ಈ ವರ್ಷದ 9-10ನೇ ಕ್ಲಾಸ್‌ಗೆ ಹೊಸ ತ್ರಿಭಾಷಾ ಸೂತ್ರ ಅನ್ವಯ ಇಲ್ಲ

Published : Jun 30, 2026, 10:13 AM IST
  Students

ಸಾರಾಂಶ

ತ್ರಿಭಾಷಾ ಸೂತ್ರದಡಿಯಲ್ಲಿ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡಿರುವ ಸದ್ಯ 9 ಮತ್ತು 10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ತ್ರಿಭಾಷಾ ಸೂತ್ರ ಈ ವರ್ಷದಿಂದಲೇ ಅನ್ವಯವಾಗುವುದಿಲ್ಲ ಎಂದು ಸಿಬಿಎಸ್‌ಇ ಸೋಮವಾರ ಸ್ಪಷ್ಟಪಡಿಸಿದೆ

  ನವದೆಹಲಿ :  ತ್ರಿಭಾಷಾ ಸೂತ್ರದಡಿಯಲ್ಲಿ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡಿರುವ ಸದ್ಯ 9 ಮತ್ತು 10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ತ್ರಿಭಾಷಾ ಸೂತ್ರ ಈ ವರ್ಷದಿಂದಲೇ ಅನ್ವಯವಾಗುವುದಿಲ್ಲ ಎಂದು ಸಿಬಿಎಸ್‌ಇ ಸೋಮವಾರ ಸ್ಪಷ್ಟಪಡಿಸಿದೆ. ಹೀಗಾಗಿ ಜು.1ರಿಂದ 2 ಭಾರತೀಯ ಭಾಷೆಗಳ ಅಧ್ಯಯನ ಕಡ್ಡಾಯ ಎಂಬ ಹೊಸ ನೀತಿಯಿಂದ ಆತಂಕಗೊಂಡಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.

ತ್ರಿಭಾಷಾ ಸೂತ್ರದಡಿ, ‘9ನೇ ತರಗತಿ ವಿದ್ಯಾರ್ಥಿಗಳು 2 ಭಾರತೀಯ ಭಾಷೆಗಳನ್ನು ಆಯ್ದುಕೊಳ್ಳುವುದು ಕಡ್ಡಾಯ. ಈ ನಿಯಮ ಜು.1ರಿಂದಲೇ ಜಾರಿಗೆ ಬರಲಿದೆ’ ಎಂದು ಸಿಬಿಎಸ್‌ಇ ಮೇ 15ರಂದು ಆದೇಶಿಸಿತ್ತು. ಇದರಿಂದ ಈಗಾಗಲೇ 2 ವಿದೇಶಿ ಭಾಷೆ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ ಎದುರಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಬೆನ್ನಲ್ಲೇ ಸಿಬಿಎಸ್‌ಇ ಪರಿಷ್ಕೃತ ಆದೇಶ ಹೊರಡಿಸಿದೆ. ‘ಹೊಸ ತ್ರಿಭಾಷಾ ಸೂತ್ರದ ತಕ್ಷಣದ ಜಾರಿಯಿಂದ ಈ ವರ್ಷದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಿದ್ದೇವೆ. ಈಗಾಗಲೇ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳು 3ನೇ ಭಾಷೆಯಾಗಿ ಒಂದು ಭಾರತೀಯ ಭಾಷೆಯನ್ನು ಆರಿಸಿಕೊಂಡು ಮುಂದುವರಿಯಬಹುದು. ಇವರು ಮುಂದಿನ ವರ್ಷ 10ನೇ ತರಗತಿಗೆ ಹೋದಾಗ ಈ 3ನೇ ಭಾಷೆಗೆ ಸಿಬಿಎಸ್‌ಇ ಪರೀಕ್ಷೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

10ನೇ ಕ್ಲಾಸ್‌ಗೆ ಈ ವರ್ಷವಿಲ್ಲ:

‘ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಬದಲಾವಣೆ ಇರುವುದಿಲ್ಲ. ಅವರು ಸದ್ಯ ಅಸ್ತಿತ್ವದಲ್ಲಿರುವ ದ್ವಿಭಾಷಾ ವ್ಯವಸ್ಥೆಯಡಿಯಲ್ಲಿ ಮುಂದುವರಿಯುತ್ತಾರೆ. ಈ ಬ್ಯಾಚ್ ಯಾವುದೇ 3ನೇ ಭಾಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದಿದೆ.

2026-27ನೇ ಸಾಲಿನಲ್ಲಿ ಹೊಸ ತ್ರಿಭಾಷಾ ನೀತಿ  

ಇನ್ನು, ‘2026-27ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಮತ್ತು ನಂತರದ ಬ್ಯಾಚ್‌ಗಳಿಗೆ, ಹೊಸ ತ್ರಿಭಾಷಾ ನೀತಿ ಸಂಪೂರ್ಣವಾಗಿ ಅನ್ವಯಿಸುತ್ತದೆ. ಅವರು 3 ಭಾಷೆಗಳನ್ನು ಅಧ್ಯಯನ ಮಾಡುತ್ತಾರೆ, ಅದರಲ್ಲಿ 2 ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರುತ್ತವೆ. ಇವರು 10ನೇ ತರಗತಿಗೆ ಬಂದಾಗ, 3ನೇ ಭಾಷೆಯ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ’ ಎಂದು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ, ಈಗಾಗಲೇ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡ 7ರಿಂದ 9ನೇ ತರಗತಿ ವಿದ್ಯಾರ್ಥಿಗಳು 10ನೇ ತರಗತಿವರೆಗೂ ಅದೇ ವಿಷಯದಲ್ಲಿ ಮುಂದುವರಿಯಬಹುದು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿತ್ತು. ಅದರ ಬೆನ್ನಲ್ಲೇ ಇದನ್ನು ಸದ್ಯದ 10ನೇ ತರಗತಿಗೂ ವಿಸ್ತರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಯೋಧ್ಯೆ ರಾಮಮಂದಿರದ ಹುಂಡಿ ಕನ್ನಕ್ಕೆ ಕರ್ನಾಟಕ ನಂಟು: ಅಖಿಲೇಶ್!
ಹೋಮ್ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು