ಕೋಲ್ಕತಾ : ತಮ್ಮ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿರುವುದುತಿಳಿಯುತ್ತಿದ್ದಂತೆ ಟಿಎಂಸಿ ಶಾಸಕ ಜಿಬನ್ ಕೃಷ್ಣ ಸಾಹ ಮನೆಯ ಕಾಂಪೌಂಡ್ ಹಾರಿ ಪರಾರಿಯಾದ ಘಟನೆ ಸೋಮವಾರ ಮುರ್ಷಿದಾಬಾದ್ನಲ್ಲಿ ನಡೆದಿದೆ. ಬಳಿಕ ಗದ್ದೆಯೊಂದರಲ್ಲಿ ಮೈತುಂಬಾ ಮಣ್ಣು ಮೆತ್ತಿಕೊಂಡ ಸ್ಥಿತಿಯಲ್ಲಿದ್ದ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಶಾಲಾ ಶಿಕ್ಷಕರ ನೇಮಕಾತಿ ವೇಳೆ ನಡೆದ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಗಾಗಿ ಇ.ಡಿ. ಅಧಿಕಾರಿಗಳು ಸಾಹ ಅವರ ಮನೆ ಹಾಗೂ ರಘುನಾಥಗಂಜ್ನಲ್ಲಿರುವ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಜತೆಗೆ ಶಾಸಕರ ಆಪ್ತ ಸಹಾಯಕನ ಮನೆಯಲ್ಲೂ ಶೋಧ ಕೈಗೊಂಡಿದ್ದರು.
ಅಕ್ರಮ ನೇಮಕಾತಿಗೆ ಸಂಬಂಧಿಸದಂತೆ ನಡೆದ ಹಣ ವರ್ಗಾವಣೆ ಬಗ್ಗೆ ಬಿರ್ಭೂಮ್ ಜಿಲ್ಲೆಯ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಈ ದಾಳೆ ನಡೆದಿತ್ತು. ‘ಸಾಕ್ಷ್ಯಗಳನ್ನು ನಾಶಗೊಳಿಸುವ ಸಲುವಾಗಿ ಅವರು ತಮ್ಮ ಮೊಬೈಲನ್ನು ಮನೆ ಸಮೀಪದಲ್ಲಿದ್ದ ಕೆರೆಗೆ ಎಸೆದಿದ್ದರು. ಆದರೆ ನಮ್ಮ ಅಧಿಕಾರಿಗಳು ಎರಡೂ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗುವುದು. ಸಾಹಾರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಅಕ್ರಮಕ್ಕೆ ಸಂಬಂಧಿಸಿದಂತೆ ಸಾಹಾ ಅವರ ಪತ್ನಿಯ್ನನೂ ವಿಚಾರಣೆಗೆ ಒಳಪಡಿಸಲಾಗಿತ್ತು. 2023ರ ಏಪ್ರಿಲ್ನಲ್ಲಿ ಇದೇ ಪ್ರಕರಣದಲ್ಲಿ ಸಾಹಾರನ್ನು ಸಿಬಿಐ ಬಂಧಿಸಿ, ಮೇನಲ್ಲಿ ಜಾಮೀನು ನೀಡಿತ್ತು.