ಒಟಿಟಿ ಮತ್ತು ಯೂಟ್ಯೂಬ್‌, ಆನ್‌ಲೈನ್‌ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಿಗೆ ಅಂಕುಶ : ಕೇಂದ್ರ ಚಿಂತನೆ

KannadaprabhaNewsNetwork |  
Published : Feb 23, 2025, 12:32 AM ISTUpdated : Feb 23, 2025, 04:58 AM IST
ಒಟಿಟಿ | Kannada Prabha

ಸಾರಾಂಶ

ಯೂಟ್ಯೂಬರ್‌ ರಣವೀರ್‌ ಅಲಹಬಾದಿಯಾ ಅವರ ಅಶ್ಲೀಲ ಹಾಸ್ಯ ವಿವಾದದ ಬೆನ್ನಲ್ಲೇ ಒಟಿಟಿ ಮತ್ತು ಯೂಟ್ಯೂಬ್‌ನಂಥ ಆನ್‌ಲೈನ್‌ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಿಗೆ ಮತ್ತಷ್ಟು ಕಠಿಣ ನಿಯಂತ್ರಣ ಕ್ರಮಗಳನ್ನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ನವದೆಹಲಿ: ಯೂಟ್ಯೂಬರ್‌ ರಣವೀರ್‌ ಅಲಹಬಾದಿಯಾ ಅವರ ಅಶ್ಲೀಲ ಹಾಸ್ಯ ವಿವಾದದ ಬೆನ್ನಲ್ಲೇ ಒಟಿಟಿ ಮತ್ತು ಯೂಟ್ಯೂಬ್‌ನಂಥ ಆನ್‌ಲೈನ್‌ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಿಗೆ ಮತ್ತಷ್ಟು ಕಠಿಣ ನಿಯಂತ್ರಣ ಕ್ರಮಗಳನ್ನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಬಗ್ಗೆ ಶನಿವಾರ ನಿಶಿಕಾಂತ್‌ ದುಬೆ ನೇತೃತ್ವದ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ, ‘ಆನ್‌ಲೈನ್ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶಿಸಲ್ಪಡುವ ಅಶ್ಲೀಲ ಮತ್ತು ಹಿಂಸೆಯ ಕಂಟೆಂಟ್‌ಗಳಿಗೆ ಸಂಬಂಧಿಸಿ ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಅಂಥ ಹಾನಿಕಾರಕ ಕಂಟೆಂಟ್‌ಗಳನ್ನು ನಿಯಂತ್ರಿಸಲು ಹೊಸ ಕಾನೂನು ನಿಯಮಾವಳಿ ರೂಪಿಸುವ ಹಾಗೂ ಹಾಲಿ ಇರುವ ಶಾಸನಬದ್ಧ ನಿಬಂಧನೆಗಳ ಪರಿಶೀಲಿಸುವ ಕೆಲಸ ಆಗುತ್ತಿದೆ’ ಎಂದು ತಿಳಿಸಿದೆ.

‘ಆನ್‌ಲೈನ್‌ಗಳ ಮೂಲಕ ಅಶ್ಲೀಲ ಮತ್ತು ಹಿಂಸಾಚಾರದ ಪ್ರದರ್ಶನ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆಗುತ್ತಿದೆ ಎಂಬ ಭಾವನೆ ಸಮಾಜದಲ್ಲಿ ಹೆಚ್ಚುತ್ತಿದೆ. ಇಂಥ ಹಾನಿಕಾರಕ ಅಂಶಗಳನ್ನು ನಿಯಂತ್ರಿಸಲು ಹಾಲಿ ಕಾನೂನಿನಲ್ಲಿ ಕೆಲ ನಿಯಮಾವಳಿಗಳಿವೆ. ಆದರೂ, ಈ ರೀತಿಯ ಕಂಟೆಂಟ್‌ಗಳನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ಹಾಗೂ ಪರಿಣಾಮಕಾರಿ ಕಾನೂನು ರೂಪಿಸುವ ಬೇಡಿಕೆ ಹೆಚ್ಚುತ್ತಿದೆ.’

‘ಈ ರೀತಿಯ ಬೇಡಿಕೆ ಹಾಗೂ ಆನ್‌ಲೈನ್‌ ಕಂಟೆಂಟ್‌ಗಳ ಕುರಿತು ಕೇಳಿ ಬರುತ್ತಿರುವ ದೂರುಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ’ ಎಂದು ಸಚಿವಾಲಯವು ಹೇಳಿದೆ.

ಇಂಡಿಯಾ ಗಾಟ್‌ ಲೆಟೆಂಟ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ರಣವೀರ್‌ ಅಲಹಬಾದಿಯಾ ಅವರ ಅಶ್ಲೀಲ ಹೇಳಿಕೆ ವಿವಾದಕ್ಕೆ ಗುರಿಯಾದ ಬಳಿಕ ಹೈಕೋರ್ಟ್‌, ಸುಪ್ರೀಂ ಕೋರ್ಟ್‌, ಸಂಸದರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದಂಥ ಶಾಸನಬದ್ಧ ಸಂಸ್ಥೆಗಳು ಆನ್‌ಲೈನ್‌ ಕಂಟೆಂಟ್‌ಗಳ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿವೆ.

ಈ ಹಿನ್ನೆಲೆಯಲ್ಲಿ ಫೆ.13ರಂದು ಸಂಸದೀಯ ಸ್ಥಾಯಿ ಸಮಿತಿಯು ಹೊಸ ತಂತ್ರಜ್ಞಾನ ಮತ್ತು ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳ ವಿಚಾರದಲ್ಲಿ ಹಾಲಿ ಕಾಯ್ದೆಗಳಿಗೆ ಸಂಬಂಧಿಸಿ ತಿದ್ದುಪಡಿಯ ಅಗತ್ಯ ಕುರಿತು ಒತ್ತಾಯಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಇದೀಗ ಆನ್‌ಲೈನ್‌ ಕಂಟೆಂಟ್‌ಗಳ ನಿಯಂತ್ರಣಕ್ಕೆ ಮೂಗುದಾರ ಹಾಕುವ ಕುರಿತು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ