;Resize=(412,232))
ನವದೆಹಲಿ: ತೃಣಮೂಲ ಕಾಂಗ್ರೆಸ್ನ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದಾಗ ಮಧ್ಯಪ್ರವೇಶಿಸಿ, ದಾಳಿಗೆ ಅಡ್ಡಿ ಮಾಡಿದ್ದ ಪಕ್ಷದ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇ.ಡಿ. ದಾಖಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ಪೀಠ, ‘ಒಂದು ವೇಳೆ ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಬೇರಿನ್ಯಾವುದೋ ಪಕ್ಷದ ಸರ್ಕಾರ ರಾಜ್ಯದಲ್ಲಿದ್ದರೆ ಅವರು ಕೂಡ ನಿಮ್ಮಂತೆಯೇ ವರ್ತಿಸಿದರೆ ಏನಾಗಬಹುದು? ಎಂದು ಖಾರವಾಗಿ ಪ್ರಶ್ನಿಸಿದೆ.
ಅಲ್ಲದೆ, ‘ಇ.ಡಿ. ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರವೇ ಇಲ್ಲವೇ? ಇ.ಡಿ. ಅಧಿಕಾರಿಗಳು ಎಂಬ ಮಾತ್ರಕ್ಕೆ ಅವರು ಭಾರತೀಯ ಪ್ರಜೆಗಳಾಗುವ ಹಕ್ಕು ಕಳೆದುಕೊಳ್ಳುತ್ತಾರೆಯೇ’ ಎಂದು ಪ್ರಶ್ನಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಮೇರೆಗೆ ಐಪ್ಯಾಕ್ ಸಂಸ್ಥೆಯ ಕೋಲ್ಕತಾ ಕಚೇರಿ ಮೇಲೆ ಜನವರಿಯಲ್ಲಿ ಇ.ಡಿ. ನಡೆಸಿದ ದಾಳಿ ವೇಳೆ ಮಮತಾ ಬ್ಯಾನರ್ಜಿ, ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆಂದು ಇ.ಡಿ. ಆರೋಪಿಸಿತ್ತು. ಪ್ರಕರಣದಲ್ಲಿ ಕೆಲ ಇ.ಡಿ. ಅಧಿಕಾರಿಗಳು ವೈಯಕ್ತಿಕವಾಗಿಯೂ ಅರ್ಜಿ ಸಲ್ಲಿಸಿದ್ದರು.
ಆದರೆ, ಪಶ್ಚಿಮ ಬಂಗಾಳ ಸರ್ಕಾರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇ.ಡಿ.ಗೆ ಪೊಲೀಸರ ಮುಂದೆ ಹೋಗುವ ಅವಕಾಶವಿದ್ದರೂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸರಿಯಲ್ಲ ಎಂದು ವಾದಿಸಿದರು.