ಭಾರತೀಯರು ಮೆಚ್ಚಿದ ಉದ್ಯಮ ರತ್ನ ಮೌನ ಸಾಧಕ । ಕಂಪನಿಯ ವಿಶ್ವಾಸಾರ್ಹತೆ ಹೆಚ್ಚಿಸುವಲ್ಲಿ ರತನ್‌ ಪ್ರಮುಖ ಪಾತ್ರ

Published : Oct 10, 2024, 05:13 AM IST
Rathan TATA

ಸಾರಾಂಶ

ದಶಕಗಳ ಕಾಲ ಟಾಟಾ ಸಮೂಹ ಮುನ್ನಡೆಸಿದ ರತನ್‌ ಟಾಟಾ ಜನ ಸಾಮಾನ್ಯರೊಂದಿಗೆ ನೇರವಾಗಿ ಬೆರೆತಿದ್ದು ಇಲ್ಲವೇ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಕಂಪನಿಯ ಕೆಲಸಗಳಲ್ಲಿ ಎಲ್ಲರೊಂದಿಗೂ ಜೊತೆಗೂಡುವುದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಮೌನಿ. ಅವರದ್ದು ಏನಿದ್ದರೂ ಕೆಲಸದ ಮೂಲಕವೇ ಮಾತು.

 ಮುಂಬೈ  :  ದಶಕಗಳ ಕಾಲ ಟಾಟಾ ಸಮೂಹ ಮುನ್ನಡೆಸಿದ ರತನ್‌ ಟಾಟಾ ಜನ ಸಾಮಾನ್ಯರೊಂದಿಗೆ ನೇರವಾಗಿ ಬೆರೆತಿದ್ದು ಇಲ್ಲವೇ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಕಂಪನಿಯ ಕೆಲಸಗಳಲ್ಲಿ ಎಲ್ಲರೊಂದಿಗೂ ಜೊತೆಗೂಡುವುದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಮೌನಿ. ಅವರದ್ದು ಏನಿದ್ದರೂ ಕೆಲಸದ ಮೂಲಕವೇ ಮಾತು.

ಹೀಗಾಗಿ ಕಣ್ಣಿಗೆ ಕಾಣದಿದ್ದರೂ, ನೇರವಾಗಿ ಯಾವುದೇ ಸಂಬಂಧ ಹೊಂದಿದ್ದರೂ ರತನ್‌ ಟಾಟಾ ಉದ್ಯಮ ವಲಯ ಮಾತ್ರವಲ್ಲದೇ ದೇಶವ್ಯಾಪಿ ಅತ್ಯಂತ ಗೌರವ ಪಡೆದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಕಂಡುಬರುತ್ತಾರೆ.

ಉದ್ಯಮಿಗಳನ್ನು ಸದಾ ಕಾಡುವ ಹಗರಣಗಳಿಂದ ಮೊದಲಿನಿಂದಲೂ ದೂರವೇ ಇದ್ದ ಸಂಗತಿ ಅವರ ಜನಪ್ರಿಯತೆ, ಗೌರವವನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಇಂಡಿಕಾ, ಟಾಟಾ ನ್ಯಾನೋ ಕಾರುಗಳ ಉತ್ಪಾದನೆ ಮೂಲಕ ದಶಕಗಳ ಹಿಂದೆಯೇ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಜಾರಿಗೆ ತಂದ ಶ್ರೇಯ ರತನ್‌ ಟಾಟಾ ಅವರದ್ದು.

ಅಧಿಕಾರದಾಸೆಯಿಂದ ಮುಕ್ತ:

ವಿದೇಶಿ ವಿಶ್ವವಿದ್ಯಾಯಲದಲ್ಲಿ ವ್ಯಾಸಂಗ ಮಾಡಿದ್ದ ರತನ್‌ ಟಾಟಾ, ಐಬಿಎಂನಿಂದ ಬಂದಿದ್ದ ಉದ್ಯೋಗಾವಕಾಶವನ್ನು ತಿರಸ್ಕರಿಸಿದ್ದರು. ತದನಂತರ ಟೆಲ್ಕೋ(ಇಂದಿನ ಟಾಟಾ ಮೋಟಾರ್ಸ್‌)ದಲ್ಲಿ ಸುಣ್ಣದ ಕಲ್ಲುಗಳಿಗೆ ಸಲಿಕೆ ಹಾಕುವ ಹಾಗೂ ಕುಲುಮೆಗಳನ್ನು ಸ್ಫೋಟಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಟಾಟಾ ಸಮೂಹದ ವಿವಿಧ ಕಂಪನಿಗಳಲ್ಲಿ ದುಡಿದ ಅವರು, ಸಾಮಾನ್ಯ ಜನರ ಜೀವನವನ್ನು, ಅವರು ಅನುಭವಿಸುವ ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿದರು. ಕ್ರಮೇಣ ಟಾಟಾ ಸಮೂಹದ ನಿರ್ದೇಶಕ ಹುದ್ದೆಯತ್ತ ಹೆಜ್ಜೆ ಹಾಕಿದರು. ಅಷ್ಟಾದರೂ ಪರಿಶ್ರಮ, ಬದ್ಧತೆ, ಸಮರ್ಪಣಾ ಗುಣಗಳನ್ನು ಅವರು ಮರೆಯಲಿಲ್ಲ.

ಸವಾಲು ಸ್ವೀಕರಿಸುವ ಗುಣ:

ದೇಶವು ಉದಾರೀಕರಣಕ್ಕೆ ತೆರೆದುಕೊಳ್ಳತೊಡಗಿದ ಸಮಯದಲ್ಲಿ ರತನ್‌ ಟಾಟಾ ಅವರು ಟಾಟಾ ಸಮೂಹದ ಪುನರ್‌ ರಚನೆಗೆ ಮುಂದಾದರು. ಅವರ ನೇತೃತ್ವದಲ್ಲೇ ಸಮೂಹದ ಬೆಳವಣಿಗೆ ಹಾಗೂ ಜಾಗತೀಕರಣ ವೇಗ ಪಡೆಯಿತು. ಇದರಿಂದಾಗಿಯೇ ಭಾರತ ಕೇಂದ್ರಿತವಾಗಿದ್ದ ಟಾಟಾ ಸಮೂಹ ನೂರಕ್ಕೂ ಅಧಿಕ ದೇಶಗಳಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಲು ಸಾಧ್ಯವಾಯಿತು.

ಸಾಮಾನ್ಯರಿಗಾಗಿ ಮಿಡಿವ ಮನ:

‘ಬಾಂಬೆಯಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ನಾಲ್ಕು ಜನರ ಕುಟುಂಬವೊಂದು ಮೋಟರ್‌ ಬೈಕಿನಲ್ಲಿ ಹೋಗುವುದನ್ನು ನೋಡಿ, ಇಂತಹ ಕುಟುಂಬಗಳಿಗೆ ಸಹಾಯವಾಗುವಂತೆ ಏನನ್ನಾದರೂ ಮಾಡಬೇಕು ಎನಿಸಿತು’ ಎಂದ ರತನ್‌ ಟಾಟಾ, ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ನ್ಯಾನೋ ಕಾರನ್ನು ರೋಡಿಗಿಳಿಸಿದರು.ರಿದು ಸಾಮಾನ್ಯರಿಗಾಗಿ ಮಿಡಿಯುವ ಅವರ ಅಸಾಮಾನ್ಯ ಗುಣಕ್ಕೆ ಸಾಕ್ಷಿ.

ದಾನದಲ್ಲಿ ಎತ್ತಿದ ಕೈ:

ಉದ್ಯಮಿಯಾದರೂ ಲಾಭದ ಬಗ್ಗೆ ತಲೆ ಕಡಿಸಿಕೊಳ್ಳದ ರತನ್‌, ಸಾಮಾಜಿಕ ಜವಾಬ್ದಾರಿ ಮತ್ತು ಸುಸ್ಥಿರತೆಗೆ ಬದ್ಧರಾಗಿದ್ದರು. ದಾನಕ್ಕಾಗಿಯೇ ಟಾಟಾ ಟ್ರಸ್ಟ್‌ ಎಂಬ ದೇಶದ ದೊಡ್ಡ ಚ್ಯಾರಿಟೆಬಲ್‌ ಸಂಸ್ಥೆಯನ್ನು ಹುಟ್ಟುಹಾಕಿದರು. ಜಗತ್ತು ಮಾರಣಾಂತಿಕ ಪಿಡುಗಿನಿಂದ ನರಳುತ್ತಿದ್ದ ಸಮಯದಲ್ಲಿ 500 ಕೋಟಿ ರು. ನೆರವು ನೀಡಿ ಮಾನವೀಯತೆ ಮೆರೆದರು. ಖ್ಯಾತ ಉದ್ಯಮಿಯಾಗಿದ್ದರೂ ಕೂಡ ಲೆನ್ಸ್‌ಕಾರ್ಟ್‌, ಪೇಟಿಎಂ, ಒಲಾ ಸೇರಿದಮತೆ ದೇಶದ 50 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಫಾಸ್ಟ್ಯಾಗ್‌ ದಂಡದಲ್ಲಿ ಕರ್ನಾಟಕ ನಂ.1
ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ