ಸುಳ್ಳು ಮತ್ತು ಜನರ ದಾರಿತಪ್ಪಿಸುವ ಜಾಹೀರಾತು ನೀಡುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟ ಹೊರತಾಗಿಯೂ ಮತ್ತೆ ಜಾಹೀರಾತು ನೀಡುತ್ತಿರುವ ಯೋಗ ಗುರು ಬಾಬಾ ರಾಮದೇವ್ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿ: ‘ನಮ್ಮ ಉತ್ಪನ್ನಗಳು ಹಲವು ರೀತಿಯ ಕಾಯಿಲೆಗಳನ್ನು ಕಾಯಂ ಆಗಿ ಗುಣಪಡಿಸುತ್ತವೆ ಎಂಬ ಸುಳ್ಳು ಮತ್ತು ಜನರ ದಾರಿತಪ್ಪಿಸುವ ಜಾಹೀರಾತು ನೀಡುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟ ಹೊರತಾಗಿಯೂ ಮತ್ತೆ ಜಾಹೀರಾತು ನೀಡುತ್ತಿರುವ ಯೋಗ ಗುರು ಬಾಬಾ ರಾಮದೇವ್ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಅಲ್ಲದೆ, ನ್ಯಾಯಾಂಗ ನಿಂದನೆ ಮೊಕದ್ದಮೆ ಏಕೆ ದಾಖಲಿಸಬಾರದು ಎಂದು ಪ್ರಶ್ನಿಸಿದೆ ಹಾಗೂ ಜಾಹೀರಾತು ಪ್ರಸಾರ ಮಾಡದಂತೆ ಆದೇಶಿಸಿದೆ.
‘ಸುಳ್ಳು ಮತ್ತು ದಿಕ್ಕು ತಪ್ಪಿಸುವ ಜಾಹೀರಾತು ನೀಡಬಾರದು, ಯಾವುದೇ ವೈದ್ಯಕೀಯ ಪದ್ಧತಿ ದೂಷಿಸಬಾರದು ಎಂಬ ನಮ್ಮ ಆದೇಶ ಪಾಲಿಸುವುದಾಗಿ ಭರವಸೆ ನೀಡಿದ ಹೊರತಾಗಿಯೂ ಮತ್ತೆ ಅಂಥ ಘಟನೆ ಮರುಕಳಿಸುತ್ತಿದೆ.
ಹೀಗಾಗಿ ನಿಮ್ಮ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ಹೇಳಿ ಪತಂಜಲಿ ಆರ್ಯುವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣಗೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ ಇಂಥ ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಇಡೀ ದೇಶದ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸಂಸ್ಥೆ ವಿರುದ್ಧ ಯಾವುದೇ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರಚಾರದ ಭರಾಟೆಯಲ್ಲಿ ಅಲೋಪತಿ ವೈದ್ಯ ಪದ್ಧತಿ ಬಗ್ಗೆ ರಾಮದೇವ್ ಅವರ ಸಂಸ್ಥೆ ಅಪಪ್ರಚಾರ ನಡೆಸಿದೆ ಎಂದು ಭಾರತೀಯ ವೈದ್ಯ ಮಂಡಳಿ (ಐಎಂಎ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅದರ ವಿಚಾರಣೆಯನ್ನು ಪೀಠ ನಡೆಸುತ್ತಿದೆ.