;Resize=(412,232))
ಪಾಲಕ್ಕಾಡ್ : ಕೇರಳಂನ ಪಾಲಕ್ಕಾಡ್ ರೈಲ್ವೆ ವಿಭಾಗದ ಭಾಗವಾದ ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸುವ ರೈಲ್ವೆ ಸಚಿವಾಲಯದ ಪ್ರಸ್ತಾಪ ವಿರೋಧಿಸಿ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ್ದು, ಅದು ಹಿಂಸಾ ರೂಪ ಪಡೆದಿದೆ.
ಸಿಪಿಎಂನ ಯುವ ಘಟಕವಾದ ಡೆಮಾಕ್ರೆಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಕಾರ್ಯಕರ್ತರು ಸೋಮವಾರ ಬೆಳಗ್ಗೆ 8ಕ್ಕೆ ಇಲ್ಲಿನ ವಿಭಾಗೀಯ ರೈಲ್ವೆ ವ್ವವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಈ ವೇಳೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಅವರನ್ನು ತಡೆಗಟ್ಟುವ ಯತ್ನ ಮಾಡಿದರಾದರೂ, ಕಾರ್ಯಕರ್ತರು ಬ್ಯಾರಿಕೇಡ್ ಹಾರಿ ಕಚೇರಿಯ ಕಾಂಪೌಂಡ್ ನುಗ್ಗಿ ಕಚೇರಿ ಎದುರು ಧರಣಿ ಕುಳಿತು ಘೋಷಣೆ ಕೂಗಿ, ನಿರ್ಧಾರ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.
ಬಳಿಕ ಯುವ ಕಾಂಗ್ರೆಸ್ ಕೂಡಾ ಇದೇ ರೀತಿಯ ಪ್ರತಿಭಟನೆ ಹಮ್ಮಿಕೊಂಡು, ರೈಲ್ವೆ ಕಚೇರಿಯತ್ತ ತೆರಳುವ ಯತ್ನ ಮಾಡಿತಾದರೂ ಪೊಲೀಸರು ಅವರನ್ನು ಮಾರ್ಗ ಮಧ್ಯದಲ್ಲೇ ತಡೆಗಟ್ಟಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಈ ನಡುವೆ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಸಂಸದರು ಓಣಂ ಹಬ್ಬದ ದಿನದಂದು ಉಪವಾಸ ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಅನ್ಯಾಯ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಬಂದರಿನ ಮೂಲಕ ಆಗಮಿಸುವ ಸರಕು ಮಂಗಳರಿನಿಂದ ದೇಶದ ವಿವಿಧ ಭಾಗಗಳಿಗೆ ಸಾಗಾಟ ಆಗುತ್ತದೆ. ಪಾಲಕ್ಕಾಡ್ ವಲಯಕ್ಕೆ ಹೆಚ್ಚಿನ ಆದಾಯ ಬರುವುದೇ ಮಂಗಳೂರು ವಿಭಾಗದಿಂದ. ಹೀಗಾಗಿ ಮಂಗಳೂರು ಕೈತಪ್ಪಿದರೆ ಪಾಲಕ್ಕಾಡ್ ವಲಯಕ್ಕೆ ಭಾರೀ ಆದಾಯ ನಷ್ಟವಾಗುತ್ತದೆ ಎಂಬುದು ಕೇರಳಂನ ವಾದ.=
23 ವರ್ಷದ ಹೋರಾಟದ
ಬಳಿಕ ನಮ್ಮ ಹಕ್ಕು ನಮಗೆ
ಕರ್ನಾಟಕದ 23 ವರ್ಷದ ಹೋರಾಟಕ್ಕೆ ಸಿಕ್ಕ ಜಯ. ನಮ್ಮ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಇದರಲ್ಲಿ ಕೇರಳಕ್ಕೆ ಅನ್ಯಾಯ ಎಲ್ಲಿಂದ ಬಂತು. ಯಾವ ರಾಜ್ಯಕ್ಕೂ ನಾವು ಅನ್ಯಾಯ ಮಾಡಿಲ್ಲ. ಕರ್ನಾಟಕ ನಿರಂತರ ಹೋರಾಟದ ಮೂಲಕ ತನ್ನ ಹಕ್ಕು ಪಡೆದುಕೊಂಡಿದೆ.
ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ವಿಜಭಜನೆ ತಡೆ ಕೋರಿ
ಮೋದಿಗೆ ಕೇರಳ ಸಿಎಂ
ತಿರುವನಂತಪುರಂ: ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ಗೇನು ಕಷ್ಟ?: ಆರ್ಸಿ
ಇದು ಆಡಳಿತಾತ್ಮಕ ಬದಲಾವಣೆ. ಕರ್ನಾಟಕದ ಮೈಸೂರಿಗೆ ಮಂಗಳೂರು ಸೇರಿದರೆ ಕಾಂಗ್ರೆಸ್ಗೇನು ಕಷ್ಟ. ಇದರಿಂದ ಕೇರಳಂಗೆ ಯಾವುದೇ ನಷ್ಟವಾಗದು. ಆಡಳಿತದ ವೈಫಲ್ಯ ಮುಚ್ಚಿಡಲು ಕಾಂಗ್ರೆಸ್ ವಿವಾದ ಸೃಷ್ಟಿಸಿದೆ.
ರಾಜೀವ್ ಚಂದ್ರಶೇಖರ್, ಕೇರಳ ಬಿಜೆಪಿ ಅಧ್ಯಕ್ಷ