ಈಶ ಕೇಂದ್ರಕ್ಕೆ ಗರ್ಭಿಣಿ ಸಮಂತಾ : ಸದ್ಗುರು ಭೇಟಿ

KannadaprabhaNewsNetwork |  
Published : Sep 08, 2026, 03:15 AM ISTUpdated : Sep 08, 2026, 05:27 AM IST
Samanta

ಸಾರಾಂಶ

ಸದ್ಯ ಗರ್ಭಿಣಿಯಾಗಿರುವ ನಟಿ ಸಮಂತಾ ರುತ್‌ ಪ್ರಭು ಅವರು ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ಈಶ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಲಿಂಗ ಭೈರವಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ಧಾರ್ಮಿಕ ವಿಧಿವಿಧಾನಗಳಲ್ಲಿಯೂ ಪಾಲ್ಗೊಂಡರು.

ಕೊಯಮತ್ತೂರು: ಸದ್ಯ ಗರ್ಭಿಣಿಯಾಗಿರುವ ನಟಿ ಸಮಂತಾ ರುತ್‌ ಪ್ರಭು ಅವರು ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ಈಶ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಲಿಂಗ ಭೈರವಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ಧಾರ್ಮಿಕ ವಿಧಿವಿಧಾನಗಳಲ್ಲಿಯೂ ಪಾಲ್ಗೊಂಡರು. ಗೋಶಾಲೆಯ ಕರುಗಳನ್ನು ಮುದ್ದಾಡಿ, ಭೋಜನ ಸವಿದು, ಸದ್ಗುರುವನ್ನು ಭೇಟಿಯಾದ ಕ್ಷಣಗಳನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

‘ಈಶದ ಒಡನಾಟಕ್ಕೆ ಬಂದ ಬಳಿಕದ 5 ವರ್ಷಗಳು ನನಗೆ ಬೇರೆಯದೇ ಪಾಠ ಕಲಿಸಿವೆ. ಸ್ವಂತ ಸಾಮರ್ಥ್ಯ ಮತ್ತು ಮಿತಿಗಳು ಸೇರಿದಂತೆ ನನ್ನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಬಹುದಾದ ಹಂತಕ್ಕೆ ತಲುಪಿದ್ದೇನೆ. ಕೇಂದ್ರದಿಂದ ಹೊರಬರುವಾಗ, ಕಲಿಯಲು ಇನ್ನೂ ಬಹಳಷ್ಟಿದೆ ಎಂಬ ಅರಿವಾಗುತ್ತದೆ’ ಎಂದು ತಮ್ಮ ಅನುಭವವನ್ನು ಬರೆದಿದ್ದಾರೆ. ಜತೆಗೆ ಅಲ್ಲಿಗೆ ಭೇಟಿ ನೀಡುವಂತೆ ಕರೆ ನೀಡಿದ್ದಾರೆ. ವಿಶೇಷವೆಂದರೆ, ಸಮಂತಾ ಅವರು ನಿರ್ಮಾಪಕ ರಾಜ್ ನಿಡಿಮೋರು 2025ರ ಡಿಸೆಂಬರ್‌ನಲ್ಲಿ ಇದೇ ಈಶ ಕೇಂದ್ರದಲ್ಲಿ ವಿವಾಹವಾಗಿದ್ದರು.

 ಪತ್ನಿ ಕೊಂದು ಫ್ರಿಡ್ಜ್‌ನಲ್ಲಿ ತಲೆ, ಬೆರಳು ಕತ್ತರಿಸಿಟ್ಟ ಪಾಪಿ ಪತಿ!

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆಕೆಯ ತಲೆ, ಬೆರಳುಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಭೀಕರ ಘಟನೆ ಬೆಳಕಿಗೆ ಬಂದಿದೆ.25 ವರ್ಷದ ರಿಯಾ ತಾಲ್ಲೂಕುದಾರ್‌ ಗೋಸ್ವಾಮಿ ಹತ್ಯೆಯಾದ ದುರ್ದೈವಿ. 6 ತಿಂಗಳ ಹಿಂದೆ ರಾಮಾನುಜನ್‌ ಗೋಸ್ವಾಮಿ ಎನ್ನುವವರನ್ನು ವರಿಸಿ ಗುವಾಹಟಿಯ ಬಸಿಷ್ಠಪುರದ ಫ್ಲಾಟ್‌ವೊಂದರಲ್ಲಿ ವಾಸವಾಗಿದ್ದರು.

ಈ ನಡುವೆ ಪತಿ- ಪತ್ನಿಯ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ.ಹೆಂಡತಿಯನ್ನು ಭೀಕರವಾಗಿ ಕೊಂದ ಪತಿ, ಬಳಿಕ ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಿ ಪಾಲಿಥೀನ್‌ ಚೀಲದೊಳಗೆ ತುಂಬಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಭಾನುವಾರ ರಾತ್ರಿ ಮನೆಯಿಂದ ದುರ್ವಾಸನೆ ಬರುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ರಿಯಾ ಪತಿಯೇ ಪೊಲೀಸರಿಗೆ ಶರಣಾಗಿದ್ದು, ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ.

ಸೇನೆಗಾಗಿ ₹1.1 ಲಕ್ಷ ಕೋಟಿ ವೆಚ್ಚದ ಉಪಕರಣ ಖರೀದಿ

ನವದೆಹಲಿ: ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಸುಮಾರು 1.10 ಲಕ್ಷ ಕೋಟಿ ರು. ವೆಚ್ಚದ ಮಿಲಿಟರಿ ಹಾರ್ಡ್‌ವೇರ್ ಮತ್ತು ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿಯ (ಡಿಎಸಿ) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಸೇನೆಗಾಗಿ ಪರಮಾಣು ಶೋಧಕ ಹಾಗೂ ಉನ್ನತ ಚಲನಶೀಲ ವಾಹನಗಳು, ಸ್ವಯಂ-ಚಾಲಿತ ಯಾಂತ್ರಿಕ ಮೈನ್ ಲೇಯರ್‌ಗಳು, ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮತ್ತು ಟ್ರಾಲ್ ಟ್ಯಾಂಕ್‌ಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ.

ನೌಕಾಪಡೆಗಾಗಿ ರಾಡಾರ್‌ಗಳು ಹಾಗೂ ಸಮುದ್ರ ಗ್ಯಾಸ್ ಟರ್ಬೈನ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಖರೀದಿಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ವಿವಿಧ ಪ್ರಸ್ತಾವನೆಗಳಿಗೂ ಒಪ್ಪಿಗೆ ನೀಡಲಾಗಿದೆ. ಈ ಎಲ್ಲಾ ಪ್ರಸ್ತಾವನೆಗಳಲ್ಲಿ ಶೇ.98ರಷ್ಟು ಉಪಕರಣಗಳನ್ನು ದೇಶೀಯ ಉದ್ಯಮದಿಂದಲೇ ಖರೀದಿಸಲಾಗುವುದು. ಇದು ಸ್ವಾವಲಂಬಿ ಭಾರತದ ಕನಸಿಗೆ ಮತ್ತಷ್ಟು ಬಲ ತುಂಬಲಿದೆ.

ಮೊದಲ ಬಾರಿ ದಿಲ್ಲಿ ಬದಲು ಗುಜರಾತಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ನವದೆಹಲಿ: 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯ ಬದಲು ಗುಜರಾತ್‌ನ ಕೆವಾಡಿಯಾದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಸೆ.22ರಂದು ನಡೆಯಲಿರುವ ಈ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಕೆವಾಡಿಯಾವನ್ನು ಏಕತಾ ನಗರ್‌ ಆಗಿ ಮರು ನಾಮಕರಣ ಮಾಡಲಾಗಿದ್ದು, ಇಲ್ಲಿ ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಅವರ ಏಕತೆಯ ಮೂರ್ತಿ ಇದೆ.

1954ರಲ್ಲಿ ಮೊದಲ ಸಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿತ್ತು. ಆ ಬಳಿಕ ಎಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭಗಳು ದೆಹಲಿಯಲ್ಲೇ ನಡೆಯುತ್ತಿದ್ದವು. ಇದೇ ಮೊದಲ ಬಾರಿಗೆ ಈ ಸಂಪ್ರದಾಯ ಮುರಿದು ಗುಜರಾತ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಆರ್ಟಿಕಲ್‌ 370 ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಯಾಮಿ ಗೌತಮ್‌ ಅವರು ಅತ್ಯುತ್ತಮ ನಟಿ, ಮಲಯಾಳಂ ಸೂಪರ್‌ಸ್ಟಾರ್‌ ಮೊಮ್ಮೊಟ್ಟಿ ಮತ್ತು ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್‌ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೊಮ್ಮಟ್ಟಿ ಅವರಿಗೆ ಬ್ರಹ್ಮಯುಗಂ ಮತ್ತು ಕಾರ್ತಿಕ್‌ ಆರ್ಯನ್‌ ್ವರಿಗೆ ಚಂದು ಚಾಂಪಿಯನ್‌ ಚಿತ್ರಕ್ಕಾಗಿ ಈ ಪ್ರಶಸ್ತಿ ದೊರಕಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೋರ್ನೋಗ್ರಫಿಗೆ ಸಕ್ರಮಕ್ಕೆ ಉಕ್ರೇನ್‌ ಚಿಂತನೆ
ಜೈಲಲ್ಲಿದ್ರೂ ಮರಾಠಿ ಬರಲಿಲ್ಲ : ಸಂಜಯ ದತ್ ಹೇಳಿಕೆ ವಿವಾದ