ಸರ್ಕಾರದ ಪರ ಮಾತನಾಡಲು ಸೇನೆ ಮೇಲೆ ಒತ್ತಡ: ರೇಣುಕಾ

KannadaprabhaNewsNetwork |  
Published : Dec 03, 2025, 01:04 AM IST
ರೇಣು | Kannada Prabha

ಸಾರಾಂಶ

ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಮಾತನಾಡಲು ಸೇನೆಯ ಮೇಲೆ ಒತ್ತಡವಿದೆ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಮಾತನಾಡಲು ಸೇನೆಯ ಮೇಲೆ ಒತ್ತಡವಿದೆ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಂದು ಅತ್ಯಂತ ಭಯಾನಕ ಸನ್ನಿವೇಶವಿದೆ. ಮೊದಲ ಬಾರಿಗೆ ಸೇನಾಧಿಕಾರಿಗಳೇ ಹೊರಬಂದು, ತಮ್ಮ ಮೇಲೆ ಸರ್ಕಾರವನ್ನು ಬೆಂಬಲಿಸಿ ಮಾತನಾಡಲು ಒತ್ತಡ ಹೇರಲಾಗುತ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಈ ಹೇಳಿಕೆ ಖಂಡಿಸಿದ್ದು, ‘ವಿಭಜಕ ಮತ್ತು ದುರುದ್ದೇಶಪೂರಿತ ಹೇಳಿಕೆ ಇದಾಗಿದೆ. ಸಶಸ್ತ್ರ ಪಡೆಗಳ ಘನತೆಯನ್ನು ಅವಮಾನಿಸುತ್ತವೆ’ ಎಂದಿದ್ದಾರೆ.

==

ಜಾರ್ಖಂಡಲ್ಲಿ ಬಿಜೆಪಿ ಜತೆ ಜೆಎಂಎಂ ಮೈತ್ರಿ?

- ಅಧಿಕಾರ ಬದಲಾವಣೆ ಬಗ್ಗೆ ಭಾರಿ ಊಹಾಪೋಹ

- ಬಿಜೆಪಿ ನಾಯಕರ ಭೇಟಿ ಆದ ಹೇಮಂತ್‌: ವರದಿ

ನವದೆಹಲಿ/ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯತ್ತ ವಾಲಿ ಸರ್ಕಾರ ರಚಿಸಲಿದ್ದಾರೆಯೇ ಎಂಬ ಗುಲ್ಲು ಹರಡಿದೆ.ಹೇಮಂತ್‌ ಮತ್ತು ಅವರ ಪತ್ನಿ ಕಲ್ಪನಾ ದಿಲ್ಲಿಯಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ.

ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 41 ಸ್ಥಾನಗಳು ಬೇಕು. ಜೆಎಂಎಂ 34 ಸ್ಥಾನ ಹೊಂದಿದ್ದು, ಕಾಂಗ್ರೆಸ್‌ ಹಾಗೂ ಇತರರ ಜತೆ ಸೇರಿ 56 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.ಬಿಜೆಪಿ 21 ಸ್ಥಾನಗಳನ್ನು ಹೊಂದಿದೆ. ಜೆಎಎಂ ಬಿಜೆಪಿ ಮೈತ್ರಿಯಾದರೆ ಬಲ 55ಕ್ಕೇರಲಿದೆ. ಎನ್‌ಡಿಎ ಭಾಗವಾದ ಎಲ್‌ಜೆಪಿ. ಎಜೆಎಸ್‌ಯು ಮತ್ತು ಜೆಡಿಯುನ ತಲಾ ಇಬ್ಬ ಶಾಸಕರ ಬೆಂಬಲ ದೊರೆತರೆ ಮೈತ್ರಿಬಲ 58ಕ್ಕೇರಲಿದೆ.

ಇನ್ನು ಕಾಂಗ್ರೆಸ್‌ನ 16 ಶಾಸಕರಲ್ಲಿ 8 ಜನ ಪಕ್ಷ ಬಿಡಲಿದ್ದಾರೆ. ಆದರೆ ಅನರ್ಹತೆ ಭೀತಿ ಇರುವ ಕಾರಣ ಬೇರಾವ ಪಕ್ಷವನ್ನೂ ಸೇರದೇ ಪ್ರತ್ಯೇಕ ಘಟಕ ಘೋಷಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಗುಲ್ಲು ಹರಡಿದೆ.

==

ಪಾಕ್‌ಗೆ ಉತ್ತರ ನೀಡಲು ಸಿದ್ಧ: ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯು ಭಾರತ ಹಾಗೂ ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಅಗತ್ಯ ಬಿದ್ದರೆ ಉತ್ತರಿಸಲೂ ಸಿದ್ಧವಿದೆ ಎಂದು ವೈಸ್ ಅಡ್ಮಿರಲ್ ಕೆ ಸ್ವಾಮಿನಾಥನ್ ಹೇಳಿದ್ದಾರೆ. ಸುದ್ದಿಗಾರರ ಜತೆ ಅವರು ಮಾತನಾಡಿ, ‘ಅಗತ್ಯ ಬಿದ್ದರೆ ನಮ್ಮ ಪೂರ್ವ ನೌಕಾಪಡೆಯ ಕಮಾಂಡ್ ಮೊದಲ ಪ್ರತಿಕ್ರಿಯೆ ನೀಡುತ್ತದೆ ಮತ್ತು ನೌಕಾಪಡೆಯ ಮುಖ್ಯಸ್ಥರು ಪಶ್ಚಿಮ ನೌಕಾಪಡೆಯಿಂದ ಯಾವುದೇ ಬೆಂಬಲವನ್ನು ಕೇಳಿದರೆ, ನೀಡಲು ನಾವು ಸಿದ್ಧರಿದ್ದೇವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌