ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಜೊತೆಗೆ ಭಾರತ ಹಾಗೂ ಅಮೆರಿಕ ನಡುವೆ ಶೀಘ್ರದಲ್ಲೇ ಅತ್ಯಂತ ಲಾಭದಾಯಕ ವ್ಯಾಪಾರ ಒಪ್ಪಂದ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
- ಶೀಘ್ರ ಉತ್ತಮ ಟ್ರೇಡ್ ಡೀಲ್ ಸಾಕಾರವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆಪ್ತ ಸ್ನೇಹಿತ. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಜೊತೆಗೆ ಭಾರತ ಹಾಗೂ ಅಮೆರಿಕ ನಡುವೆ ಶೀಘ್ರದಲ್ಲೇ ಅತ್ಯಂತ ಲಾಭದಾಯಕ ವ್ಯಾಪಾರ ಒಪ್ಪಂದ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ಶ್ವೇತಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ‘ನಾವು ಶೀಘ್ರ ಈ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರೆ ತುಂಬಾ ಇಷ್ಟ. ಅವರು ನನ್ನ ಉತ್ತಮ ಸ್ನೇಹಿತರೂ ಹೌದು. ನಮ್ಮಿಬ್ಬರ ಮಧ್ಯೆ ಉತ್ತಮ ಒಡನಾಟ ಹಾಗೂ ಸಂಬಂಧವಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಈ ಒಪ್ಪಂದ ಬಹುಮುಖ್ಯ ಪಾತ್ರ ವಹಿಸುತ್ತದೆ’ ಎಂದರು.
ಆದಾಗ್ಯೂ ಭಾರತದ ಹಿಂದಿನ ತೆರಿಗೆ ನೀತಿ ಬಗ್ಗೆ ಕಿಡಿಕಾರಿದ ಅವರು, ‘ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಕಳೆದ ಹಲವು ವರ್ಷಗಳಿಂದ ಭಾರೀ ಪ್ರಮಾಣದ ಸುಂಕ ಹೇರುತ್ತಿತ್ತು. ಅಮೆರಿಕದ ಉದಾರತೆಯನ್ನ ದುರುಪಯೋಗ ಪಡಿಸಿಕೊಂಡಿತ್ತು’ ಎಂದು ಬೇಸರಿಸಿದರು.
--
ಮೋದಿ ಯಾವ ಒತ್ತಡಕ್ಕೂ ಮಣಿವವರಲ್ಲ: ಪುಟಿನ್
- ಭಾರತದ ಪ್ರಧಾನಿ ಬಗ್ಗೆ ರಷ್ಯಾ ಅಧ್ಯಕ್ಷ ಪ್ರಶಂಸೆ
ಸೇಂಟ್ ಪೀಟರ್ಸ್ಬರ್ಗ್: ಭಾರತ ಮತ್ತು ರಷ್ಯಾ ಸಂಬಂಧ ದುರ್ಬಲಗೊಳಿಸಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ನಡೆಸುತ್ತಿರುವ ತಂತ್ರಗಳು ವಿಫಲವಾಗಿವೆ. ಏಕೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವ ಒತ್ತಡಕ್ಕೂ ಮಣಿಯುವವರಲ್ಲ ಎಂದು ರಷ್ಯಾ ಅಧ್ಯಕ ವ್ಲಾದಿಮಿರ್ ಪುಟಿನ್ ಪ್ರಶಂಸಿಸಿದ್ದಾರೆ.ಶುಕ್ರವಾರ ಜಾಗತಿಕ ಸುದ್ದಿಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ ಅವರು, ಮಾತನಾಡಿದ ಪುಟಿನ್, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು.ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ. ಭಾರತದ ಮೇಲೆ ಅಥವಾ ಮೋದಿ ಅವರ ಮೇಲೆ ಒತ್ತಡ ಹೇರುವುದು ಅಂತಾರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕಾರಕ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಅಂಥದ್ದರಲ್ಲಿ ಒತ್ತಡ ಎಲ್ಲಿಂದ ಬಂದರೂ ಅದು ಫಲಪ್ರದವಾಗುವುದಿಲ್ಲ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ತಿವಿದರು.
ಹಸ್ತಕ್ಷೇಪವಿಲ್ಲ:
ಭಾರತ ಮತ್ತು ಚೀನಾ ನಡುವಣ ಸೂಕ್ಷ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಾಸ್ಕೋ ಹಸ್ತಕ್ಷೇಪ ಮಾಡುವುದಿಲ್ಲ. ನವದೆಹಲಿ ಮತ್ತು ಬೀಜಿಂಗ್ ಎರಡೂ ತಮ್ಮ ದೀರ್ಘಕಾಲದ ಗಡಿ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಸಮರ್ಥವಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
--
ಜುಲೈನಲ್ಲಿ ಭಾರತ-ಅಮೆರಿಕ 1ನೇ ಹಂತದ ಡೀಲ್ ಸಾಕಾರ: ಗೋಯಲ್
- ಡೀಲ್ನ ಕೆಲವು ಜಟಿಲ ವಿಷಯಗಳು ಇತ್ಯರ್ಥ
ವಿಶಾಖಪಟ್ಟಣಂ: ಫೆಬ್ರವರಿಯಲ್ಲಿ ಶುರುವಾದ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಯು ಕೊನೆಯ ಘಟ್ಟದಲ್ಲಿದ್ದು, ಮುಂದಿನ ತಿಂಗಳ ನಡುವಲ್ಲಿ ಮೊದಲ ಹಂತದ ಒಪ್ಪಂದ ಜಾರಿ ಆಗುವ ನಿರೀಕ್ಷೆ ಇದೆ ಎಂದು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ ಅವರು, ‘ಒಪ್ಪಂದ ಅಂತಿಮಗೊಳಿಸಲು ಅಮೆರಿಕದ ನಿಯೋಗವು ಜು.2ರಿಂದ 4ರ ವರೆಗೆ ದೆಹಲಿಯಲ್ಲಿತ್ತು. ಸದ್ಯ ಜಾರಿಯಲ್ಲಿರುವ ಮಧ್ಯಂತರ ಒಪ್ಪಂದದಲ್ಲಿನ ಕೆಲವು ವಿಷಯಗಳ ಇತ್ಯರ್ಥ ಇನ್ನೂ ಬಾಕಿ ಇತ್ತು. ಬಾಕಿಯಿದ್ದ ಎಲ್ಲಾ ಅಂಶಗಳು ಮುಂದಿನ ತಿಂಗಳು ಅಂತಿಮಗೊಳ್ಳುವ ನಿರೀಕ್ಷೆಯಿದೆ. ಹೀಗಾದಲ್ಲಿ, ತೆರಿಗೆ ಹೇರಿಕೆಗೆ ತುತ್ತಾಗಿರುವ ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ವಿಶೇಷ ಆದ್ಯತೆ ಸಿಕ್ಕಂತಾಗುತ್ತದೆ’ ಎಂದರು. ಜತೆಗೆ, ಜೂನ್ ಕೊನೆಯಲ್ಲಿ ಅಮೆರಿಕದ ಉನ್ನತ ಮಟ್ಟದ ತಂಡವೊಂದು ಭಾರತಕ್ಕೆ ಬರಲಿದೆ ಎಂದೂ ಹೇಳಿದರು.ಅತ್ತ ಶೀಘ್ರವೇ ಡೀಲ್ ಆಗುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿರುವುದೂ ಗಮನಾರ್ಹ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.