ಇರಾನ್‌ ಮೇಲೆ ಟ್ರಂಪ್‌ ಮಾತಲ್ಲೇ ಬಾಂಬ್‌ ದಾಳಿ

Published : Jan 13, 2026, 07:04 AM IST
Donald Trump

ಸಾರಾಂಶ

ದಂಗೆ ಪೀಡಿತ ಇರಾನ್‌ ಮೇಲೆ ದಾಳಿಗೆ ಅಮೆರಿಕ ಸಿದ್ಧವಾಗಿದೆ ಎಂಬ ವದಂತಿಗಳ ನಡುವೆಯೇ, ‘ಇರಾನ್‌ ಮುಖ್ಯಸ್ಥರು ನನಗೆ ಕರೆ ಮಾಡಿದ್ದರು. ಅವರು ನನ್ನ ಜೊತೆ ಮಾತುಕತೆ ನಡೆಸಲು ಮನವಿ ಮಾಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಾಂಬ್ ಸಿಡಿಸಿದ್ದಾರೆ..

ವಾಷಿಂಗ್ಟನ್‌: ದಂಗೆ ಪೀಡಿತ ಇರಾನ್‌ ಮೇಲೆ ದಾಳಿಗೆ ಅಮೆರಿಕ ಸಿದ್ಧವಾಗಿದೆ ಎಂಬ ವದಂತಿಗಳ ನಡುವೆಯೇ, ‘ಇರಾನ್‌ ಮುಖ್ಯಸ್ಥರು ನನಗೆ ಕರೆ ಮಾಡಿದ್ದರು. ಅವರು ನನ್ನ ಜೊತೆ ಮಾತುಕತೆ ನಡೆಸಲು ಮನವಿ ಮಾಡಿದ್ದಾರೆ. ಆದರೆ ಮಾತುಕತೆಗೂ ಮೊದಲೇ ನಾವು ಕಾರ್ಯ ನಿರ್ವಹಿಸಬೇಕಾಗಬಹುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಾಂಬ್ ಸಿಡಿಸಿದ್ದಾರೆ.

‘ಇರಾನ್‌ ಹಿಂದೆಂದಿಗಿಂತಲೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಅಮೆರಿಕವು ನೆರವು ನೀಡಲು ಸಿದ್ಧವಿದೆ’ ಎಂದು ಭಾನುವಾರವಷ್ಟೇ ಟ್ರಂಪ್‌ ತಮ್ಮ ಟ್ರುತ್‌ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇರಾನ್ ನಾಯಕರು ನಿನ್ನೆ ಕರೆ ಮಾಡಿದರು. ಅವರು ನನ್ನೊಂದಿಗೆ ಮಾತುಕತೆ ನಡೆಸಲು ಬಯಸಿದ್ದಾರೆ. ಹೀಗಾಗಿ ಸಭೆಯನ್ನು ಏರ್ಪಡಿಸಲಾಗುತ್ತಿದೆ. ಸಭೆಯ ಮೊದಲೇ ನಾವು ಕಾರ್ಯನಿರ್ವಹಿಸಬೇಕಾಗಬಹುದು’ ಎಂದಿದ್ದಾರೆ. ಆದರೆ ಅದೇನು ‘ಕಾರ್ಯ’ ಎಂಬುದನ್ನು ಅವರು ಬಿಟ್ಟುಕೊಡಲಿಲ್ಲ.

ಅಮಾಯಕರ ಕೊಲ್ಲಬಾರದಿತ್ತು:

‘ಇರಾನ್‌ನಲ್ಲಿ ಕೆಲವು ಜನರನ್ನು ಕೊಲ್ಲಲಾಗಿದೆ ಎಂದು ತೋರುತ್ತದೆ. ಅವರನ್ನು ಕೊಲ್ಲಬಾರದಿತ್ತು. ಕಾಲ್ತುಳಿತದಲ್ಲಿ ಕೆಲವು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಅವರಲ್ಲಿ ಬಹಳಷ್ಟು ಜನರಿದ್ದಾರೆ. ಕೆಲವರು ಶೋಷಿತರು. ನೀವು ಅವರನ್ನು (ಇರಾನ್‌ ಮುಖ್ಯಸ್ಥರನ್ನು) ನಾಯಕರು ಎಂದು ಕರೆಯಬಹುದು. ಆದರೆ ಅವರು ನಾಯಕರಲ್ಲ, ಕ್ರೂರಿಗಳು. ಅವರು ನಾಯಕರೋ ಅಥವಾ ಅವರು ಹಿಂಸಾಚಾರದ ಮೂಲಕ ಆಳುತ್ತಿದ್ದಾರೋ ನನಗೆ ತಿಳಿದಿಲ್ಲ. ನಾವು ಇದನ್ನು ಗಂಭೀರವಾಗಿ ಗಮನಿಸುತ್ತಿದ್ದೇವೆ. ನಮ್ಮ ಸೈನ್ಯವೂ ಗಮನಿಸುತ್ತಿದೆ. ನಾವು ಕೆಲವು ಬಲವಾದ ಆಯ್ಕೆಗಳನ್ನು ನೋಡುತ್ತಿದ್ದೇವೆ. ನಾವು ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಟ್ರಂಪ್ ತಿಳಿಸಿದರು.

ಬಲವಾಗಿ ಹೊಡೆಯುತ್ತೇವೆ: ಎಚ್ಚರಿಕೆ

ಇರಾನ್‌ ಅಥವಾ ಅದರ ಮಿತ್ರರು ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಂಡರೆ ಹೇಗೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ‘ಅವರು ಹಾಗೆ ಮಾಡಿದರೆ, ನಾವು ಅವರಿಗೆ ಹಿಂದೆಂದೂ ಹೊಡೆದಿಲ್ಲದ ರೀತಿಯಲ್ಲಿ ಹೊಡೆಯುತ್ತೇವೆ. ಅವರು ಅದನ್ನು ನಂಬಲೂ ಸಾಧ್ಯವಿಲ್ಲ’ ಎಂದರು. ಜೊತೆಗೆ, ಅಮೆರಿಕದ ನಿರ್ಣಯವನ್ನು ಇರಾನ್‌ ಈಗಾಗಲೇ ಅರ್ಥಮಾಡಿಕೊಳ್ಳಬೇಕಿತ್ತು ಎಂದ ಅವರು, ‘ಅವರು ನಿಮ್ಮ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ಸುಲೈಮಾನಿ, ಅಲ್-ಬಾಗ್ದಾದಿಯ ಹತ್ಯೆ ನಂತರ ಇರಾನ್‌ನ ಪರಮಾಣು ಬೆದರಿಕೆ ನಿಂತುಹೋಯಿತು’ ಎಂದರು. ಈ ಮೂಲಕ ಇರಾನ್‌ನ ಮಿಲಿಟರಿ ನಾಯಕರಾದ ಸುಲೈಮಾನಿ ಮತ್ತು ಬಾಗ್ದಾದಿಯನ್ನು ಅಮೆರಿಕ ಹತ್ಯೆ ಮಾಡಿದ್ದನ್ನು ನೆನಪಿಸಿ, ಖಮೇನಿಗೆ ತೆಪ್ಪಗಿರುವಂತೆ ಎಚ್ಚರಿಕೆ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು