3 ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌

KannadaprabhaNewsNetwork |  
Published : Oct 09, 2025, 02:00 AM IST
ನೊಬೆಲ್‌ | Kannada Prabha

ಸಾರಾಂಶ

ಮೂವರು ದಿಗ್ಗಜ ವಿಜ್ಞಾನಿಗಳಾದ ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌ ಮತ್ತು ಅಮೆರಿಕದ ಒಮರ್‌ ಎಂ.ಯಾಗ್ಹಿ ಅವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್‌ ಒಲಿದಿದೆ.

- ಮೆಟಲ್‌ ಆರ್ಗ್ಯಾನಿಕ್‌ ಫ್ರೇಮ್‌ವರ್ಕ್‌ ಅಭಿವೃದ್ಧಿಗೆ ಪ್ರಶಸ್ತಿ

- ಜಪಾನ್‌, ಆಸ್ಟ್ರೇಲಿಯಾ, ಅಮೆರಿಕದ ವಿಜ್ಞಾನಿಗಳಿಗೆ ಗೌರವ

- ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌, ಅಮೆರಿಕದ ಒಮರ್‌ ಎಂ.ಯಾಗ್ಹಿಗೆ ಪ್ರಶಸ್ತಿಸ್ಟಾಕ್‌ಹೋಮ್‌: ಮೂವರು ದಿಗ್ಗಜ ವಿಜ್ಞಾನಿಗಳಾದ ಜಪಾನಿನ ಸುಸುಮು ಕಿಟಗವಾ, ಆಸ್ಟ್ರೇಲಿಯಾದ ರಿಚರ್ಡ್‌ ರಾಬ್ಸನ್‌ ಮತ್ತು ಅಮೆರಿಕದ ಒಮರ್‌ ಎಂ.ಯಾಗ್ಹಿ ಅವರಿಗೆ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್‌ ಒಲಿದಿದೆ.

‘ಮೆಟಲ್‌-ಆರ್ಗ್ಯಾನಿಕ್‌ ಚೌಕಟ್ಟು’ (ಎಂಒಎಫ್‌) ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇವರ ಈ ಸಂಶೋಧನೆಯು ರಸಾಯನ ಶಾಸ್ತ್ರದ ಅಧ್ಯಯನಕ್ಕೆ ಹೊಸ ದಿಕ್ಕು ನೀಡಿದೆ ಎಂದು ಹೇಳಲಾಗಿದೆ.ಸಂಶೋಧನೆಯ ಪ್ರಯೋಜನ ಏನು?:

ಇವರು ಅಭಿವೃದ್ಧಿಪಡಿಸಿದ ಸಂರಚನೆಯು ವಿಷಕಾರಿ ಗ್ಯಾಸ್‌ಗಳನ್ನು ಹೀರಿಕೊಳ್ಳಲು, ಹಿಡಿದಿಟ್ಟುಕೊಳ್ಳಲು ನೆರವು ನೀಡುತ್ತದೆ. ಜತೆಗೆ, ಈಗ ಸಾಮಾನ್ಯವಾಗಿ ಬಳಕೆಯಾಗುವ ವಾತಾವರಣದಿಂದ ಕಾರ್ಬನ್‌ ಡೈಆಕ್ಸೈಡ್‌ ಅನ್ನು ಹೀರಿಕೊಳ್ಳುವ ಅಥವಾ ಶುಷ್ಕ ಮರುಭೂಮಿಯ ಗಾಳಿಯಲ್ಲಿ ನೀರನ್ನು ಹೀರಿಕೊಳ್ಳುವ ವಸ್ತುಗಳ ಅಭಿವೃದ್ಧಿಗೆ ಪೂರಕವಾಗಿದೆ.

ಏನಿದು ಎಂಒಎಫ್‌?:

ವಿಭಿನ್ನ ಅಣುಗಳನ್ನು ವಿಶೇಷ ರೀತಿಯಲ್ಲಿ ಸಂಯೋಜಿಸಿ ವಿಶಿಷ್ಟವಾದ ಸಂರಚನೆಯನ್ನು ಈ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಸಂರಚನೆ ಅಥವಾ ಎಂಒಎಫ್‌ನ ವಿಶೇಷವೇನೆಂದರೆ ಇದರಲ್ಲಿ ಸಾಕಷ್ಟು ಖಾಲಿ ಜಾಗಗಳೂ ಇದ್ದು, ಅದರ ಮೂಲಕ ಗ್ಯಾಸ್‌ ಮತ್ತು ಇತರೆ ರಾಸಾಯನಿಕಗಳನ್ನು ಸುಲಭವಾಗಿ ಹರಿಸಬಹುದಾಗಿದೆ. ಈ ಸಂರಚನೆ ಇದೀಗ ‘ಮೆಟಲ್‌ ಆರ್ಗ್ಯಾನಿಕ್‌ ಫ್ರೇಮ್‌ವರ್ಕ್‌’ ಆಗಿ ಕರೆಯಲ್ಪಟ್ಟಿದೆ. ಇದನ್ನು ನಾವು ‘ಅಣು ಆರ್ಕಿಟೆಕ್ಚರ್‌’ ಎಂದೂ ಕರೆಯಬಹುದಾಗಿದೆ. ಪರಮಾಣು ಮತ್ತು ಅಣುಗಳನ್ನು ಇಟ್ಟಿಗೆಗಳ ರೀತಿ ಬಳಸಿ ಈ ವಿಶೇಷವಾದ ಸಂರಚನೆ ನಿರ್ಮಿಸಲಾಗಿದೆ.

ಇದೀಗ ನೊಬೆಲ್‌ ಗೌರವಕ್ಕೆ ಪಾತ್ರವಾಗಿರುವ ರಾಬ್ಸನ್‌(88) ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಿಟಾಗವಾ(74) ಅವರು ಜಪಾನಿನ ಕ್ಯೋಟೋ ವಿವಿಯಲ್ಲಿ ಹಾಗೂ ಯಾಗ್ಹಿ(60) ಅವರು ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂವರೂ ವಿಜ್ಞಾನಿಗಳು ಪ್ರತ್ಯೇಕವಾಗಿ ಸಂಶೋಧನೆ ನಡೆಸಿದರೂ ಪರಸ್ಪರರ ಸಂಶೋಧನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಮೂಲಕ 1989ರಲ್ಲಿ ಎಂಒಎಫ್‌ಗಳನ್ನು ಕಂಡುಹಿಡಿದು ರಸಾಯನ ಶಾಸ್ತ್ರ ಜಗತ್ತಿಗೆ ಹೊಸ ಬೆಳಕು ನೀಡಿದ್ದಾರೆ.

-

ಇಂದು ನೊಬೆಲ್‌ ಸಾಹಿತ್ಯ ಪ್ರಶಸ್ತಿ

ಸ್ಟಾಕ್‌ಹೋಮ್‌: ಗುರುವಾರ ನೊಬೆಲ್‌ ಸಾಹಿತ್ಯ ಪ್ರಶಸ್ತಿ, ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು ಸೋಮವಾರ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆ ಆಗಲಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚರ್ಚೆಯೇ ನಡೆಯದ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ!
ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಹೋಮ ಮಾಡಿ ಶುದ್ಧೀಕರಣ!