ದ್ವೇಷ ರಾಜಕೀಯ ತಿರಸ್ಕರಿಸಿ ಎಂದು ಜನತೆಗೆ ಸೋನಿಯಾ ಮನವಿ ಮಾಡಿದ್ದು, ಸುಳ್ಳು-ದ್ವೇಷ ಹರಡುವ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿ ಉಜ್ವಲ, ಸಮಾನತೆ ಇರುವ ಭವಿಷ್ಯಕ್ಕಾಗಿ ‘ಕೈ’ ಬಲಪಡಿಸಿ ಎಂದು ಕೋರಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಅಧಿನಾಯಕಿ ಉಜ್ವಲ ಮತ್ತು ಸಮಾನತೆಯುಳ್ಳ ಭವಿಷ್ಯ ಕಾಣಲು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಚಲಾಯಿಸುವಂತೆ ಹಾಗೂ ಸುಳ್ಳು-ದ್ವೇಷ ಹರಡುವ ಬಿಜೆಪಿ ಸೋಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ‘ಭಾರತದಲ್ಲಿ ನಿರುದ್ಯೋಗ, ಮಹಿಳಾ ದೌರ್ಜನ್ಯ ಮತ್ತು ದಲಿತರ ತಾರತಮ್ಯ ತಾರಕಕ್ಕೇರಿದೆ. ಇವುಗಳನ್ನು ಹೋಗಲಾಡಿಸಿ ಉಜ್ವಲ ಮತ್ತು ಸರ್ವರಿಗೂ ಸಮಾನ ಅವಕಾಶ ನೀಡುವಂತಹ ಸಮಾಜವನ್ನು ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ರಕ್ಷಣೆಯ ಜೊತೆಗೆ ಬಡವರು, ಯುವಜನರು, ಮಹಿಳೆಯರು, ರೈತರು ಮತ್ತು ಕಾರ್ಮಿಕರ ರಕ್ಷಣೆಗೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ’ ಎಂದು ಕರೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ: ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ಬಿಜೆಪಿಯು ಸುಳ್ಳು ಮತ್ತು ದ್ವೇಷವನ್ನು ಬಿತ್ತುತ್ತಿದೆ. ಬಿಜೆಪಿಯು ಕೇವಲ ಅಧಿಕಾರಕೇಂದ್ರಿತವಾಗಿದ್ದು, ಸಮಾಜದಲ್ಲಿ ಸರ್ವರನ್ನೂ ಒಳಗೊಂಡು ಮುನ್ನುಗ್ಗುವ ಸಂಕಲ್ಪವನ್ನು ಮರೆತಿದೆ’ ಎಂದು ವಾಗ್ದಾಳಿ ನಡೆಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.