ತಿರವಣ್ಣಾಮಲೈ: ಮೋಕ್ಷ ಪ್ರಾಪ್ತಿಗೆಂದು ಅರುಣಾಚಲ ಗಿರಿಯ ಅಣ್ಣಾಮಲೈಯಾರ್ ದೇವಾಲಯದಲ್ಲಿರುವ ಕಿರಿದಾದ ಕಿಂಡಿಯ ಮೂಲಕ ನುಸುಳಲು ಯತ್ನಿಸಿದ ಆಂಧ್ರಪ್ರದೇಶದ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ಇದೇ ಸಾಹಸಕ್ಕಿಳಿಸಿದ್ದ ಇನ್ನೊಬ್ಬ ಮಹಿಳೆ ಅದೃಷ್ಟವಶಾತ್‌ ಪಾರಾಗಿ ಹೊರಬಂದಿದ್ದಾರೆ. ಕೆಲ ದಿನಗಳ ಹಿಂದೆ ಈ ಕಿಂಡಿಯ ಮೂಲಕ ನುಸುಳಲೆತ್ನಿಸಿದ್ದ ಮಣಿಕುಮಾರ್‌(36) ಎಂಬುವವರಿಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಯ ನೆರವಿನಿಂದ ಅವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು. ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಕಳವಳ ವ್ಯಕ್ತವಾಗುತ್ತಿದ್ದು, ಅಗತ್ಯ ಸೂಚನಾ ಫಲಕಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆಯ ಆಗ್ರಹ ಕೇಳಿಬರುತ್ತಿದೆ.