಡ ಸರ್ಕಾರ ಪತಂಜಲಿ ಆಯುರ್ವೇದ ಕಂಪನಿಯ 14 ಉತ್ಪನ್ನಗಳ ಉತ್ಪಾದನೆಯ ಲೈಸೆನ್ಸ್ ರದ್ದು ಮಾಡಿತ್ತು. ಅದರ ಬೆನ್ನಲ್ಲೇ ಕಂಪನಿಗೆ ಹಳೆಯ ಪ್ರಕರಣವೊಂದರಲ್ಲಿ ಭಾರೀ ಆಘಾತ ಎದುರಾಗಿದೆ.
ಪ್ರಕರಣದ ಹಿನ್ನೆಲೆ:ರಾಜ್ಯದ ಪಿತೋರ್ಗಢದ ಲೀಲಾ ಧರ್ ಪಾಠಕ್ ಎಂಬುವವರ ಮಳಿಗೆಯಲ್ಲಿ ಪತಂಜಲಿ ಸಂಸ್ಥೆಯ ಪತಂಜಲಿ ನವರತ್ನ ಎಲಾಚಿ ಸೋನ್ಪಾಪ್ಡಿ ಮಾರಾಟಕ್ಕಿಡಲಾಗಿತ್ತು. ಇದರ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಪರೀಕ್ಷಕರು ಅನುಮಾನ ವ್ಯಕ್ತಪಡಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಲ್ಲಿ ಸಿಹಿ ಉತ್ಪನ್ನವು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು.ಈ ಕುರಿತು ಪ್ರಕರಣ ದಾಖಲಾಗಿ, ವಿಚಾರಣೆ ನಡೆದು ಇದೀಗ ಪಿತೋರ್ಗಢದ ನ್ಯಾಯಾಲಯ ತೀರ್ಪು ನೀಡಿದೆ. ಅದರನ್ವಯ, ಸಿಹಿ ಉತ್ಪನ್ನ ಮಾರಾಟ ಮಾಡಿದ ಲೀಲಾ ಧರ್ ಪಾಠಕ್, ಉತ್ಪನ್ನದ ಹಂಚಿಕೆದಾರ ಅಜಯ್ ಜೋಷಿ ಮತ್ತು ಪತಂಜಲಿಯ ಅಸಿಸ್ಟೆಂಟ್ ಮ್ಯಾನೇಜರ್ ಅಭಿಷೇಕ್ ಕುಮಾರ್ಗೆ ಕ್ರಮವಾಗಿ 5000 ರು., 10000 ರು. ಮತ್ತು 25000 ರು. ದಂಡ ವಿಧಿಸಿದೆ. ಅಲ್ಲದೆ ಎಲ್ಲರಿಗೂ ತಲಾ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.