ನಾರಾಯಣನ್‌ ಇಸ್ರೋ ಮುಖ್ಯಸ್ಥರಾಗಿ ಅಧಿಕಾರ: ಸೋಮನಾಥ್‌ ನಿವೃತ್ತಿ

KannadaprabhaNewsNetwork | Published : Jan 15, 2025 12:46 AM

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೂತನ ಮುಖ್ಯಸ್ಥರಾಗಿ ವಿ. ನಾರಾಯಣನ್ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಯ ತನಕ ಇಸ್ರೋದ ಮುಖ್ಯಸ್ಥರಾಗಿದ್ದ ವಿ. ಸೋಮನಾಥನ್ ಮಂಗಳವಾರ ನಿವೃತ್ತಿಯಾಗಿದ್ದಾರೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೂತನ ಮುಖ್ಯಸ್ಥರಾಗಿ ವಿ. ನಾರಾಯಣನ್ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಯ ತನಕ ಇಸ್ರೋದ ಮುಖ್ಯಸ್ಥರಾಗಿದ್ದ ವಿ. ಸೋಮನಾಥನ್ ಮಂಗಳವಾರ ನಿವೃತ್ತಿಯಾಗಿದ್ದಾರೆ. 1984ರಲ್ಲಿ ಇಸ್ರೋ ಸೇರ್ಪಡೆಯಾಗಿದ್ದ ನಾರಾಯಣನ್ ನಂತರದ ವರ್ಷಗಳಲ್ಲಿ ಇಸ್ರೋದ ಪ್ರಮುಖ ಯೋಜನೆಗಳಾದ ರಾಕೆಟ್‌ ಅಭಿವೃದ್ಧಿ, ಕ್ರಯೋಜನಿಕ್ ಎಂಜಿನ್‌ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಗನಯಾನ, ಶುಕ್ರನ ಅಧ್ಯಯನ,ಚಂದ್ರಯಾನ-4, ಭಾರತೀಯ ಅಂತರಿಕ್ಷ ನಿಲ್ದಾಣದಂತಹ ಇಸ್ರೋದ ಯೋಜನೆಗಳು ನಾರಾಯಣನ್‌ ಅವರ ಮುಂದಿನ ಪ್ರಮುಖ ಗುರಿಗಳಾಗಿರಲಿದೆ.

==

ಆತಿಶಿ ಬಳಿಕ ಮಾಜಿ ಸಚಿವ ಜೈನ್‌ರಿಂದ ಚುನಾವಣಾ ದೇಣಿಗೆ ಸಂಗ್ರಹ ಆರಂಭ

ನವದೆಹಲಿ: ದೆಹಲಿ ಸಿಎಂ ಆತಿಶಿ ಬಳಿಕ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಕೂಡಾ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಜನರಿಗೆ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಈ ಕುರಿತು ಮಂಗಳವಾರ ಮಾತನಾಡಿದ ಅವರು, ‘ನಾನು ಜೈಲಿನಲ್ಲಿದ್ದಾಗ ಚುನಾವಣೆಗೂ ಮುನ್ನ ಹೊರಗೆ ಬರುತ್ತೇನೋ, ಇಲ್ಲವೋ ಎಂದು ಯೋಚಿಸಿದ್ದೆ. ಜೈಲಿನಲ್ಲಿದ್ದ ಪಕ್ಷದ ಎಲ್ಲ ನಾಯಕರು ಹೊರಗೆ ಬಂದರು. ಜನ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ ಆದರೆ ಜನರ ಬಳಿ ಹೋದಾಗ ಬಿಜೆಪಿ ಬಗ್ಗೆ ಅವರಿಗಿರುವ ಸಿಟ್ಟು ಕಂಡಿತು. ಯಾವ ರಾಜಕಾರಣಿಗಳು ಹೆಚ್ಚು ಕೆಲಸ ಮಾಡುತ್ತಾರೆ ಅವರ ನಡುವೆ ಪೈಪೋಟಿಯಿರಲಿ ಎಂದು ಜನ ಹೇಳಿದ್ದರು. ಅದಕ್ಕಾಗಿ ಕಣಕ್ಕೆ ಇಳಿದಿದ್ದೇನೆ. ದೇಣಿಗೆ ನೀಡಿ ಎಂದು ಮನವಿ ಮಾಡಿದರು.

==

ವರನಿಲ್ಲದ ದಿಬ್ಬಣದಂತಿದೆ ದಿಲ್ಲಿ ಬಿಜೆಪಿ: ಸಿಎಂ ಅಭ್ಯರ್ಥಿ ಘೋಷಿಸದ್ದಕ್ಕೆ ಆಪ್‌ ಟಾಂಗ್‌

ನವದೆಹಲಿ: ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪಕ್ಷದ ಸಿಎಂ ಅಭ್ಯರ್ಥಿ ಘೋಷಣೆ ಮಾಡದಿರುವುದಕ್ಕೆ ‘ವರನಿಲ್ಲದ ದಿಬ್ಬಣದಂತೆ ದಿಲ್ಲಿ ಬಿಜೆಪಿ ಇದೆ’ ಎಂದು ಆಪ್‌ ಗೇಲಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಸಂಸದ ಸಂಜಯ್ ಸಿಂಗ್ ‘ ರಮೇಶ್‌ ಬಿಧೂರಿಯನ್ನು ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯಾಗಿ ಪರಿಗಣಿಸಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಬಿಜೆಪಿ ನಾಯಕರಲ್ಲೇ ಒಳಜಗಳದ ಬಳಿಕ ಸ್ವತಃ ಬಿಧೂರಿ ನಾನು ಸಿಎಂ ಅಭ್ಯರ್ಥಿ ಅಲ್ಲ ಎಂದು ಹೇಳಿಕೊಳ್ಳುವ ಒತ್ತಡಕ್ಕೆ ಸಿಲುಕಿದ್ದಾರೆ. ಅವರಲ್ಲದಿದ್ದರೆ ಸಿಎಂ ಅಭ್ಯರ್ಥಿ ಯಾರು? ವರ ಇಲ್ಲದೇ ಬಿಜೆಪಿ ದಿಬ್ಬಣ ತೆಗೆದುಕೊಳ್ಳುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

==

ಉದ್ಧವ್‌ ಸೇನೆಯ ಬಳಿಕ ಶರದ್ ಪವಾರ್‌ರಿಂದಲೂ ಏಕಾಂಗಿ ಸ್ಪರ್ಧೆ ಸುಳಿವು

ಮುಂಬೈ: ಮುಂಬರುವ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಘೋಷಣೆ ಬೆನ್ನಲ್ಲೇ, ಶರದ್‌ ಪವಾರ್ ನೇತೃತ್ವದ ಎನ್‌ಸಿಪಿ ಕೂಡಾ ಅದೇ ಮಾತುಗಳನ್ನಾಡಿದೆ. ಈ ಕುರಿತು ಸ್ವತಃ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್‌, ಇಂಡಿಯಾ ಮೈತ್ರಿಕೂಟ ರಚನೆಯಾಗಿದ್ದೇ ಕೇವಲ ರಾಷ್ಟ್ರೀಯ ಮಟ್ಟದಲ್ಲಿ ಒಂದಾಗಿ ಚುನಾವಣೆಗೆ ಸ್ಪರ್ಧಿಸಲು. ಸ್ಥಳೀಯವಾಗಿ ಸ್ಪರ್ಧಿಸುವ ಕುರಿತು ನಾವು ಯಾವುದೇ ಚರ್ಚೆ ನಡೆಸಿಲ್ಲ ಎಂದರು. ಇದೇ ವೇಳೆ ಪಾಲಿಕೆ ಚುನಾವಣೆ ಸ್ಪರ್ಧೆ ಕುರಿತು ರಾಜ್ಯದಲ್ಲಿ ಮಹಾವಿಕಾಸ ಅಘಾಡಿ ಶೀಘ್ರ ಚರ್ಚೆ ನಡೆಸಲಿದೆ ಎಂದಿದ್ದಾರೆ.

==

ದೆಹಲಿ ಚುನಾವಣೆ: 15 ಅಭ್ಯರ್ಥಿಗಳ ಕಾಂಗ್ರೆಸ್‌ 3ನೇ ಪಟ್ಟಿ ಪ್ರಕಟ

ನವದೆಹಲಿ: ಫೆ.5ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿ ರಿಲೀಸ್‌ ಮಾಡಿದ್ದು, 15 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಮೂಲಕ 70 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಇದುವರೆಗೆ 63 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್‌ ರಿಲೀಸ್‌ ಮಾಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಮಾಜಿ ಕೇಂದ್ರ ಸಚಿವ ಕೃಷ್ಣ ತೀರಥ್‌ ಅವರನ್ನು ಪಟೇಲ್‌ ನಗರದಿಂದ, ಕೌನ್ಸಿಲರ್‌ ಅರಿಬ್ ಖಾನ್‌ರನ್ನು ಓಕ್ಲಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

Share this article