ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌

KannadaprabhaNewsNetwork |  
Published : Sep 14, 2025, 01:06 AM IST
ಝಾಕೀರ್‌  | Kannada Prabha

ಸಾರಾಂಶ

ಧಾರ್ಮಿಕ ಉಗ್ರವಾದ ಹರಡುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯ್ಕ್‌ಗೆ ಎಚ್‌ಐವಿ ಏಡ್ಸ್ ತಗುಲಿದೆ ಎಂಬ ಊಹಾಪೋಹಗಳ ನಡುವೆಯೇ, ‘ನನಗೆ ಏಡ್ಸ್‌ ಇಲ್ಲ’ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಕೌಲಾಲಂಪುರ (ಮಲೇಷ್ಯಾ): ಧಾರ್ಮಿಕ ಉಗ್ರವಾದ ಹರಡುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾರತಕ್ಕೆ ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್‌ ನಾಯ್ಕ್‌ಗೆ ಎಚ್‌ಐವಿ ಏಡ್ಸ್ ತಗುಲಿದೆ ಎಂಬ ಊಹಾಪೋಹಗಳ ನಡುವೆಯೇ, ‘ನನಗೆ ಏಡ್ಸ್‌ ಇಲ್ಲ’ ಎಂದು ಆತ ಸ್ಪಷ್ಟಪಡಿಸಿದ್ದಾನೆ. ಇದೇ ವೇಳೆ, ‘ಆತ ಗುಣಪಡಿಸಲಾಗದ ವೈರಾಣು ಕಾಯಿಲೆಯಿಂದ ಬಳಲುತ್ತಿದ್ದಾನೆ ಹಾಗೂ ಮಲೇಷ್ಯಾದ ಪ್ರಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಕಾಯಿಲೆಯ ಹೆಸರು ಹೇಳಿಲ್ಲ.

ನಾಯ್ಕ್‌ಗೆ ಮತ್ತು ಆತನ ಪತ್ನಿ ಫರ್ಹತಾ ನಾಯ್ಕ್ ಹಾಗೂ ಜಿಕ್ರಾ ನಾಯ್ಕ್‌ಗೆ ಎಚ್ಐವಿ ಏಡ್ಸ್‌ ಇದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಸಂದೇಶ ಹರಿದಾಡುತ್ತಿವೆ. ಈ ಬಗ್ಗೆ ನಾಯ್ಕ್‌ ಪರವಾಗಿ ಆತನ ವಕೀಲ ಅಕ್ಬರ್‌ದಿನ್ ಅಬ್ದುಲ್‌ ಖಾದಿರ್‌ ಮಲೇಷ್ಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಂದೇಶಗಳು ಸುಳ್ಳು. ಅವು ಸಂಪೂರ್ಣ ಆಧಾರರಹಿತ. ಅವು ನಕಲಿ ಸುದ್ದಿ. ಇಂಥ ವದಂತಿಕೋರರ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಝಾಕಿರ್‌ ಯೋಚಿಸುತ್ತಿದ್ದಾರೆ’ ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಝಾಕಿರ್‌- ವರದಿ:

ಇದೇ ವೇಳೆ, ‘ಝಾಕಿರ್‌ ಸಾಂಕ್ರಾಮಿಕ ರೋಗಗಳು, ಆಂಕೊಲಾಜಿ, ಹೃದ್ರೋಗ, ಎಚ್ಐವಿ, ಚಯಾಪಚಯ ಅಸ್ವಸ್ಥತೆಗಳ ಚಿಕಿತ್ಸೆಗೆ ಹೆಸರಾಗಿರುವ ಸನ್‌ವೇ ವೈದ್ಯಕೀಯ ಕೇಂದ್ರದಲ್ಲಿ ದಾಖಲಾಗಿದ್ದು, ಬಿಗಿ ಭದ್ರತೆಯಲ್ಲಿದ್ದಾನೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ. ಆದರೆ ಈ ಬಗ್ಗೆ ಆತನ ಕುಟುಂಬ ಅಥವಾ ಮಲೇಷ್ಯಾ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿಲ್ಲ.

2016ರಿಂದ ಮಲೇಷ್ಯಾದಲ್ಲೇ ನೆಲೆಸಿ ಅಲ್ಲಿನ ನಾಗರಿಕತ್ವ ಪಡೆದಿರುವ ನಾಯ್ಕ್‌ ಮೇಲೆ ಭಯೋತ್ಪಾದನೆಗೆ ಹಣಕಾಸು ನೆರವು, ಯುವಕರನ್ನುದ್ದೇಶಿಸಿ ದ್ವೇಷ ಭಾಷಣ ಮತ್ತು ಮೂಲಭೂತವಾದವನ್ನು ಉಪಗ್ರಹ ಟಿವಿ ಚಾನೆಲ್‌ ಮೂಲಕ ಹರಡುವುದು- ಇತ್ಯಾದಿ ಆರೋಪಗಳಿವೆ. ಈ ಸಂಬಂಧ ತನಿಖೆಗೆ ನಡೆಸಲು ಹಸ್ತಾಂತರಿಸುವಂತೆ ಭಾರತ ವರ್ಷಗಳಿಂದ ಆಗ್ರಹಿಸುತ್ತಿದೆ.

ಧಾರ್ಮಿಕ ಉಗ್ರವಾದ, ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಭಾರತಕ್ಕೆ ಬೇಕಾಗಿರುವ ಝಾಕಿರ್‌ ನಾಯ್ಕ್‌ ಸದ್ಯ ಮಲೇಷ್ಯಾದಲ್ಲಿ ವಾಸ

ಝಾಕಿರ್‌, ಆತನ ಪತ್ನಿ, ಪುತ್ರ ಏಡ್ಸ್‌ನಿಂದ ಬಳಲುತ್ತಿದ್ದಾರೆ ಎಂದು ಭಾರೀ ವದಂತಿ. ಅದರ ಬೆನ್ನಲ್ಲೇ ಅಂಥದ್ದೇನಿಲ್ಲ ಎಂದು ಸ್ಪಷ್ಟನೆ

ಝಾಕಿರ್‌ಗೆ ಗುಣಪಡಿಸಲಾಗದ ಕಾಯಿಲೆ ಇದೆ. ಹೀಗಾಗಿ ಆಸ್ಪತ್ರೆಗೆ ದಾಖಲು ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮ ವರದಿ

PREV
Read more Articles on

Recommended Stories

ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ
ವಿರೋಧ ನಡುವೆ ಇಂದು ಭಾರತ vs ಪಾಕ್‌ ಕ್ರಿಕೆಟ್‌