;Resize=(412,232))
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಗುರುವಾರ ತಡರಾತ್ರಿ ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ.
ವಾಂಗ್ಚುಕ್ ಅವರು ಚಿಕಿತ್ಸೆ ಪಡೆಯುತ್ತಿರುವ ಗುರುಗ್ರಾಮದ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಮನವೊಲಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ. ವಾಂಗ್ಚುಕ್ ಅವರಿಗೆ ಇಬ್ಬರೂ ಸಚಿವರು ಪಾನೀಯ ಕುಡಿಸುವ ಮೂಲಕ ನಿರಶನ ಅಂತ್ಯವಾದಂತಾಗಿದೆ. ಜೂ.28ರಿಂದ ವಾಂಗ್ಚುಕ್ ಅವರು ಆಮರಣ ಸತ್ಯಾಗ್ರಹವನ್ನು ನಡೆಸುತ್ತಿದ್ದರು.
‘ನನ್ನ ಉಪವಾಸ ಕೊನೆಗೊಳಿಸಲು ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತೆಯಿದೆ. ಎಲ್ಲರಿಗೂ ಧನ್ಯವಾದ’ ಎಂದು ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಕೈಗಳನ್ನು ಹಿಡಿದು ಹೇಳಿದ್ದಾರೆ. ಈ ವೇಳೆ ವಾಂಗ್ಚುಕ್ ಪತ್ನಿ ಗೀತಾಂಜಲಿ ಕೂಡ ಉಪಸ್ಥಿತರಿದ್ದರು. ಈ ವಿಡಿಯೋ ವೈರಲ್ ಆಗಿದೆ.
ತಾವು ಉಪವಾಸ ಕೈಬಿಡಬೇಕಾದರೆ ಕೇಂದ್ರ ಸರ್ಕಾರ ಸಂಸತ್ ಚಲೋ ಹೋರಾಟ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಭರವಸೆ ನೀಡಬೇಕು ಎಂದು ಬುಧವಾರವಷ್ಟೇ ವಾಂಗ್ಚುಕ್ ಹೇಳಿದ್ದರು. ಅದರ ಬೆನ್ನಲ್ಲೇ ಸಿಜೆಪಿ ಶುಕ್ರವಾರ ಸರ್ಕಾರದ ಜತೆಗೆ ತಟಸ್ಥ ಸ್ಥಳದಲ್ಲಿ ಮಾತುಕತೆ ನಡೆಸುವುದಾಗಿ ಹೇಳಿಕೊಂಡಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ವಾಂಗ್ಚುಕ್ ಉಪವಾಸ ಕೈಬಿಟ್ಟಿದ್ದಾರೆ.