ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ನೀಟ್‌ ಮರುಪರೀಕ್ಷೆಗೆ ಸುಪ್ರೀಂ ಕೋರ್ಟ್‌ ನಕಾರ

KannadaprabhaNewsNetwork |  
Published : Jul 24, 2024, 12:20 AM ISTUpdated : Jul 24, 2024, 07:07 AM IST
 ಸುಪ್ರೀಂ ಕೋರ್ಟ್‌ | Kannada Prabha

ಸಾರಾಂಶ

ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ‘ನೀಟ್‌-ಯುಜಿ’ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ಹೊಡಿಸಿದ್ದು, ಮರುಪರೀಕ್ಷೆಯ ಪ್ರಶ್ನೆಯೇ ಇಲ್ಲ’ ಎಂದು ತೀರ್ಪು ನೀಡಿದೆ.

 ನವದೆಹಲಿ : ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ‘ನೀಟ್‌-ಯುಜಿ’ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ಹೊಡಿಸಿದ್ದು, ‘2 ಕೇಂದ್ರಗಳಲ್ಲಿ ಮಾತ್ರ ಅಕ್ರಮ ನಡೆದಿದೆ. 

ದೇಶದೆಲ್ಲೆಡೆ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹೀಗಾಗಿ ಮರುಪರೀಕ್ಷೆಯ ಪ್ರಶ್ನೆಯೇ ಇಲ್ಲ’ ಎಂದು ತೀರ್ಪು ನೀಡಿದೆ. ಇದರಿಂದಾಗಿ ಕಳೆದ 2 ತಿಂಗಳಿಂದ ನಡೆದಿದ್ದ ಪರೀಕ್ಷೆಯ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದ್ದು, ಮುಂದಿನ ಕೌನ್ಸೆಲಿಂಗ್‌ ಹಾದಿ ಸುಗಮವಾಗಿದೆ.ನೀಟ್‌ನಲ್ಲಿ ದೇಶವ್ಯಾಪಿ ಅಕ್ರಮ ನಡೆದಿದ್ದು, ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿವೆ ಹಾಗೂ ಕೆಲವು ಆಯ್ದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಗ್ರೇಸ್‌ ಅಂಕ ನೀಡಲಾಗಿದೆ. 

ಹೀಗಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದ್ದು, ಮರುಪರೀಕ್ಷೆ ನಡೆಸಬೇಕು ಎಂದು ಸರಣಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಇವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ, ನ್ಯಾ। ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ। ಮನೋಜ್‌ ಮಿಶ್ರಾ ಅವರ ಪೀಠ, ‘ಪಟನಾ ಮತ್ತು ಹಜಾರಿಬಾಗ್‌ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬುದು ನಿರ್ವಿವಾದ. 

ಅಲ್ಲಿನ 155 ವಿದ್ಯಾರ್ಥಿಗಳು ,ಮಾತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಫಲಾನುಭವಿಗಳಾಗಿದ್ದಾರೆ ಎಂಬುದು ಸಿಬಿಐ ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ ಇಡೀ ದೇಶಾದ್ಯಂತ ಪರೀಕ್ಷಾ ಅಕ್ರಮ ನಡೆದಿದೆ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳಿಲ್ಲ. ಮರುಪರೀಕ್ಷೆಗೆ ಆದೇಶ ನೀಡಿದರೆ ಪರೀಕ್ಷೆಗೆ ಕೂತಿದ್ದ ಎಲ್ಲ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮರುಪರೀಕ್ಷೆಗೆ ಆದೇಶ ನೀಡಲಾಗದು’ ಎಂದು ಹೇಳಿತು.

ಅಲ್ಲದೆ, ‘ಮರುಪರೀಕ್ಷೆಗೆ ಆದೇಶ ನೀಡಿದರೆ ಮುಂದಿನ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಯ ಮೇಲೂ ಪರಿಣಾಮ ಬೀರುತ್ತದೆ. ಇಡೀ ಮುಂದಿನ ಪ್ರಕ್ರಿಯೆಯೇ ಹಳಿ ತಪ್ಪುತ್ತದೆ. ಇದು ಭವಿಷ್ಯದಲ್ಲಿ ವೈದ್ಯರ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು’ ಎಂದೂ ಹೇಳಿತು.ಇದಕ್ಕೂ ಮುನ್ನ ಕೆಲವು ವಾರ ಮೊದಲು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ಕೃಪಾಂಕ ಪಡೆದ ಸುಮಾರು 1600 ವಿದ್ಯಾರ್ಥಿಗಳ ಮರುಪರೀಕ್ಷೆಗೆ ಆದೇಶಿಸಿತ್ತು. ಅಲ್ಲದೆ, ಅಕ್ರಮ ಎಷ್ಟು ನಡೆದಿದೆ ಎಂಬುದರ ಮೌಲ್ಯಮಾಪನ ಮಾಡಲು ಕೇಂದ್ರವಾರು ಹಾಗೂ ನಗರವಾರು ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!