ಮುಸ್ಲಿಮರಿಂದ ತಾಯಿ ಕಳಕೊಂಡರೂ ಮತಕ್ಕಾಗಿ ಖರ್ಗೆ ಮೌನ: ಯೋಗಿ ಕಿಡಿ

KannadaprabhaNewsNetwork |  
Published : Nov 13, 2024, 12:01 AM IST
ಯೋಗಿ ಆದಿತ್ಯನಾಥ್‌ | Kannada Prabha

ಸಾರಾಂಶ

‘ಯೋಗಿ ಆದಿತ್ಯನಾಥ್‌ ಒಬ್ಬ ಕಾವಿ ವೇಷದಲ್ಲಿರುವ ತೋಳ. ಅವರು ಕಾವಿ ಬಿಟ್ಟು ರಾಜಕಾರಣಿಗಳಂತೆ ಖಾದಿ ಧರಿಸುವುದು ಉತ್ತಮ’ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಖುದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದ್ದಾರೆ.

-ನನಗೆ ರಾಷ್ಟ್ರ ಮೊದಲು, ಖರ್ಗೆ ಅವರಿಗೆ ತುಷ್ಟೀಕರಣ ಮೊದಲು: ಸಿಎಂ- ಯೋಗಿ ಕಾವಿ ವೇಷದಲ್ಲಿರುವ ತೋಳ ಎಂದಿದ್ದಕ್ಕೆ ತರಾಟೆ

ಅಮರಾವತಿ (ಮಹಾರಾಷ್ಟ್ರ): ‘ಯೋಗಿ ಆದಿತ್ಯನಾಥ್‌ ಒಬ್ಬ ಕಾವಿ ವೇಷದಲ್ಲಿರುವ ತೋಳ. ಅವರು ಕಾವಿ ಬಿಟ್ಟು ರಾಜಕಾರಣಿಗಳಂತೆ ಖಾದಿ ಧರಿಸುವುದು ಉತ್ತಮ’ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಖುದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದ್ದಾರೆ. ‘ಖರ್ಗೆ ಅವರ ಮನೆಯನ್ನು ರಜಾಕಾರರು ಸುಟ್ಟು ಹಾಕಿದ್ದರು. ಆದರೆ ಮುಸ್ಲಿಂ ಮತದಾರರ ತುಷ್ಟೀಕರಣಕ್ಕಾಗಿ ಅವರು ಇಂದು ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಿಡಿಕಾರಿದ್ದಾರೆ.

ಮಂಗಳವಾರ ಮಹಾರಾಷ್ಟ್ರ ಬಿಜೆಪಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಯೋಗಿ, ‘ಕಳೆದ 3 ದಿನಗಳಿಂದ ನಾನು ಖರ್ಗೆ ಹೇಳಿಕೆ ಕೇಳುತ್ತಿದ್ದೇನೆ. ನಾನು ಯೋಗಿ ಮತ್ತು ನನಗೆ ರಾಷ್ಟ್ರ ಮೊದಲು, ಆದರೆ ಖರ್ಗೆ ಅವರಿಗೆ ತುಷ್ಟೀಕರಣ ರಾಜಕೀಯ ಮೊದಲು’ ಎಂದರು.ತಮ್ಮ ಮಾತಿಗೆ ಖರ್ಗೆ ಹಿನ್ನೆಲೆಯ ಉದಾಹರಣೆ ನೀಡಿದ ಅವರು, ‘ಖರ್ಗೆಯವರ ಹುಟ್ಟೂರಾದ ವಾರ್ವಟ್ಟಿ (ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಗ್ರಾಮ) ಹಿಂದೆ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ, ಬ್ರಿಟಿಷ್ ಸಾಮ್ರಾಜ್ಯವು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿತು ಮತ್ತು ಇದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಆಗ ಸ್ವಾತಂತ್ರ್ಯ ಘೋಷಣೆ ಆದರೆ ತನ್ನ ಅಧಿಕಾರ ಹೋಗಿಬಿಡುತ್ತದೆ ಎಂದು ಭಯಪಟ್ಟ ಹೈದರಾಬಾದ್‌ ನಿಜಾಮ ವ್ಯಾಪಕ ಹಿಂಸಾಚಾರಕ್ಕೆ ಆದೇಶಿಸಿದ. ಈ ವೇಳೆ ಖರ್ಗೆ ಅವರ ಗ್ರಾಮವೂ ಹಿಂಸೆ ಅನುಭವಿಸಿತು. ರಜಾಕಾರರು (ನಿಜಾಮನ ಬಂಟರು) ಗ್ರಾಮವನ್ನೇ ಸುಟ್ಟುಹಾಕಿದರು. ಖರ್ಗೆ ಅವರ ತಾಯಿ, ತಂಗಿ ಹಾಗೂ ಕುಟುಂಬವನ್ನೂ ಸುಟ್ಟುಹಾಕಲಾಯಿತು’ ಎಂದು ಸ್ಮರಿಸಿದರು.‘ಆದರೆ ಖರ್ಗೆಜೀ ಇಂದು ಈ ಸತ್ಯ ಒಪ್ಪಿಕೊಳ್ಳಲು ಬಯಸಲ್ಲ, ಏಕೆಂದರೆ ಅವರು ಅದನ್ನು ಹೇಳಿದರೆ ಮುಸ್ಲಿಂ ಮತಗಳು ತಮ್ಮಿಂದ ದೂರ ಆಗುತ್ತವೆ ಎಂದು ಅವರಿಗೆ ತಿಳಿದಿದೆ. ಅವರು ಮತಕ್ಕಾಗಿ ತಮ್ಮ ಕುಟುಂಬದ ತ್ಯಾಗವನ್ನು ಮರೆತಿದ್ದಾರೆ ಮತ್ತು ಈಗ ಕಾಂಗ್ರೆಸ್ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ’ ಎಂದು ಯೋಗಿ ವಾಗ್ದಾಳಿ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ