ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಸ್ಥಗಿತ ಎಂದಿದ್ದೆ : ಟ್ರಂಪ್‌

KannadaprabhaNewsNetwork |  
Published : May 13, 2025, 01:08 AM ISTUpdated : May 13, 2025, 04:53 AM IST
ಟ್ರಂಪ್  | Kannada Prabha

ಸಾರಾಂಶ

 ‘ಯುದ್ಧವನ್ನು ನಿಲ್ಲಿಸಿದರೆ ನಿಮ್ಮೊಂದಿಗೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ಎಲ್ಲ ವ್ಯಾಪಾರವನ್ನು ನಿಲ್ಲಿಸುತ್ತೇವೆ ಎಂದು ಉಭಯ ದೇಶಗಳಿಗೆ ಹೇಳಿದ್ದೆ’ ಎಂದಿದ್ದಾರೆ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ‘ನಮ್ಮ ಮಧ್ಯಸ್ಥಿಕೆಯಲ್ಲೇ ಭಾರತ ಮತ್ತು ಪಾಕಿಸ್ತಾನದ ಕದನ ವಿರಾಮ ನಿರ್ಧಾರವಾಗಿತ್ತು’ ಎಂದು ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಯುದ್ಧವನ್ನು ನಿಲ್ಲಿಸಿದರೆ ನಿಮ್ಮೊಂದಿಗೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ಎಲ್ಲ ವ್ಯಾಪಾರವನ್ನು ನಿಲ್ಲಿಸುತ್ತೇವೆ ಎಂದು ಉಭಯ ದೇಶಗಳಿಗೆ ಹೇಳಿದ್ದೆ’ ಎಂದಿದ್ದಾರೆ. ಈ ಮೂಲಕ ಕದನವಿರಾಮಕ್ಕೆ ಅಮೆರಿಕವು ವ್ಯಾಪಾರ ಒಪ್ಪಂದದ ನೀತಿಯನ್ನು ದಾಳವಾಗಿ ಬಳಸಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಭಾರತ-ಪಾಕ್‌ ನಡುವಣ ಪರಮಾಣು ದಾಳಿ ತಡೆದಿದ್ದು ತಮ್ಮ ಸಾಧನೆ ಎಂದು ಬಣ್ಣಿಸಿದ್ದಾರೆ.

ಅಮೆರಿಕ-ಚೀನಾ ವ್ಯಾಪಾರ ಒಪ್ಪಂದವನ್ನು ಘೋಷಿಸುವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಟ್ರಂಪ್‌, ‘ಶನಿವಾರ ನನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಮತ್ತು ತಕ್ಷಣದ, ಬಹುಶಃ ಶಾಶ್ವತವಾದ ಕದನ ವಿರಾಮ ಜಾರಿಗೆ ಮಧ್ಯಸ್ಥಿಕೆ ವಹಿಸಿತು. ಇದು ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಅಪಾಯಕಾರಿ ಸಂಘರ್ಷವನ್ನು ಕೊನೆಗೊಳಿಸಿತು. ಅವರು ತೀವ್ರವಾಗಿ ಯುದ್ಧ ಮಾಡುತ್ತಿದ್ದರು. ಅದು ನಿಲ್ಲುವ ಲಕ್ಷಣವೇ ಇರಲಿಲ್ಲ. ನಾವು ಅವರ ವ್ಯಾಪಾರಕ್ಕೆ ಸಹಾಯ ಮಾಡಿದ್ದೇವೆ. ಯುದ್ಧವನ್ನು ನಿಲ್ಲಿಸಿದರೆ ನಿಮ್ಮೊಂದಿಗೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ಎಲ್ಲ ವ್ಯಾಪಾರವನ್ನು ನಿಲ್ಲಿಸುತ್ತೇವೆ ಎಂದು ಹೇಳಿದೆ. ಇದ್ದಕ್ಕಿದ್ದಂತೆ ಎರಡೂ ದೇಶಗಳು ತಾವು ಯುದ್ಧವನ್ನು ನಿಲ್ಲಿಸುತ್ತೇವೆ ಎಂದು ಮುಂದೆ ಬಂದವು. ಜೊತೆಗೆ ವ್ಯಾಪಾರ ಒಪ್ಪಂದವನ್ನು ನಮ್ಮಷ್ಟು ಪರಿಣಾಮಕಾರಿ ಯಾರೂ ಬಳಸಿಲ್ಲ’ ಎಂದಿದ್ದಾರೆ.

‘ನಾನು ವ್ಯಾಪಾರ ನಿಲ್ಲಿಸುವುದಾಗಿ ಹೇಳಿದ ತಕ್ಷಣ ಅವರು ಯುದ್ಧ ನಿಲ್ಲಿಸುತ್ತೇವೆ ಎಂದರು. ಯುದ್ಧ ನಿಲ್ಲಿಸಲು ಅವರಿಗೆ ಹಲವು ಕಾರಣಗಳಿರಬಹುದು. ಆದರೆ ವ್ಯಾಪಾರ (ಅಮೆರಿಕದೊಂದಿಗೆ) ಬಹುದೊಡ್ಡ ಕಾರಣ. ನಾವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿದ್ದೇವೆ. ಇದೀಗ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದ್ದೇವೆ. ನಾವು ಪರಮಾಣು ಸಂಘರ್ಷವೊಂದನ್ನು ತಪ್ಪಿಸಿದ್ದೇವೆ’ ಎಂದರು.

ಕದನವಿರಾಮ ಈಗ ಅಧಿಕೃತ ಜಾರಿ

ನವದೆಹಲಿ: ಭಾರತ-ಪಾಕ್‌ ಕದನವಿರಾಮ ಈಗ ಅಧಿಕೃತವಾಗಿದೆ. ಸೋಮವಾರ ನಡೆದ ಭಾರತ-ಪಾಕ್‌ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಸಭೆಯಲ್ಲಿ ಇನ್ನು ಗಡಿಯಲ್ಲಿ ಒಂದೂ ಗುಂಡು ಹಾರಿಸಬಾರದು ಎಂಬ ಒಪ್ಪಂದ ಮುಂದುವರಿಸಲು ಹಾಗೂ ಗಡಿಯಲ್ಲಿ ಪರಸ್ಪರ ಸೇನಾ ಕಡಿತ ಮಾಡಲು ಸಮ್ಮತಿಸಲಾಗಿದೆ.

PREV

Recommended Stories

ಕೆಬಿಸಿ: ₹25 ಲಕ್ಷ ಗೆದ್ದ ಕ। ಖುರೇಶಿ, ವಿಂಗ್‌ ಕ। ವ್ಯೋಮಿಕಾ, ಕ। ಪ್ರೇರಣಾ
ಮುಸ್ಲಿಮೇತರರಿಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನ: ಉ.ಖಂಡ ಕಾಯ್ದೆ