ಇದರಿಂದ ಅನ್ಯರಿಗೂ ಎಚ್ಚರಿಕೆ ಸಂದೇಶ ರವಾನೆ
ಪರಿಸರ ರಕ್ಷಣೆ ಉದ್ದೇಶ ಇದ್ದರೆ ಸಂಕೋಚ ಏಕೆ?
ನಿಮ್ಮ ಬಳಿ ಈ ಕೆಲಸ ಆಗದಿದ್ದರೆ ನಾವೇ ಮಾಡ್ತೇವೆ==
ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ ಮತ್ತು ಪಂಜಾಬ್ನ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯ ಸಂಬಂಧ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಮುಖ್ಯ ನ್ಯಾ। ಬಿ.ಆರ್. ಗವಾಯಿ ಮತ್ತು ನ್ಯಾ। ಕೆ. ವಿನೋದ್ ಚಂದ್ರನ್ ಅವರ ಪೀಠ ವಾಯುಮಾಲಿನ್ಯದ ವಿಷಯದ ಬಗ್ಗೆ ಮಾತನಾಡುತ್ತಾ, ‘ರೈತರು ಅನ್ನದಾತರು ನಿಜ. ಹಾಗೆಂದು ಅವರು ಪರಿಸರವನ್ನು ಸಂರಕ್ಷಿಸಬಾರದು ಎಂದೇನಿಲ್ಲ. ಹಾಗಾಗಿ, ಕೃಷಿ ತ್ಯಾಜ್ಯ ಸುಟ್ಟು ಮಾಲಿನ್ಯಕ್ಕೆ ಕಾರಣವಾಗುವ ಕೆಲವರನ್ನು ಬಂಧಿಸಿ. ಈ ಮೂಲಕ, ಹೀಗೆ ಮಾಡುವ ಎಲ್ಲರಿಗೂ ಎಚ್ಚರಿಕೆ ನೀಡಿದಂತಾಗುತ್ತದೆ’ ಎಂದು ಸೂಚಿಸಿದೆ. ಜತೆಗೆ, ‘ನಿಮಗೆ(ಪಂಜಾಬ್ ಸರ್ಕಾರ) ನಿಜವಾಗಿಯೂ ಪರಿಸರದ ಬಗ್ಗೆ ಕಾಳಜಿ ಇರುವುದೇ ಆದರೆ, ಹೀಗೆ ಮಾಡಲು ಅಂಜಿಕೆಯೇಕೆ?’ ಎಂದು ಪ್ರಶ್ನಿಸಿರುವ ಕೋರ್ಟ್, ‘ನೀವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ನಾವೇ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಹೇಳಿದೆ.