ಸಂಘ ‘ಭಾರತದ ಅಮರ ಸಂಸ್ಕೃತಿಯ ಆಲದ ಮರ’ : ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork | Updated : Apr 01 2025, 04:57 AM IST

ಸಾರಾಂಶ

ಪ್ರಧಾನಿಯಾದ ಬಳಿಕ ಮೊದಲ ಬಾರಿ ಆರ್‌ಎಸ್‌ಎಸ್‌ ಮುಖ್ಯ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಘವನ್ನು ಎಂದು ಕರೆದಿದ್ದಾರೆ.

ನಾಗ್ಪುರ: ಪ್ರಧಾನಿಯಾದ ಬಳಿಕ ಮೊದಲ ಬಾರಿ ಆರ್‌ಎಸ್‌ಎಸ್‌ ಮುಖ್ಯ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಘವನ್ನು ‘ಭಾರತದ ಅಮರ ಸಂಸ್ಕೃತಿಯ ಆಲದ ಮರ’ ಎಂದು ಕರೆದಿದ್ದಾರೆ.

‘ಭಾರತದ ಅಮರ ಸಂಸ್ಕೃತಿಯ ಆಧುನಿಕ ಆಲದ ಮರವಾಗಿರುವ ಆರ್‌ಎಸ್‌ಎಸ್, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರ ಪ್ರಜ್ಞೆಯನ್ನು ನಿರಂತರವಾಗಿ ಚೈತನ್ಯಗೊಳಿಸುತ್ತಿದೆ. ರಾಷ್ಟ್ರೀಯ ಪ್ರಜ್ಞೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ 100 ವರ್ಷಗಳ ಹಿಂದೆ ಬಿತ್ತಿದ ಬೀಜ ಈಗ ಹೆಮ್ಮರವಾಗಿದೆ. ಸ್ವಯಂಸೇವಕರು ದೇಶದ ವಿವಿಧ ಕ್ಷೇತ್ರಗಳಲ್ಲಿ, ಭಾಗಗಳಲ್ಲಿ ದೇವರಿಂದ ದೇಶ, ರಾಮನಿಂದ ರಾಷ್ಟ್ರ ಎಂಬ ಸಿದ್ಧಾಂತದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಮೋದಿ ಅವರು ಸಂಘ ಹಾಗೂ ಅದರ ಕಾರ್ಯಕರ್ತರ ಕೆಲಸಗಳನ್ನು ಪ್ರಶಂಸಿಸಿದರು. ಅಂತೆಯೇ, ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ವೇಳೆ ಆಯೋಜಿಸಲಾಗಿದ್ದ ನೇತ್ರ ಕುಂಭವನ್ನೂ ನೆನೆದರು.

ಈ ವೇಳೆ ಮೋದಿಯವರೊಂದಿಗೆ ಸಿಎಂ ದೇವೇಂದ್ರ ಫಡ್ನವೀಸ್‌, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೂಡ ಇದ್ದರು.

ಸ್ಮೃತಿ ಮಂದಿರದಲ್ಲಿ ನಮನ

ಮೊದಲಿಗೆ ರೇಶಿಮ್‌ಬಾಗ್‌ನಲ್ಲಿರುವ ಡಾ. ಹೆಡ್ಗೆವಾರ್‌ ಸ್ಮೃತಿ ಮಂದಿರಕ್ಕೆ ತೆರಳಿ ಸಂಘದ ಸ್ಥಾಪಕ ಕೇಶವ್‌ ಬಲಿರಾಂ ಹೆಡ್ಗೆವಾರ್‌ ಹಾಗೂ 2ನೇ ಸಂಘಚಾಲಕ ಗೋಲ್ವಾಲ್ಕರ್‌ ಅವರಿಗೆ ನಮನ ಸಲ್ಲಿಸಿದರು. ಬಳಿಕ ಅಂಬೇಡ್ಕರ್‌ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ದೀಕ್ಷಭೂಮಿಗೂ ಭೇಟಿಯಿತ್ತರು.

ಮಾಧವ ನೇತ್ರಾಲಯದ ಹೊಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಮೋದಿ, ಬಳಿಕ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿ.ನ ಶಸ್ತ್ರರಹಿತ ವೈಮಾನಿಕ ವಾಹನ(ಯುಎವಿ)ಗಳಿಗಾಗಿ ಏರ್‌ಸ್ಟ್ರಿಪ್‌ ಅನ್ನು ಉದ್ಘಾಟಿಸಿದರು.

ಮಕ್ಕಳಿಗಾಗಿ ಮೋದಿ “ನನ್ನ ಭಾರತ ಕ್ಯಾಲೆಂಡರ್‌ ”

ನವದೆಹಲಿ: ಮಕ್ಕಳು ಬೇಸಿಗೆ ರಜೆಯನ್ನು ಹೆಚ್ಚು ಫಲಪ್ರದವಾಗಿ ಮತ್ತು ರಚನಾತ್ಮಕವಾಗಿ ಕಳೆಯಲು ಪ್ರಧಾನಿ ಮೋದಿ ‘ನನ್ನ ಭಾರತ ಕ್ಯಾಲೆಂಡರ್’ ಅನಾವರಣಗೊಳಿಸಿದ್ದಾರೆ. ಭಾನುವಾರ ಪ್ರಸಾರವಾರ ಮನ್‌ ಕೀ ಬಾತ್‌ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಜನೌಷಧಿ ಕೇಂದ್ರಗಳಿಗೆ ಭೇಟಿ, ಹಳ್ಳಿಗಳಿಗೆ ಪ್ರವಾಸ, ಜಲಮೂಲಗಳ ಸಂರಕ್ಷಣೆ ಸೇರಿದಂತೆ ಹಲವು ಉಪಯುಕ್ತ ಕ್ರಮಗಳ ಮೂಲಕ ಬೇಸಿಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೋದಿ ಕಿವಿಮಾತು ಹೇಳಿದ್ದಾರೆ.==

"ನನ್ನ ಭಾರತ ಕ್ಯಾಲೆಂಡರ್ "ನ ಅಂಶಗಳು‘ನನ್ನ ಭಾರತ’ ಅಧ್ಯಯನ ಪ್ರವಾಸದ ಮೂಲಕ ಜನೌಷಧಿ ಕೇಂದ್ರಗಳಿಗೆ ಭೇಟಿ ನೀಡಿ. ಅವು ಹೇಗೆ ಕಾರ್ಯಾಚರಿಸುತ್ತವೆ ಎಂದು ತಿಳಿದುಕೊಳ್ಳಿ.

‘ರೋಮಾಂಚಕ ಗ್ರಾಮ’ ಅಭಿಯಾನದ ಮೂಲಕ ಗಡಿಯ ಹಳ್ಳಿಗಳಿಗೆ ಭೇಟಿ ನೀಡಿ. ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಅರಿತುಕೊಳ್ಳಿ.ಅಂಬೇಡ್ಕರ್ ಜಯಂತಿ ಹಿನ್ನೆಲೆ ಪಾದಯಾತ್ರೆ ಕೈಗೊಂಡು, ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಿ.

ಮನೆಯ ಮುಂದೆ ಪಕ್ಷಿಗಳಿಗೆ ಕುಡಿಯಲು ನೀರಿಡಿ.ನೀರು ಅತ್ಯಮೂಲ್ಯ. ‘ಮಳೆಯನ್ನು ಹಿಡಿಯಿರಿ (ಕ್ಯಾಚ್ ದಿ ರೈನ್)’ ಹಾಗೂ ‘ಜಲ ಸಂಚಯ, ಜಯ ಭಾಗೀದಾರಿ’ ಯೋಜನೆಗಳಲ್ಲಿ ಪಾಲ್ಗೊಂಡು ನೀರನ್ನು ಸಂರಕ್ಷಿಸಿ.

ನಿಮ್ಮ ರಜೆಯ ಅನುಭವಗಳನ್ನು #Holidaymemories ಹ್ಯಾಷ್‌ಟ್ಯಾಗ್ ಮೂಲಕ ಹಂಚಿಕೊಳ್ಳಿ.

Share this article