ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಭೀಕರ ಮರ್ಡರ್
ಪುಣೆ: ಇನ್ನೇನು ಐಷಾರಾಮಿ ಮದುವೆ ಸಜ್ಜಾಗಿದ್ದ ತನ್ನ ಭಾವಿ ಪತಿಯನ್ನು, ಭಾವಿ ಪತ್ನಿ ಟ್ರೆಕ್ಕಿಂಗ್ಗೆ ಕರೆದೊಯ್ದ ಅಲ್ಲಿ ಪ್ರಿಯಕರನ ಜೊತೆಗೂಡಿ 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆಗೈದ ಭೀಕರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಕಳೆದ ವರ್ಷ ಮೇಘಾಲಯದಲ್ಲಿ ನಡೆದಿದ್ದ ‘ಹನಿಮೂನ್ ಹತ್ಯೆ’ ಪ್ರಕರಣ ನೆನಪಿಸುವ ಈ ಘಟನೆ ಭಾರೀ ಆಘಾತ ಮೂಡಿಸಿದೆ.ಮೃತ ಕೇತನ್ ಅಗರ್ವಾಲ್ನದ್ದು (26) ಮೊದಲಿಗೆ ಆಕಸ್ಮಿಕ ಸಾವೆಂದು ಬಿಂಬಿತವಾಗಿತ್ತಾದರೂ, ತನಿಖೆ ವೇಳೆ ಸ್ವತಃ ಭಾವಿ ಪತ್ನಿ ಸಿಯಾ ಮತ್ತು ಆತನ ಪ್ರಿಯಕರ ಸೇರಿ ಹತ್ಯೆ ನಡೆಸಿದ್ದು ಪತ್ತೆಯಾಗಿದೆ.
ಏನಿದು ಪ್ರಕರಣ?:ಸ್ವತಃ ರಿಯಲ್ ಎಸ್ಟೇಟ್ ಕಂಪನಿ ಹೊಂದಿದ್ದ ಕೇತನ್, ಜೂ.18ರಂದು ತಮ್ಮ ಭಾವಿ ಪತ್ನಿ ಸಿಯಾ ಜತೆ ಲೋಹಗಡ್ ಕೋಟೆಗೆ ಬಂದಿದ್ದರು. ಅಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದಾಗ 400 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಕೂಡಲೇ ಲೊನಾವಲಾ ಪೊಲೀಸ್ ಠಾಣೆಗೆ ಧಾವಿಸಿದ ಸಿಯಾ, ಕೇತನ್ ಕಾಲುಜಾರಿ ಬಿದ್ದನೆಂದು ದೂರು ದಾಖಲಿಸಿದ್ದು, 3 ತಾಸಿನ ಕಾರ್ಯಾಚರಣೆ ಬಳಿಕ ದೇಹವನ್ನು ಮೇಲೆತ್ತಲಾಗಿತ್ತು. ಅದಾದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಸಿಯಾ, ‘ನಾನು ನಿನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದೆ. ಆದರೆ ನೀನು ನನ್ನ ಜನ್ಮದಿನದಂದೇ ಬಿಟ್ಟುಹೋದೆ’ ಎಂಬ ಭಾವನಾತ್ಮಕ ಸ್ಟೋರಿ ಹಾಕಿದ್ದಳು.
ಈ ನಡುವೆ ಕೇತನ್ ತಂದೆ ವ್ಯಕ್ತಪಡಿಸಿದ ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಸಿಯಾ, ಚೇತನ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ಸಂಶಯಗೊಂಡು ಚೌಧರಿಯನ್ನು ವಿಚಾರಣೆಗೊಳಪಡಿಸಿದಾಗ, ತಮ್ಮ ಪ್ರೀತಿಗೆ ಅಡ್ಡಿಯಾಗಿರುವ ಕೇತನ್ನನ್ನು ಮುಗಿಸಲು ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಯೋಜನೆಯ ಪ್ರಕಾರ ಕೇತನ್ನನ್ನು ಸಿಯಾ ಲೋಹಗಡ್ ಕೋಟೆಗೆ ಕರೆದೊಯ್ದಿದ್ದಳು. ಬಳಿಕ ಅಲ್ಲಿ ಚೌಧರಿ ಜತೆ ಸೇರಿಕೊಂಡು ಕೇತನ್ನನ್ನು ಕಂದಕಕ್ಕೆ ತಳ್ಳಿದ್ದಳು.
ಸಿಯಾ ಮತ್ತು ಕೇತನ್ರ ಮದುವೆ ನವೆಂಬರ್ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿತ್ತು. ಇದಕ್ಕಾಗಿ 17 ಕೋಟಿ ರು.ನ ಅರಮನೆಯನ್ನೂ ಕಾಯ್ದಿರಿಸಲಾಗಿತ್ತು. ಜತೆಗೆ ನೆಂಟರನ್ನು ಅಲ್ಲಿಗೆ ಕರೆತರಲು 2 ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.