‘ಸಂಚಾರ ದಟ್ಟಣೆ ಇಳಿಕೆಯಲ್ಲಿ ಬೆಂಗಳೂರು ಬೆಸ್ಟ್‌’

KannadaprabhaNewsNetwork |  
Published : Feb 07, 2024, 01:48 AM IST
ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

2022ರಲ್ಲಿ ಬೆಂಗಳೂರು ನಗರವು ವಿಶ್ವದ 2ನೇ ಅತೀ ಹೆಚ್ಚು ಸಂಚಾರ ದಟ್ಟಣೆ ನಗರ, ಈ ವರ್ಷ 6ನೇ ಸ್ಥಾನ. ಇದಕ್ಕೆ ಸುಧಾರಣೆಯೇ ಕಾರಣ ಎಂದ ನಗರ ಪೊಲೀಸ್ ಆಯುಕ್ತ ದಯಾನಂದ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುಧಾರಿತ ಸಂಚಾರ ನಿರ್ವಹಣೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಗಮನ ನೀಡಲಾಗಿದೆಯೇ ಹೊರತು ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಿಸುವ ಕಡೆಗಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತಿರುವ ಕಾರಣಕ್ಕೆ ವಾಹನ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದರು.

ಇತ್ತೀಚೆಗೆ ವಿಶ್ವ ಸಂಚಾರ ಸೂಚ್ಯಂಕ ಕುರಿತು ಡಚ್ ಲೋಕೇಶನ್ ಟೆಕ್ನಾಲಜಿ ಸಂಸ್ಥೆ ಟಾಮ್ ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ನಗರವು ಸಂಚಾರ ವ್ಯವಸ್ಥೆ ಸೂಚ್ಯಂಕದಲ್ಲಿ ಗಣನೀಯ ಬದಲಾವಣೆಯಾಗಿದೆ. 2022ರಲ್ಲಿ ವಿಶ್ವದಲ್ಲೇ 2ನೇ ಅತಿ ಹೆಚ್ಚು ಸಂಚಾರ ದಟ್ಟಣೆ ನಗರವಾಗಿದ್ದ ಬೆಂಗಳೂರು 2023ರಲ್ಲಿ 6ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿಸಿದರು.

ಆ ವರದಿಯ ಪ್ರಕಾರ ಪ್ರತಿ ಗಂಟೆಗೆ ಸರಾಸರಿ ಪ್ರಯಾಣದ ವೇಗವು 2023ರಲ್ಲಿ 18 ಕಿ.ಮೀ. ಗಂಟೆಯಾಗಿದ್ದು, 2022ರಲ್ಲಿ ಪ್ರತಿ ಗಂಟೆಗೆ ಈ ಸರಾಸರಿ ವೇಗವು 14 ಕಿ.ಮೀ. ಇತ್ತು. ಹೀಗಾಗಿ 2022 ಸಾಲಿಗಿಂತ 2023ರಲ್ಲಿ ಪ್ರತಿ ಗಂಟೆಗೆ ಸರಾಸರಿ ಪ್ರಯಾಣದ ವೇಗವು 4 ಕಿ.ಮೀ ಹೆಚ್ಚಾಗಿದೆ ಎಂದು ವಿವರಿಸಿದರು.

ಸಂಚಾರ ದಟ್ಟಣೆಯ ಟಾಪ್ 10 ಪಟ್ಟಿಯಲ್ಲಿ 2022 ವರ್ಷಕ್ಕಿಂತ 2023ರಲ್ಲಿ 1 ನಿಮಿಷ ಕಡಿಮೆಯಾಗಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಿದ ಟಾಪ್‌ 10ರ ಪಟ್ಟಿಯಲ್ಲಿ ಬೆಂಗಳೂರು ಏಕೈಕ ನಗರವಾಗಿದೆ. ಇನ್ನು 2023ರಲ್ಲಿ 10 ಲಕ್ಷ ಹೊಸ ವಾಹನಗಳ ನೋಂದಣಿ ಹೊರತಾಗಿಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ನುಡಿದರು.ಸುಧಾರಣೆಗೆ ಪ್ರಾಥಮಿಕ ಕಾರಣಗಳು

ಸುಧಾರಿತ ಸಂಚಾರ ನಿರ್ವಹಣೆಯಲ್ಲಿ ಪ್ರಮುಖವಾಗಿ ವಾಹನಗಳ ಸುಗಮ ಸಂಚಾರಕ್ಕೆ ನೀಡಲಾಗಿದೆಯೇ ಹೊರತು ಸಂಚಾರ ನಿಯಮ ಉಲ್ಲಂಘನೆಯನ್ನು ದಾಖಲಿಸುವುದ್ದಕ್ಕಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ನಮ್ಮ ಆದ್ಯತೆ ಪ್ರಾಥಮಿಕವಾಗಿ ಸಂಚಾರ ನಿರ್ವಹಣೆಯಾಗಿದೆ. ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಸುಗಮ ಸಂಚಾರ ವ್ಯವಸ್ಥೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇನ್ನು ಪಿಕ್ ಆವರ್‌ ನಿರ್ವಹಣೆ ಹಾಗೂ ಬೃಹತ್‌ ಸರಕು ಸಾಗಾಣಿಕೆ ವಾಹನಗಳ ನಿಷೇಧ ಹಾಗೂ ಮಾರ್ಗ ಬದಲಾವಣೆ ಸಹ ದಟ್ಟಣೆ ತಗ್ಗಲು ಕಾರಣವಾಗಿದೆ ಎಂದು ಹೇಳಿದರು.

ಸಂಚಾರ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಜಂಕ್ಷನ್‌ ಸುಧಾರಣೆಗಳು, ಮರು ವಿನ್ಯಾಸ, ಸೆಂಟರ್ ಮಿಡಿಯನ್‌ ಮುಚ್ಚುವಿಕೆ, ಬಸ್ ನಿಲ್ದಾಣಗಳ ಸ್ಥಳಾಂತರ, ಯೂರ್ಟನ್‌ ಮುಚ್ಚುವಿಕೆ, ಸಿಗ್ನಲ್‌ ಹಂತದಲ್ಲಿ ಬದಲಾವಣೆಗಳಾಗಿವೆ. ಹಾಗೆಯೇ ಸುಧಾರಿತ ಮೆಟ್ರೋ ಸಂಪರ್ಕ ಕೂಡ ಸಂಚಾರ ಸುಗಮವಾಗಿಸಿದೆ ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಆಯುಕ್ತರಾದ ಸತೀಶ್ ಕುಮಾರ್‌, ರಮಣ ಗುಪ್ತ, ಡಾ.ಚಂದ್ರಗುಪ್ತ ಹಾಗೂ ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಉಪಸ್ಥಿತರಿದ್ದರು.ಸುಧಾರಣೆಗೆ ಭವಿಷ್ಯದ ಯೋಜನೆಗಳು

-ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಸಿಗ್ನಲ್‌ಗಳು (ಎಟಿಸಿಎಸ್‌) ಸ್ಥಾಪಿಸಲಾಗುತ್ತಿದ್ದು, ಇವು ಅತ್ಯುತ್ತಮ ಸಿಗ್ನಲಿಂಗ್‌ ವ್ಯವಸ್ಥೆಯಾಗಲಿದೆ. ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸುಧಾರಣೆಗೆ ಬಳಸಲಾಗುತ್ತದೆ.

-ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಂಚಾರ ಹರಿವನ್ನು ಸುಧಾರಿಸಲು ಸಂಶೋಧನಾ ಸಂಸ್ಥೆಗಳು ಹಾಗೂ ಎನ್‌ಜಿಓಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ.10 ಡ್ರೋನ್‌ ಕ್ಯಾಮೆರಾಗಳು

ನಗರದಲ್ಲಿ ಸಂಚಾರ ನಿರ್ವಹಣೆಗೆ 10 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇವುಗಳ ನಿರ್ವಹಣೆ ಜವಾಬ್ದಾರಿಯನ್ನು ಎಸಿಪಿಗಳಿಗೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ