ಜಗತ್ತಿನ ನೂರಾರು ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್‌ ರೋಗಕ್ಕೆ ಕೊನೆಗೂ ಲಸಿಕೆ

KannadaprabhaNewsNetwork |  
Published : Sep 14, 2024, 02:01 AM ISTUpdated : Sep 14, 2024, 06:38 AM IST
ಮಂಕಿಪಾಕ್ಸ್‌  | Kannada Prabha

ಸಾರಾಂಶ

ಆಫ್ರಿಕಾ ಖಂಡ ಸೇರಿದಂತೆ ಜಗತ್ತಿನ ನೂರಾರು ದೇಶಗಳನ್ನು ಕಾಡುತ್ತಿರುವ ಹಾಗೂ ಭಾರತಕ್ಕೂ ಇತ್ತೀಚೆಗೆ ಪುನಃ ಕಾಲಿಟ್ಟಿರುವ ಮಾರಕ ಮಂಕಿಪಾಕ್ಸ್‌ ರೋಗಕ್ಕೆ ಕೊನೆಗೂ ಲಸಿಕೆ ಬಂದಿದೆ.

ಜಿನೆವಾ: ಆಫ್ರಿಕಾ ಖಂಡ ಸೇರಿದಂತೆ ಜಗತ್ತಿನ ನೂರಾರು ದೇಶಗಳನ್ನು ಕಾಡುತ್ತಿರುವ ಹಾಗೂ ಭಾರತಕ್ಕೂ ಇತ್ತೀಚೆಗೆ ಪುನಃ ಕಾಲಿಟ್ಟಿರುವ ಮಾರಕ ಮಂಕಿಪಾಕ್ಸ್‌ ರೋಗಕ್ಕೆ ಕೊನೆಗೂ ಲಸಿಕೆ ಬಂದಿದೆ. ಡೆನ್ಮಾರ್ಕ್‌ನ ಬವೇರಿಯನ್‌ ನೋರ್ಡಿಕ್‌ ಎಂಬ ಕಂಪನಿ ‘ಎಂವಿಎ-ಬಿಎನ್‌’ ಹೆಸರಿನ ಎಂಪಾಕ್ಸ್‌ ಲಸಿಕೆ ಬಿಡುಗಡೆ ಮಾಡಿದ್ದು, ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತುರ್ತು ಅನುಮತಿ ನೀಡಿದೆ.

ಇದು ಮಂಕಿಪಾಕ್ಸ್‌ಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಇದರ ಪರೀಕ್ಷೆ ನಡೆದಿಲ್ಲ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ಡಬ್ಲ್ಯುಎಚ್‌ಒ ಅನುಮತಿ ನೀಡಿದೆ. ಆದರೆ, ಆಫ್ರಿಕನ್‌ ದೇಶಗಳಲ್ಲಿ ಚಿಕ್ಕ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಈ ರೋಗ ಕಂಡುಬರುತ್ತಿದ್ದರೆ, ಆಗ ಅವರ ಜೀವ ಉಳಿಸಲು ಲಸಿಕೆಯಲ್ಲಿರುವ ರಿಸ್ಕ್‌ ಬದಿಗೊತ್ತಿ, ಇದನ್ನು ನೀಡಬಹುದು ಎಂದೂ ಹೇಳಿದೆ.

2 ಡೋಸ್‌ ಲಸಿಕೆ: ಮಂಕಿಪಾಕ್ಸ್‌ ಲಸಿಕೆ ಕೂಡ ಕೊರೋನಾ ಲಸಿಕೆಯಂತೆ ಎರಡು ಡೋಸ್‌ಗಳಲ್ಲಿ ನೀಡಬೇಕಾದ ಲಸಿಕೆಯಾಗಿದೆ. ಆಫ್ರಿಕಾದ ಬಡ ದೇಶಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮಂಕಿಪಾಕ್ಸ್‌ ಹರಡುತ್ತಿರುವುದರಿಂದ ಗವಿ, ಯುನಿಸೆಫ್‌ನಂತಹ ಸಂಸ್ಥೆಗಳು ಲಸಿಕೆ ಖರೀದಿಸಿ ನೀಡಬಹುದು ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್‌ ಅಧನೋಮ್‌ ಘೇಬ್ರಿಯೇಸಿಸ್‌, ‘ಕೇವಲ ಒಂದೇ ಕಂಪನಿ ಸದ್ಯಕ್ಕೆ ಮಂಕಿಪಾಕ್ಸ್‌ ಲಸಿಕೆ ತಯಾರಿಸುತ್ತಿದೆ. ಹೀಗಾಗಿ ಪೂರೈಕೆ ಸೀಮಿತವಾಗಿದೆ. ದಾನಿಗಳು ದೊಡ್ಡ ಪ್ರಮಾಣದಲ್ಲಿ ಇದನ್ನು ಉತ್ಪಾದಿಸಲು ನೆರವಾಗಿ, ಬಡ ದೇಶಗಳ ಸಹಾಯಕ್ಕೆ ಧಾವಿಸಬೇಕು’ ಎಂದು ಕರೆ ನೀಡಿದ್ದಾರೆ.

ಮಂಕಿಪಾಕ್ಸ್‌ ವೈರಸ್‌ ಕೂಡ ಸ್ಮಾಲ್‌ಪಾಕ್ಸ್‌ ಮತ್ತು ದಡಾರವನ್ನು ಉಂಟುಮಾಡುವ ವೈರಸ್‌ನ ಕುಟುಂಬಕ್ಕೇ ಸೇರಿದ್ದರೂ, ಈವರೆಗೆ ಲಸಿಕೆ ಲಭ್ಯವಿರಲಿಲ್ಲ.

==

ಈರುಳ್ಳಿ, ಬಾಸ್ಮತಿ ಅಕ್ಕಿ ಮೇಲಿನ ಕನಿಷ್ಠ ರಫ್ತು ದರ ರದ್ದು

ನವದೆಹಲಿ: ಈರುಳ್ಳಿ ಹಾಗೂ ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ದರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈರುಳ್ಳಿ ಮೇಲೆ 550 ಡಾಲರ್‌ ಕನಿಷ್ಠ ರಫ್ತು ದರ ಇತ್ತು ಹಾಗೂ ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ದರ 950 ಡಾಲರ್‌ ಇತ್ತು. ಇದಕ್ಕಿಂತ ಕಮ್ಮಿ ಮೌಲ್ಯಕ್ಕೆ ದೇಶದ ರೈತರು ಈ ಎರಡೂ ಬೆಳೆಗಳನ್ನು ರಫ್ತು ಮಾಡುವಂತಿರಲಿಲ್ಲ. ಆದರೆ ರೈತರ ಆದಾಯ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಈ ಎರಡೂ ಬೆಳೆಗಳ ಮೇಲಿನ ಕನಿಷ್ಠ ರಫ್ತು ದರ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಶೀಘ್ರ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರದಲ್ಲಿ ಈರುಳ್ಳಿ ಪ್ರಮುಖ ಬೆಳೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕ್ಕೆ ಕನ್ನ: ದೇವಸ್ವಂ ಮಾಜಿ ಸದಸ್ಯ ಸೆರೆ
ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ