ಹೈದರಾಬಾದ್: ‘ಅಲ್ಪಸಂಖ್ಯಾತ (ಮುಸ್ಲಿಂ) ವಿದ್ಯಾರ್ಥಿಗಳು ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸುವಷ್ಟು ಪ್ರಾವೀಣ್ಯ ಹೊಂದಿದ್ದಾರೆ. ಆದರೆ, ಪುಸ್ತಕಗಳಲ್ಲಿ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಬಿಜೆಪಿ ಕಿಡಿ ಕಾರಿದೆ.
ಹೈದರಾಬಾದ್ನಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಯುವಕರು ಅತ್ಯಂತ ನುರಿತ ಕೌಶಲ ಹೊಂದಿರುವ ಕಾರ್ಮಿಕರಾಗಿದ್ದಾರೆ. ಅವರು ಬಯಸಿದರೆ ರಫೇಲ್ ಯುದ್ಧ ವಿಮಾನವನ್ನೇ ಬಿಚ್ಚಿ ಮತ್ತೆ ಯಶಸ್ವಿಯಾಗಿ ಜೋಡಿಸಬಲ್ಲರು. ಆದರೆ, ಪುಸ್ತಕಗಳಲ್ಲಿ ತಾವು ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೆಣಗಾಡುತ್ತಾರೆ ಅಥವಾ ಮರೆತುಬಿಡುತ್ತಾರೆ’ ಎಂದಿದ್ದಾರೆ.
‘ಅಲ್ಪಸಂಖ್ಯಾತ ಸಮುದಾಯದವರು ವಿದ್ಯುತ್ ಕಳ್ಳತನ ಮಾಡುತ್ತಾರೆ ಮತ್ತು ಬಿಲ್ಗಳನ್ನು ಪಾವತಿಸುವುದಿಲ್ಲ ಎಂದು ಶಾಸಕರು ಸೇರಿದಂತೆ ಅನೇಕರು ಆಗಾಗ್ಗೆ ದೂರು ನೀಡುತ್ತಾರೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ನೀಡುತ್ತಿರುವ 200 ಯೂನಿಟ್ ವಿದ್ಯುತ್ ನಮ್ಮ ಅಲ್ಪಸಂಖ್ಯಾತ ಸಮುದಾಯದ ಸಹೋದರ-ಸಹೋದರಿಯರಿಗೆ ಹೆಚ್ಚು ಉಪಯುಕ್ತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.