ತಿರುವನಂತಪುರಂ : ‘ಕರ್ನಾಟಕದ ಕೊಲ್ಲೂರು ದೇಗುಲಕ್ಕೆ ಕೇರಳ ಸಿಎಂ ವಿ.ಡಿ. ಸತೀಶನ್ ಅವರು ಭೇಟಿ ನೀಡುವ ಮೂಲಕ ಮೃದು ಹಿಂದುತ್ವದ ಧೋರಣೆ ಹೊಂದಿದ್ದಾರೆ’ ಎನ್ನುವ ಆರೋಪಗಳಿಗೆ ಸ್ವತಃ ತಿರುಗೇಟು ನೀಡಿರುವ ಸಿಎಂ, ‘ದೇಗುಲ ಭೇಟಿ ನನ್ನ ವೈಯಕ್ತಿಕ ಹಕ್ಕು’ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸತೀಶನ್, ‘ಕರ್ನಾಟಕದ ದೇಗುಲಕ್ಕೆ ನಾನು ಕಳೆದ 37 ವರ್ಷಗಳಿಂದಲೂ ಭೇಟಿ ನೀಡುತ್ತಿದ್ದೇನೆ. ನಾನು ಮೂಕಾಂಬಿಕೆ ಭಕ್ತ. ಅದನ್ನು ಹೇಳಲು ನನಗೆ ಸಂತೋಷವಿದೆ. ಆದರೆ ಅದನ್ನಿಟ್ಟುಕೊಂಡು ಮೃದು ಹಿಂದುತ್ವದ ನಾಯಕ ಎಂದು ಬಿಂಬಿಸುವುದು ಆಧಾರ ರಹಿತ.
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡುವುದು ನನ್ನ ವೈಯಕ್ತಿಕ ಹಕ್ಕು. ದೇವರಲ್ಲಿ ನಂಬಿಕೆಯಿಡುವ ಸಾಂವಿಧಾನಿಕ ಹಕ್ಕು ನನಗಿದೆ. ಅದು ಮೃದು ಹಿಂದುತ್ವ ಹೇಗಾಗುತ್ತದೆ?’ ಎಂದು ಪ್ರಶ್ನಿಸಿದರು.
‘ಬಹುತೇಕರು ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ನೀಡುತ್ತಾರೆ. ಆದರೆ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಬೇಕೆಂದು ಯಾರಾದಾರೂ ಹೇಳಬಹುದೇ? ಮುಖ್ಯಮಂತ್ರಿ ಆದ ತಕ್ಷಣ ದೇವಸ್ಥಾನಕ್ಕೆ ಭೇಟಿ ನೀಡುವುದು ನಿಲ್ಲಿಸಿದ್ದರೆ ಅದು ವಿಚಿತ್ರವಾಗಿರುತ್ತಿತ್ತು. ತಮ್ಮ ಪಕ್ಷದೊಳಗಿನ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ರಾಜಕೀಯ ವಿರೋಧಿಗಳು ಈ ವಿಷಯ ಎತ್ತುತ್ತಿದ್ದಾರೆ. ಆರೋಪಿಸುವುದಕ್ಕೆ ಅವರಿಗೆ ಬೇರೆ ವಿಚಾರಗಳಿಲ್ಲ. ಹಾಗಾಗಿ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.