ಡಿಲೀಟ್‌ ಆಗಿದ್ದ 10 ಆ್ಯಪ್‌ ಮತ್ತೆ ಪ್ಲೆಸ್ಟೋರ್‌ಗೆ : ಗೂಗಲ್‌ ನಿರ್ಧಾರ

KannadaprabhaNewsNetwork |  
Published : Mar 03, 2024, 01:33 AM ISTUpdated : Mar 03, 2024, 10:17 AM IST
ಗೂಗಲ್‌ ಪ್ಲೇಸ್ಟೋರ್‌ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಚಾಟಿ ಬೀಸಿದ ನಂತರ ತಣ್ಣಗಾದ ಗೂಗಲ್‌, ಹೆಚ್ಚು ಶುಲ್ಕ ಪಾವತಿಸಲು ಒಪ್ಪದಿದ್ದಕ್ಕೆ ಆ್ಯಪ್‌ಗಳನ್ನು ಡಿಲೀಟ್‌ ಮಾಡಿದೆ. ಭಾರತ್‌ ಮ್ಯಾಟ್ರಿಮೋನಿ, ಜೀವನ್‌ಸಾಥಿ.ಕಾಮ್‌, ನೌಕ್ರಿ.ಕಾಂ, 99 ಏಕರ್ಸ್‌.ಕಾಂ, ಶಿಕ್ಷಾ.ಕಾಮ್‌ಗಳೂ ಡಿಲೀಟ್‌ ಆಗಿದ್ದವು

ನವದೆಹಲಿ: ಹೆಚ್ಚು ಶುಲ್ಕ ಪಾವತಿಸಲು ಒಪ್ಪದ ಭಾರತ್‌ ಮ್ಯಾಟ್ರಿಮೋನಿ.ಕಾಮ್‌, ಜೀವನ್‌ಸಾಥಿ.ಕಾಮ್‌, ನೌಕ್ರಿ.ಕಾಮ್‌ ಸೇರಿದಂತೆ ಪ್ರಸಿದ್ಧ 10 ಭಾರತೀಯ ಆ್ಯಪ್‌ಗಳನ್ನು ತನ್ನ ವೇದಿಕೆಯಿಂದ ಕಿತ್ತುಹಾಕಿದ್ದ ಗೂಗಲ್‌ ಪ್ಲೇಸ್ಟೋರ್‌, ಶನಿವಾರ ತಣ್ಣಗಾಗಿದೆ. 

ಕೇಂದ್ರ ಸರ್ಕಾರದ ತೀವ್ರ ವಿರೋಧ ಎದುರಾದ ಕಾರಣ ಅಮೆರಿಕದ ದೈತ್ಯ ಟೆಕ್‌ ಕಂಪನಿ, ತನ್ನ ನಿರ್ಧಾರದಿಂದ ಹಿಂದೆ ಸರಿದು ಮತ್ತೆ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ಗಳಿಗೆ ಸ್ಥಾನ ನೀಡಲು ಒಪ್ಪಿದೆ.

ಭಾರತ್‌ ಮ್ಯಾಟ್ರಿಮೋನಿ, ಕ್ರಿಶ್ಚಿಯನ್‌ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ, ಜೋಡಿ, ಜೀವನ್‌ಸಾಥಿ, ನೌಕ್ರಿ, 99 ಏಕರ್ಸ್‌, ಶಿಕ್ಷಾ.ಕಾಮ್‌ನಂತಹ ಪ್ರಸಿದ್ಧ ಭಾರತೀಯ ವೆಬ್‌ಸೈಟುಗಳ ಮೊಬೈಲ್‌ ಆ್ಯಪ್‌ಗಳನ್ನು ಶುಕ್ರವಾರ ಗೂಗಲ್‌ ಪ್ಲೇಸ್ಟೋರ್‌ ಡಿಲೀಟ್‌ ಮಾಡಿತ್ತು. 

ಇವುಗಳಲ್ಲಿ ಹೆಚ್ಚಿನವು ವಧೂವರರನ್ನು ಹುಡುಕುವ ಆ್ಯಪ್‌ಗಳಾಗಿದ್ದರೆ, ಇನ್ನು ಕೆಲವು ಆ್ಯಪ್‌ಗಳು ನೌಕರಿ ಹುಡುಕಲು ಸಹಕರಿಸುವ, ಬಾಡಿಗೆ ಮನೆ ಹುಡುಕುವ ಹಾಗೂ ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳಾಗಿವೆ.

ಈ ಆ್ಯಪ್‌ಗಳನ್ನು ಏಕಪಕ್ಷೀಯವಾಗಿ ಡಿಲೀಟ್‌ ಮಾಡಿರುವುದಕ್ಕೆ ಗೂಗಲ್‌ ಪ್ಲೇಸ್ಟೋರ್‌ ವಿರುದ್ಧ ಭಾರತ ಸರ್ಕಾರ ಕ್ರುದ್ಧಗೊಂಡಿತ್ತು. 

ಈ ಕುರಿತು ಪ್ರತಿಕ್ರಿಯೆ ನೀಡಿದ್ದವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ‘ಭಾರತದ ಸ್ಟಾರ್ಟಪ್‌ ಕಂಪನಿಗಳ ಹಣೆಬರಹವನ್ನು ಯಾವುದೋ ದೈತ್ಯ ಟೆಕ್‌ ಕಂಪನಿ ನಿರ್ಧರಿಸಲು ನಾವು ಬಿಡುವುದಿಲ್ಲ. 

ನಮ್ಮ ಸ್ಟಾರ್ಟಪ್‌ಗಳಿಗೆ ಬೇಕಾದ ರಕ್ಷಣೆಯನ್ನು ನಾವು ನೀಡುತ್ತೇವೆ’ ಎಂದಿದ್ದರು.ಇದರ ಬೆನ್ನಲ್ಲೇ ಗೂಗಲ್‌ ಅಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಕಿತ್ತು ಹಾಕಿದ 10 ಆ್ಯಪ್‌ಗಳಿಗೆ ಮತ್ತೆ ಸ್ಥಾನ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಗೂಗಲ್‌ ಪರ ನಿಂತಿದ್ದ ಸುಪ್ರೀಂಕೋರ್ಟ್‌: ಪ್ಲೇಸ್ಟೋರ್‌ನಲ್ಲಿ ಆ್ಯಪ್‌ಗಳನ್ನು ಲಿಸ್ಟ್‌ ಮಾಡಿದ್ದಕ್ಕೆ ಪ್ರತಿಯಾಗಿ ಗೂಗಲ್‌ ಕಂಪನಿಯು ಆ್ಯಪ್‌ನಲ್ಲಿ ನಡೆಯುವ ಹಣ ಪಾವತಿಯ ಮೇಲೆ ಭಾರತೀಯ ಸ್ಟಾರ್ಟಪ್‌ಗಳಿಂದ ಶೇ.11ರಿಂದ ಶೇ.26ರಷ್ಟು ಶುಲ್ಕ ಸಂಗ್ರಹಿಸುತ್ತಿತ್ತು. 

ಅದಕ್ಕೂ ಮುನ್ನ ಶೇ.15ರಿಂದ ಶೇ.30ರಷ್ಟು ಶುಲ್ಕ ಸಂಗ್ರಹಿಸುತ್ತಿದ್ದುದಕ್ಕೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶುಲ್ಕವನ್ನು ಇಳಿಸಲಾಗಿತ್ತು. ಆದರೆ ಗೂಗಲ್‌ ಕಂಪನಿ ಇದಕ್ಕೆ ಆಕ್ಷೇಪಿಸಿ ಕೋರ್ಟ್‌ಗೆ ಹೋಗಿತ್ತು. 

ಈ ಕುರಿತು ಸುಪ್ರೀಂಕೋರ್ಟ್‌ ಸೇರಿದಂತೆ ಭಾರತದ ಎರಡು ಕೋರ್ಟ್‌ಗಳು ತೀರ್ಪು ನೀಡಿ, ಶುಲ್ಕ ಸಂಗ್ರಹಿಸುವ ಗೂಗಲ್‌ನ ನೀತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದವು. 

ಈ ಹಿನ್ನೆಲೆಯಲ್ಲಿ ನಮ್ಮ ಶುಲ್ಕ ನೀತಿಯನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಭಾರತೀಯ ಕಂಪನಿಗಳಿಗೆ ಗೂಗಲ್‌ ಕಂಪನಿ ನೋಟಿಸ್‌ ನೀಡಿ, ಅವುಗಳ ಆ್ಯಪ್‌ಗಳನ್ನು ಕಿತ್ತುಹಾಕಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ