ಗುಲಸಿಂದ ಕೆರೆಕೋಡಿ ಕಾಲುವೆ ನಿರ್ಮಾಣಕ್ಕೆ ಅನುದಾನ

KannadaprabhaNewsNetwork | Published : Jun 8, 2025 2:29 AM
ಗುಲಸಿಂದ ಗ್ರಾಮದಲ್ಲಿನ ರಾಘವೇಂದ್ರಸ್ವಾಮಿ ನೂತನ ಪೂಜಾ ಮಂದಿರದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಕೆರೆಕೋಡಿ ನೀರು ಸರಾಗವಾಗಿ ಹರಿಯಲು ಕಾಲುವೆ ನಿರ್ಮಾಣಕ್ಕೆ ೪೯ ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಬಾಗೂರು ಮುಖ್ಯರಸ್ತೆಗೆ ಅಂದಾಜು ೩ ಲಕ್ಷ ರು. ವೆಚ್ಚ ಮಾಡಿ ಕಮಾನು ನಿರ್ಮಾಣ ಮಾಡಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಗ್ರಾಮದ ದೇವಾಲಯಗಳ ಮುಖ್ಯ ಪ್ರವೇಶದ್ವಾರವಾಗಿದ್ದು ದೇವಾಲಯದ ಪ್ರಾಂಗಣದ ಸೌಂದರ್ಯ ಹೆಚ್ಚಲಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗುಲಸಿಂದ ಗ್ರಾಮದಲ್ಲಿನ ರಾಘವೇಂದ್ರಸ್ವಾಮಿ ನೂತನ ಪೂಜಾ ಮಂದಿರದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಕೆರೆಕೋಡಿ ನೀರು ಸರಾಗವಾಗಿ ಹರಿಯಲು ಕಾಲುವೆ ನಿರ್ಮಾಣಕ್ಕೆ ೪೯ ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಗುಳಸಿಂದ ಗ್ರಾಮದ ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಆವರಣದಲ್ಲಿನ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಕೆರೆ ತುಂಬಿದಾಗ ಕೊಡಿಯಲ್ಲಿ ನೀರು ಹೆಚ್ಚು ಹರಿಯುವುದರಿಂದ ರಾಘವೇಂದ್ರಸ್ವಾಮಿ ಮಂದಿರಕ್ಕೆ ಹಾನಿಯಾಗುತ್ತದೆ. ಇದರಿಂದ ದೇವಾಲಯದ ಧರ್ಮದರ್ಶಿಗಳು ಮನವಿ ಮಾಡಿದ್ದರು. ಹಾಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಗ್ರಾಮದಲ್ಲಿ ಪುರಾತನ ಕಾಲದ ಲಕ್ಷ್ಮೀದೇವಿ, ರಂಗನಾಥಸ್ವಾಮಿ ದೇವಾಲಗಳಿದ್ದು, ನೂತನವಾಗಿ ರಾಘವೇಂದ್ರಸ್ವಾಮಿ ಪೂಜಾ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆ. ಬಾಗೂರು ಮುಖ್ಯರಸ್ತೆಗೆ ಅಂದಾಜು ೩ ಲಕ್ಷ ರು. ವೆಚ್ಚ ಮಾಡಿ ಕಮಾನು ನಿರ್ಮಾಣ ಮಾಡಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಗ್ರಾಮದ ದೇವಾಲಯಗಳ ಮುಖ್ಯ ಪ್ರವೇಶದ್ವಾರವಾಗಿದ್ದು ದೇವಾಲಯದ ಪ್ರಾಂಗಣದ ಸೌಂದರ್ಯ ಹೆಚ್ಚಲಿದೆ ಎಂದರು.

ರಸ್ತೆ ಅಭಿವೃದ್ಧಿ: ರಾಷ್ಟ್ರೀಯ ಹೆದ್ದಾರಿಯಿಂದ ಗುಳಸಿಂದ ಗ್ರಾಮದವರೆಗೆ ಎರಡು ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮ ಮುಳುಗಡೆಯಾದ ಮೇಲೆ ಸರ್ಕಾರ ಮಂಜೂರು ಮಾಡಿದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದ್ದು, ಎರಡು ವರ್ಷದಿಂದ ಸರ್ಕಾರ ಅನುದಾನ ನೀಡಿಲ್ಲ ಹಾಗಾಗಿ ಕಾಮಗಾರಿ ಮಾಡಿಸಲಾಗಿಲ್ಲ, ಮೂರು ತಿಂಗಳಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು. ಶಾಂತಿ ನೆಲೆಸಲಿದೆ:

ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಶಾಂತಿ ನೆಲೆಸಲಿದೆ. ಗ್ರಾಮಸ್ಥರೂ ಸಹಬಾಳ್ವೆ, ಸಹೋದರತ್ವದಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ. ಗ್ರಾಮಸ್ಥರು ಪ್ರತಿನಿತ್ಯ ದೇವಾಲಯಕ್ಕೆ ತೆರಳಿ ಒಂದು ತಾಸು ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ವಾರಕ್ಕೆ ಒಮ್ಮೆಯಾದರೂ ದೇವಾಲಯದಲ್ಲಿ ಭಕ್ತಿ ಗೀತೆ ಹಾಡುವುದು ಇಲ್ಲವೆ ಭಜನೆ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಸನಾತನ ಧರ್ಮ ಉಳಿಯಬೇಕೆಂದರೆ ಪ್ರತಿಯೊಬ್ಬ ಹಿಂದೂ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಸನಾತನ ಧರ್ಮದ ಹಬ್ಬಗಳನ್ನು ಚಾಚು ತಪ್ಪದೆ ಮಾಡುವುದನ್ನು ರೂಢಿಸಿಕೊಳ್ಳಿ, ತಮ್ಮ ಮಕ್ಕಳಿಗೂ ಧರ್ಮ ಪಾಲನೆ ಮಾಡುವಂತೆ ತಿಳಿಹೇಳಿ, ನಮ್ಮ ಸಂಸ್ಕಾರವನ್ನು ಎಂದಿಗೂ ಮರೆಯಬಾರದು ಇದನ್ನು ಮುಂದಿನ ತಲೆಮಾರಿಗೆ ತಿಳಿಸುವ ಕರ್ತವ್ಯ ಪ್ರತಿಯೋರ್ವ ಹಿರಿಯರ ಹೆಗಲ ಮೇಲಿದೆ ಎಂದು ತಿಳಿಸಿದರು. ಧಾರ್ಮಿಕ ಕಾರ್ಯಗಳಿಗೆ ಅನುದಾನ:

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವ ಪ್ರಮುಖ್ಯತೆಯನ್ನು ದೇವಾಲಯಗಳ ಅಭಿವೃದ್ಧಿಗೂ ನೀಡಲಾಗುತ್ತಿದೆ. ಸಾಕಷ್ಟು ಗ್ರಾಮಗಳಲ್ಲಿ ನೂತನವಾಗಿ ನಿರ್ಮಾಣ ಆಗುವ ದೇವಾಲಯಗಳು, ಶಿಥಿಲವಾಗಿರುವ ದೇವಾಲಯಗಳ ಅಭಿವೃದ್ಧಿ, ರಥದ ಮನೆ ನಿರ್ಮಾಣ, ದೇವಾಲಯದ ಪ್ರಾಂಗಣ ಅಭಿವೃದ್ಧಿ ಮಾಡಲು ಅನುದಾನ ನೀಡಲಾಗುತ್ತಿದೆ. ಇದೇ ರೀತಿ ಗುಳಸಿಂದ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಹಲವು ವರ್ಷದಿಂದ ಗುಲಸಿಂದ ಗ್ರಾಮದ ಸಮುದಾಯ ಭವನ ಕಾಮಗಾರಿ ಸ್ಥಗಿತವಾಗಿದೆ. ಈಗಾಗಲೇ ೩೦ ಲಕ್ಷ ಹಣವನ್ನು ಗುತ್ತಿಗೆದಾರನಿಗೆ ಕೊಡಿಸಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಪ್ರಾರಂಭಿಸಿ ಸಮುದಾಯ ಭವನ ಉದ್ಘಾಟನೆ ಮಾಡಲಾಗುವುದು. ಇದಾದ ಬಳಿಕ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ದೇವಾಲಯಗಳ ಮುಂಭಾಗ ವಾಹನ ನಿಲ್ದಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಧರ್ಮದರ್ಶಿ ಎನ್.ಟಿ.ರಾಮಕೃಷ್ಣ ಮಾತನಾಡಿ, ಎರಡೂವರೆ ವರ್ಷದ ಹಿಂದೆ ರಾಯರ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದು ಗ್ರಾಮಸ್ಥರು ಹಾಗೂ ಹಲವು ದಾನಿಗಳ ಸಹಕಾರದಲ್ಲಿ ಪೂರ್ಣಗೊಂಡಿದೆ. ಮುಂದಿನ ದಿವಸಗಳಲ್ಲಿ ಭಕ್ತರ ಸಹಕಾರದಲ್ಲಿ ದೇವಾಲಯ ಮುನ್ನಡೆಸಲಾಗುವುದು ಎಂದು ತಿಳಿಸಿದರು. ಗ್ರಾಮದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಧರ್ಮದರ್ಶಿ ಸುಲೋಚನ ರಾಮಕೃಷ್ಣ ವಸ್ತ್ರಗಳನ್ನು ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಗಜಾನನ ಮನೋಹರ್, ಗುಲಸಿಂದ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ಮಂಜುನಾಥ್, ಹಾಲು ಉತ್ಪಾಕದರ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಿ.ಕೆ. ಕುಸುಮಾರಾಣಿ, ಗ್ರಾಮದ ಮುಖಂಡರಾದ ಗೋವಿಂದೇಗೌಡ, ಚಂದೇಗೌಡ, ಶಿವೇಗೌಡ, ನಾಗೇಶ್, ನಾಗರಾಜು, ಹಿರಿಯಣ್ಣ, ಲಕ್ಷ್ಮೀನಾರಾಯಣ, ನವೀನ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.