ಪುಣೆ: ಕುಡಿತ ಮತ್ತಿನಲ್ಲಿ ಅಜಾಗರೂಕತೆಯಿಂದ ಐಷಾರಾಮಿ ಪೋರ್ಷೆ ಕಾರು ಚಲಾಯಿಸಿ, ಇಬ್ಬರು ಅಮಾಯಕರ ಸಾವಿಗೆ ಕಾರಣವಾದ ಶ್ರೀಮಂತ ಕುಟುಂಬದ 17 ವರ್ಷದ ಅಪ್ರಾಪ್ತನಿಗೆ ಸ್ಥಳೀಯ ನ್ಯಾಯಾಲಯ ಕೇವಲ 14 ಗಂಟೆಗಳಲ್ಲೇ ಜಾಮೀನು ನೀಡಿ ಬಿಡುಗಡೆ ಮಾಡಿದೆ ಹಾಗೂ ಜನಾಕ್ರೋಶಕ್ಕೆ ಕಾರಣ ಆಗುವಂಥ ಕೆಲವು ಭಾರಿ ಕಮ್ಮಿ ಪ್ರಮಾಣದ ಶಿಕ್ಷೆ ವಿಧಿಸಿದೆ.
ಬಾಲಾರೋಪಿ 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡಬೇಕು; ಮನೋವೈದ್ಯಕೀಯ ಮೌಲ್ಯಮಾಪನ ಮತ್ತು ಚಿಕಿತ್ಸೆಗೆ ಒಳಗಾಗಬೇಕು; ರಸ್ತೆ ಅಪಘಾತಗಳ ಪರಿಣಾಮ ಮತ್ತು ಅದಕ್ಕೆ ಪರಿಹಾರ ಎನ್ನುವ ವಿಷಯದ ಬಗ್ಗೆ 300 ಪದಗಳ ಪ್ರಬಂಧ ಬರೆಯಬೇಕು; ಪುನರ್ವಸತಿ ಕೇಂದ್ರದಲ್ಲಿ ವ್ಯಸನಮುಕ್ತರಾಗಬೇಕು; ಸಂತ್ರಸ್ತೆಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ
ಭಾನುವಾರ ಬೆಳಿಗ್ಗೆ, ಕೊರೆಗಾಂವ್ ಪಾರ್ಕ್ಬಳಿ 17 ವರ್ಷದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರಿನಡಿ ಸಿಲುಕಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಯುವ ದಂಪತಿ ಮೃತಪಟ್ಟಿದ್ದರು. ಈತ ಕಾರು ಚಲಾಯಿಸುವ ಮುನ್ನ ಬಾರ್ ಒಂದರಲ್ಲಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿದೆ.
ಆದರೆ ಕೋರ್ಟ್ ಆದೇಶಕ್ಕೆ ಪೊಲೀಸರು ಆಕ್ಷೇಪಿಸಿದ್ದು, ಆತನನ್ನು ವಯಸ್ಕ ಎಂದು ಪರಿಗಣಿಸಿವ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.