ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭಾ ಸದಸ್ಯೆಯಾಗಿ ನಾಮಾಂಕಿತವಾಗಿದ್ದ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಹಾಗೂ ಸಮಾಜಸೇವಕಿ ಸುಧಾ ಮೂರ್ತಿ ರಾಜ್ಯಸಭಾ ಸದಸ್ಯೆಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸಭಾ ಸ್ಪೀಕರ್ ಅವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಪತಿ ನಾರಾಯಣಮೂರ್ತಿ ಸಮ್ಮುಖದಲ್ಲಿ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸುಧಾಮೂರ್ತಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಹಾಜರಿದ್ದರು.
ಸುಧಾ ಮೂರ್ತಿಯವರು ಟೆಲ್ಕೊ ಕಂಪನಿಯಲ್ಲಿ ಮೊದಲ ಮಹಿಳಾ ಎಂಜಿನಿಯರ್ ಆಗಿ ದುಡಿದ ಹಣವನ್ನು ಉಳಿಸಿ ಇನ್ಫೋಸಿಸ್ ಸಂಸ್ಥೆ ಹುಟ್ಟುಹಾಕಲು ತಮ್ಮ ಪತಿಗೆ ನೆರವಾಗಿದ್ದರು. ಬಳಿಕ ಸಮಾಜಸೇವಕಿಯಾಗಿ ಹೆಸರು ಮಾಡಿದ್ದರು.