ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಂಗದ ಮೇಲೆ ಪ್ರದರ್ಶನಗೊಳ್ಳುತ್ತಿದ್ದ ಆಂಟನ್ ಚೆಕಾವ್ ಸಣ್ಣ ನಾಟಕಗಳು ಜನರ ಮನಸೂರಗೊಂಡಿತ್ತು. ಎನ್ಇಎಸ್ ವಿದ್ಯಾರ್ಥಿಗಳು ನೌಕರರಿಂದಲೇ ರೂಪಿತಗೊಂಡಿದ್ದ ಕಲಾ ತಂಡದ ಮನೋಜ್ಞ ಅಭಿನಯದ ಜೊತೆಗೆ, ಕಥೆಯ ಸಾರಾಂಶವು ಪ್ರಜ್ಞೆಯ ಪ್ರವಾಹವಾಗಿ ಹೊರಹೊಮ್ಮಿತು. ಸಾಂದರ್ಭಿಕವಾಗಿ ರೂಪಿಸಿದ್ದ ಹಿನ್ನಲೆ ಗೀತೆಗಳು, ನಾಟಕಕ್ಕೆ ಮತ್ತಷ್ಟು ಭಾವನೆಯ ಸ್ಪರ್ಶ ನೀಡಿತ್ತು.ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಕರ್ನಾಟಕ ಸಂಘದ ವೇದಿಕೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ಬುಧವಾರ ಸಂಘದ ಸಭಾಂಗಣದಲ್ಲಿ ಎನ್ಇಎಸ್ ಹವ್ಯಾಸಿ ರಂಗತಂಡದಿಂದ ಡಾ.ಹೇಮಪಟ್ಟಣಶೆಟ್ಟಿ ವಿರಚಿತ ''''''''ಚೆಕಾವ್ ಟು ಶಾಂಪೇನ್'''''''' ನಾಟಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಬದುಕಿನ ಸಂಭ್ರಮ ಶಾಂಪೇನ್ ಎಂಬ ಚೆಕಾವ್ ನಿರೂಪಣೆಯೊಂದಿಗೆ ಪ್ರಾರಂಭವಾಗುವ ನಾಟಕವು, ಪ್ರೀತಿ ಮತ್ತು ನಂಬಿಕೆಯ ದುಡಿಮೆ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಪಾದಿಸಿತು. ಜೊತೆಯಲ್ಲಿ ಅಸಾಯಕತೆ ಹೇಗೆ ಮನುಷ್ಯನನ್ನು ಹೈರಾಣಾಗಿಸುತ್ತದೆ, ದೇಶದ ಸುಭದ್ರತೆಗೆ ದುಡಿಮೆ ಮತ್ತು ಸಂಸ್ಕೃತಿಯ ಅವಶ್ಯಕತೆ, ಡಾಂಬಿಕತೆ ಮತ್ತು ಅತಿರೇಕದ ಅಭಿಮಾನದಿಂದ ಆಗುವ ಅನಾಹುತಗಳು, ಹೀಗೆ ವಾಸ್ತವತೆಯನ್ನು ವಿಮರ್ಶಿಸುವ ಚೆಕಾವ್ ಸಣ್ಣ ಕಥೆಗಳು ರಂಗದ ಮೇಲೆ ಪ್ರದರ್ಶನಗೊಂಡಿತು.ನಾಟಕದ ನಿರ್ದೇಶಕರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿ ರಷ್ಯಾದ ಸಾಮಾಜಿಕ ನೆಲೆಯನ್ನು ವಿಷಯವಾಗಿ ಇಟ್ಟುಕೊಂಡು ಕಥೆಗಳನ್ನು ರೂಪಿಸಿದವರು ಚಕಾವ್. ಚಕಾವ್ ವಿಶಿಷ್ಟವೆಂದರೆ, ಅಲ್ಪ ಸಾಲುಗಳ ಮೂಲಕ ಸಮಾಜದ ವಾಸ್ತವತೆಯನ್ನು ತಿಳಿಸುವ ಪ್ರಯತ್ನ ಮಾಡಿದರು. ಕಲೆ ಎಂದಿಗೂ ಸಾಮಾಜಿಕ ಅಭಿವೃದ್ಧಿಗೆ ಬೆಂಬಲ ನಿಡುವಂತಿರಬೇಕು ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರೀ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಸ್ವಾಗತಿಸಿ, ವಾಗೀಶ್ ನಿರೂಪಿಸಿದರು.