ಕಾಂಗ್ರೆಸ್‌ ಸುಳ್ಳು ಹೇಳಿ ಮತ ಕೇಳುತ್ತೆ

KannadaprabhaNewsNetwork | Published : Apr 8, 2024 1:01 AM

ಜೆಡಿಎಸ್ ಕಾರ್ಯಕರ್ತರ ಜತೆ ಕೈ ಜೋಡಿಸಿ ಚುನಾವಣೆ ಮಾಡೋಣ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಕಾಂಗ್ರೆಸ್‌ನವರು ಸುಳ್ಳು ಹೇಳಿ ಮತ ಕೇಳುತ್ತಾರೆ. ಆದರೆ, ನಾವು ಅಭಿವೃದ್ಧಿ ಮಾಡಿ ಮತ ಕೆಳುತ್ತೇವೆ. ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಂದ ಪಿ.ಸಿ ಗದ್ದಿಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಾಲಿ ಸಂಸದ ಗದ್ದಿಗೌಡರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜಲ ಜೀವನ ಮಿಷನ್‌ ಯೋಜನೆಯಡಿ ಮನೆ - ಮನೆಗೆ ನೀರು ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ₹೨೬೫ ಕೊಟಿ ಬಿಡುಗಡೆಯಾಗಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಕೆಲವು ತಿಂಗಳಲ್ಲಿ ಹುನಗುಂದ ಮತಕ್ಷೇತ್ರದಲ್ಲಿ ಬರುವ ಗ್ರಾಮಗಳಿಗೆ ಕೃಷ್ಣಾ ನದಿಯ ಶುದ್ಧ ಕುಡಿಯುವ ನೀರು ವ್ಯವಸ್ಥೆಗೆ ಮಾಡಲಾಗುವುದು. ವಿಜಯಪುರ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ, ಬಸವೇಶ್ವರ ಸರ್ಕಲ್‌ನಲ್ಲಿ ಅಂಡರ್ ಪಾಸ್ ಮಂಜೂರಾಗಿದೆ. ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಗದ್ದಿಗೌಡರ ಮಾಡಿ, ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ನಡೆಸುತ್ತಿದೆ. ಜೆಡಿಎಸ್ ಕಾರ್ಯಕರ್ತರ ಜತೆ ಕೈ ಜೋಡಿಸಿ ಚುನಾವಣೆ ಮಾಡೋಣ. ಇಬ್ಬರು ಕೂಡಿ ಗದ್ದಿಗೌಡರ ಗೆಲುವಿಗೆ ಶ್ರಮಿಸೋಣ. ದೇಶ ಅಭಿಮಾನದ ಮೇಲೆ ಲೋಕಸಭಾ ಚುನಾವಣೆ ನಡೆಯುತ್ತದೆ. ಬಿಜೆಪಿ ಬಿಟ್ಟು ಹೋದವರು, ಹಾಗೂ ಕಾಂಗ್ರೆಸ್‌ ಸೇರಿ ಅನ್ಯ ಪಕ್ಷದವರು ಬಿಜೆಪಿ ತತ್ವ ಸಿದ್ದಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರಬಹುದು. ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ಮಹಾಂತಗೌಡ ಪಾಟೀಲ, ಅರವಿಂದ ಮಂಗಳೂರ, ಲಕ್ಷ್ಮಣ ಗುರಂ, ರಾಜಕುಮಾರ ಬಾದವಾಡಗಿ, ಮಂಜುನಾಥ ಶೆಟ್ಟರ, ಮಹಾಂತಪ್ಪ ಚನ್ನಿ, ಬಿಜೆಪಿ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ಫೋಟೊ ೭ ಇಳಕಲ್ಲ ೨