ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯ ವಿಶ್ವದ ಮೊದಲ ಬಾಹ್ಯಾಕಾಶ ಸರ್ವೇಕ್ಷಣಾ ಉಪಗ್ರಹ ಕಾರ್ಯಾರಂಭ

Sujatha NR | Published : Mar 9, 2025 6:54 AM

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯು ವಿಶ್ವದ ಮೊದಲ ಬಾಹ್ಯಾಕಾಶ ಕಣ್ಗಾವಲು (ಸರ್ವೇಕ್ಷಣಾ) ಉಪಗ್ರಹವನ್ನು ನಿಯೋಜಿಸಿದ್ದು, ಅದು ಶನಿವಾರದಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ

ನವದೆಹಲಿ: ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯು ವಿಶ್ವದ ಮೊದಲ ಬಾಹ್ಯಾಕಾಶ ಕಣ್ಗಾವಲು (ಸರ್ವೇಕ್ಷಣಾ) ಉಪಗ್ರಹವನ್ನು ನಿಯೋಜಿಸಿದ್ದು, ಅದು ಶನಿವಾರದಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ. ಇದು ಭೂಮಿಯ ಸುತ್ತ ಇರುವ ಕಕ್ಷೆಯಲ್ಲಿನ 5 ಸೆಂ.ಮೀ.ನಷ್ಟು ಸಣ್ಣ ವಸ್ತುವಿನ ಮೇಲೆಯೂ ಕಣ್ಣಿಡುವ ಸಾಮರ್ಥ್ಯ ಹೊಂದಿದೆ.

ದಿಗಂತರದ ಎಸ್‌ಸಿಒಟಿ( ವಸ್ತುಗಳ ಜಾಡು ಹಿಡಿಯಲು ಬಾಹ್ಯಾಕಾಶ ಕ್ಯಾಮೆರಾ) ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ನ ಟ್ರಾನ್ಸ್‌ಪೋರ್ಟರ್‌-12 ರಾಕೆಟ್‌ನಲ್ಲಿ ಜ.14ರಂದು ಉಡಾವಣೆ ಮಾಡಲಾಗಿತ್ತು. ಈ ಉಪಗ್ರಹವು ದಕ್ಷಿಣ ಅಮೆರಿಕದಲ್ಲಿರುವ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನ ಮೊದಲ ಚಿತ್ರವನ್ನು ಸೆರೆಹಿಡಿದು ರವಾನಿಸಿದೆ.

ಈ ಕುರಿತು ಮಾತನಾಡಿದ ದಿಗಂತರದ ಸಿಇಒ ಅನಿರುದ್ಧ್‌ ಶರ್ಮಾ, ‘ಎಸ್‌ಸಿಒಟಿ ಉಪಗ್ರಹದ ಮೊದಲ ಫೋಟೋ ತಾಂತ್ರಿಕ ಮೈಲುಗಲ್ಲಿಗೂ ಮಿಗಿಲಾದುದು. ಇದು ನಮ್ಮ ತಂಡದ ಸ್ಥಿತಿಸ್ಥಾಪಕತ್ವ ಹಾಗೂ ಭವಿಷ್ಯದ ಪೀಳಿಗೆಗಳಿಗಾಗಿ ಭೂಮಿಯ ಕಕ್ಷೆಯನ್ನು ಕಾಪಾಡುವ ಬದ್ಧತೆಯ ಚಿಹ್ನೆಯಾಗಿದೆ’ ಎಂದಿದ್ದಾರೆ.

ಇದರ ಪ್ರಯೋಜನವೇನು?:

ಬಾಹ್ಯಾಕಾಶದಲ್ಲಿ ಬಳಕೆಗೆ ಬಾರದ ಉಪಗ್ರಹಗಳ ಭಾಗಗಳಂತಹ ಕಸ ಹೆಚ್ಚಿದ್ದು, ಅದರ ಮೇಲೆ ಕಣ್ಣಿಡಲು ಈ ಉಪಗ್ರಹ ಸಹಕಾರಿಯಾಗಿದೆ. ಪ್ರಸ್ತುತವಿರುವ ಸೆನ್ಸರ್‌ಗಳಿಗೆ ಇರುವ ಹವಾಮಾನ, ಭೌಗೋಳಿಕ ವ್ಯತ್ಯಾಸಗಳು ಸೇರಿದಂತೆ ಹಲವು ಅಡಚಣೆಗಳು ಎಸ್‌ಸಿಒಟಿ ಉಪಗ್ರಹಕ್ಕಿರುವುದಿಲ್ಲ.