ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಇಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿಸಿದಂತೆ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಆಕರ್ಷಣೀಯವಾದ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.೭೪ ವರ್ಷಗಳ ಇತಿಹಾಸವುಳ್ಳ ತಾಲೂಕಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶಾಸಕ ಸಿ. ಎನ್.ಬಾಲಕೃಷ್ಣ ಸೋಮವಾರ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಭಾರತ ಧರ್ಮದ ಆಧಾರದ ಮೇಲೆ ಸದೃಢವಾಗಿ ಬೆಳೆದಿರುವ ದೇಶ, ದೇಶದ ಆಚಾರ- ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸ ತಂದಿದೆ. ಸನಾತನ ಧರ್ಮಕ್ಕೆ ಇಂತಹ ಧಾರ್ಮಿಕ ಆಚರಣೆಗಳು ಶಕ್ತಿ ನೀಡುತ್ತವೆ. ಸರ್ವರ ಸಹಕಾರದಿಂದ ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ೪೮ ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಅನ್ನದಾಸೋಹದ ಪ್ರಸಾದ ವಿನಿಯೋಗದ ಸೇರಿ ದೇಶದ ಸಂಸ್ಕೃತಿಯನ್ನು ಬಿಂಬಿಸುವಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ರೀತಿಯಲ್ಲಿ ಗಣೇಶೋತ್ಸವ ಆಚರಿಸುವ ಮೂಲಕ ಹೆಸರುವಾಸಿಯಾಗಿದೆ ಎಂದರು.
ವಿಸರ್ಜನಾ ಪೂಜೆ, ನಂತರ ಪಟ್ಟಣದ ಗಣಪತಿ ಪೆಂಡಾಲಿನಿಂದ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಕಲಾವಿದ ರವೀಂದ್ರ ನಿರ್ಮಿಸಿರುವ ವಿಶೇಷ ದರ್ಬಾರ್ ಪುಷ್ಪ ಮಂಟಪದಲ್ಲಿ ಗಣೇಶಮೂರ್ತಿ ಕೂರಿಸಿ ಮಹಿಳಾ ತಂಡದಿಂದ ಸ್ಯಾಕ್ಸೋಫೋನ್, ಮಂಗಳವಾದ್ಯ, ಕಾಡು ಸಿದ್ಧೇಶ್ವರ ಮಠದ ಆನೆ, ಚಾಮುಂಡೇಶ್ವರಿ ರಥ, ಕೇರಳದ ಛಂಡೆ ವಾದ್ಯ, ಕೇರಳದ ನರ್ತಕಿಯರು, ಕೇರಳದ ಯಕ್ಷಗಾನ, ಕೇರಳದ ಹುಲಿ, ಪೂಜಾ ಕುಣಿತ, ವೀರಭದ್ರನ ಕುಣಿತ, ಭದ್ರಕಾಳಿ ನರ್ತನ, ನಂದಿ ಧ್ವಜ, ಸಾಗರದ ಡೊಳ್ಳು ಕುಣಿತ. ಶ್ರೀ ವೆಂಕಟೇಶ್ವರ ದರ್ಶನ, ಕೋಟೆ ಮಾರಮ್ಮ, ಶ್ರೀ ಕೋಟೆ ಚಂದ್ರಮೌಳೇಶ್ವರ, ಶ್ರೀ ಮೇಗಲಗೇರಿ ಕಾಡು ಆಂಜನೇಯ ಉತ್ಸವ ಮೂರ್ತಿಗಳು, ರೋಡ್ ಆರ್ಕೆಸ್ಟ್ರಾ, ತಮಟೆ ವಾದ್ಯ, ತಾಲೂಕಿನ ಭಜನಾ ತಂಡದವರಿಂದ ಭಜನೆ ಮತ್ತು ೩೦ನೇ ನಂಬರಿನ ಬಿಡಿಯವರಿಂದ ಕರಾವಳಿ ಕುಣಿತ, ಸೃಷ್ಟಿ ಆರ್ಟ್ಸ್ ತಂಡದಿಂದ ಗೊಂಬೆ ಕುಣಿತ, ಕೀಲು ಕುದುರೆ ಹಾಗೂ ಇನ್ನೂ ಹಲವಾರು ಜಾನಪದ ಕಲಾವಿದರಿಂದ ವಿಸರ್ಜನಾ ಮೆರವಣಿಗೆಯು ಆಕರ್ಷಣೆಗಳಾಗಿದ್ದವು. ಕಿವಿಗಡಚ್ಚಿಕ್ಕುವ ಸ್ಪೀಕರ್ಗಳಿಂದ ಕೆ ಆರ್ ಸರ್ಕಲ್ ರಂಗು ಪಡೆದಿತ್ತು. ಇಡೀ ಸರ್ಕಲ್ನಲ್ಲಿ ಸಾವಿರಾರು ಯುವಕರು ಜಮಾಯಿಸಿದ್ದರು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಸ್ಥಳೀಯ ಕಲಾವಿದರು ವಿವಿಧ ಹಾಡುಗಳ ಮ್ಯೂಸಿಕ್ ಪ್ರದರ್ಶಿಸಿ ಯುವಕರಲ್ಲಿ ಸ್ಫೂರ್ತಿ ತುಂಬಿದರು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸಹಸ್ರ ಸಂಖ್ಯೆಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ವೀಕ್ಷಿಸಿದರು. ಹೂಗಳನ್ನು ಮತ್ತು ನೀರನ್ನು ರಸ್ತೆಗೆ ಹಾಕಿ ಗಣೇಶನನ್ನು ಕಲಾತಂಡಗಳ ಮೂಲಕ ಬೀಳ್ಕೊಡಲಾಯಿತು. ರಾತ್ರಿ ಊರಿನ ಶ್ರೀರಾಮ ವೃತ್ತ ಅಮಾನಿಕೆರೆಯಲ್ಲಿ ಪ್ರಸನ್ನ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಪ್ರತಿ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿವಿಧ ಕಲಾ ತಂಡಗಳಾದ ಕೋಲಾಟ, ಡೊಳ್ಳು ಕುಣಿತ, ಜಾನಪದ ವೈಶಿಷ್ಟ್ಯ ತಂಡಗಳನ್ನು ಕರೆಸುತ್ತಾರೆ. ಸಮಸ್ತ ಜನರ ವೀಕ್ಷಣೆಗಾಗಿ ಹಗಲಿನಲ್ಲಿ ಗಣಪತಿ ಮೆರವಣಿಗೆ ಮಾಡುವ ಪದ್ಧತಿ ವೈಶಿಷ್ಟ್ಯಪೂರ್ಣವಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ.ಕೃಷ್ಣ, ಅಧ್ಯಕ್ಷ ಸಿ.ಎನ್. ಅಶೋಕ್, ಉಪಾಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸಿ.ವೈ. ಸತ್ಯನಾರಾಯಣ, ಖಜಾಂಚಿ ಗಜಾನನ ಮನೋಹರ್, ಸಹಕಾರ್ಯದರ್ಶಿ ಮಹದೇವ್, ಲಕ್ಷ್ಮೀನಾರಾಯಣ ಗುಪ್ತ, ಇನ್ನಿತರರು ಉಪಸ್ಥಿತರಿದ್ದರು.