ಕೋಲ್ಕತಾ: ವಕ್ಫ್ ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ದೇಶದಲ್ಲಿ ಜಾರಿಗೆ ತಂದ ಬೆನ್ನಲ್ಲೇ ‘ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಜೈನ ಧರ್ಮೀಯರ ಸಭೆಯಲ್ಲಿ ಮಾತನಾಡಿದ ಅವರು, ‘ವಕ್ಫ್ ಕಾಯ್ದೆ ಜಾರಿಗೆ ಬಂದಿರುವುದರಿಂದ ನೀವೆಲ್ಲ ನೊಂದಿದ್ದೀರಿ ಎನ್ನುವುದು ಗೊತ್ತಿದೆ. ನಂಬಿಕೆ ಇಡಿ. ಬಂಗಾಳದಲ್ಲಿ ಒಡೆದು ಆಳುವಂಥದ್ದು ಏನೂ ನಡೆಯಲ್ಲ, ಎಲ್ಲರೂ ಒಟ್ಟಿಗೆ ಇರಬೇಕು ಎನ್ನುವ ಸಂದೇಶವನ್ನು ನೀವು ರವಾನಿಸುತ್ತೀರಿ.’ ಎಂದರು.‘ಬಾಂಗ್ಲಾ ದೇಶದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ನೋಡಿ. ಈ ವಕ್ಫ್ ಮಸೂದೆ ಅಂಗೀಕಾರವಾಗಬಾರದಿತ್ತು. ಬಂಗಾಳದಲ್ಲಿ ಶೇ.33ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರೊಂದಿಗೆ ನಾನು ಏನು ಮಾಡಲಿ? ಕೆಲವರು ನಿಮ್ಮನ್ನು ಹೋರಾಡಲು ಪ್ರಚೋದಿಸುತ್ತಾರೆ. ಆದರೆ ನೀವು ಅದನ್ನು ಮಾಡಬೇಡಿ. ನೆನಪಿಡಿ ದೀದಿ ನಿಮ್ಮನ್ನು, ನಿಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ. ನೀವು ನನ್ನನ್ನು ಗುಂಡಿಕ್ಕಿ ಕೊಂದರೂ ಸಹ ನೀವು ನನ್ನನ್ನು ಏಕತೆಯಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಜಾತಿ, ಧರ್ಮಗಳು ಮಾನವೀಯತೆಗಾಗಿ ಪ್ರಾರ್ಥಿಸುತ್ತವೆ ಮತ್ತು ನಾನು ಅವರೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದರು.
ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ: ರಾಹುಲ್ ಆಕ್ರೋಶಅಹಮದಾಬಾದ್: ಇತ್ತೀಚೆಗೆ ಜಾರಿಗೆ ಬಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ‘ಸಂವಿಧಾನ ವಿರೋಧಿ’ ಎಂದು ಕರೆದಿದ್ದಾರೆ.ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ‘ವಕ್ಫ್ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು, ಸಂವಿಧಾನ ವಿರೋಧಿಯೂ ಆಗಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಕ್ರೈಸ್ತರು, ಸಿಖ್ಖರು ಸೇರಿ ಅನ್ಯ ಅಲ್ಪಸಂಖ್ಯಾತರ ಹಕ್ಕುಗಳನ್ನು ಗುರಿಯಾಗಿಸಲಿದೆ’ ಎಂದು ವಾಗ್ದಾಳಿ ನಡೆಸಿದರು ಜೊತೆಗೆ, ಜಾತಿ ಗಣತಿ ನಡೆಸುವಂತೆಯೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಇದೇ ವೇಳೆ, ಅಮೆರಿಕದ ಹೇರಿರುವ ಪ್ರತಿತೆರಿಗೆಯ ಬಗ್ಗೆ ಮಾತನಾಡುತ್ತಾ, ‘ಟ್ರಂಪ್ ತೆರಿಗೆ ಘೋಷಿಸಿದಾಗ ಪ್ರಧಾನಿ ಮೋದಿ ಏನೂ ಮಾತಾಡಲಿಲ್ಲ. ಬದಲಿಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಸಂಸತ್ತಿನಲ್ಲಿ 2 ದಿನ ನಾಟಕ ಮಾಡಿದರು. ಅತ್ತ ಅಪಾಯಕಾರಿ ಹೇಳಿಕೆಗಳನ್ನು ನೀಡುವ ಬಾಂಗ್ಲಾ ನಾಯಕರೊಂದಿಗೇ ಕುಳಿತಿದ್ದಾರೆ’ ಎಂದು ಟೀಕಿಸಿದರು.