‘ಗ್ಯಾರಂಟಿ’ಯೋಜನೆ ಜನರ ದಿಕ್ಕು ತಪ್ಪಿಸುತ್ತಿದೆ: ಸಿ.ಕೆ.ರಾಮಮೂರ್ತಿ ಆರೋಪ

KannadaprabhaNewsNetwork | Published : May 5, 2024 2:00 AM

ಸಾರಾಂಶ

ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬೆಂಗಳೂರು ಜಯನಗರ ಶಾಸಕ ಸಾಗರ ಸಿ.ಕೆ.ರಾಮಮೂರ್ತಿ ಬಿರುಸಿನ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಸಾಗರ

ದೇಶ ಮೊದಲು ಎನ್ನುವ ಏಕೈಕ ಪಕ್ಷ ಬಿಜೆಪಿ. ಭಾರತ ದೇಶದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಸದೃಢ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಎಂದು ಬೆಂಗಳೂರು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮನವಿ ಮಾಡಿದರು.

ತಾಲ್ಲೂಕಿನ ಮುಂಗರವಳ್ಳಿ, ಕೇಡಲಸರ, ಭೀಮನಕೋಣೆ, ಹೆಗ್ಗೋಡು, ಹೊನ್ನೆಸರ, ಪುರಪ್ಪೆಮನೆ, ವರದಾಮೂಲ, ಕಾನುಮನೆ, ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ಕಳೆದ ೧೦ ವರ್ಷಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಯಾವುದೇ ಭ್ರಷ್ಟಾಚಾರ ಇಲ್ಲದೆ ಸ್ವಚ್ಚ, ದಕ್ಷ ಅಧಿಕಾರವನ್ನು ದೇಶಕ್ಕೆ ನೀಡಿದೆ. ಜಿಡಿಪಿ ಗಣನೀಯ ಪ್ರಮಾಣದ ಸಾಧನೆ ಮಾಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಮನೆಗೂ ಶುದ್ಧ ಕುಡಿಯುವ ನೀರನ್ನು ನೀಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಿರುವುದು ನರೇಂದ್ರ ಮೋದಿಯವರ ಸರ್ಕಾರ. ಮುದ್ರಾ ಯೋಜನೆ ಮೂಲಕ ಸಾಮಾನ್ಯ ಜನರ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡಲಾಗಿದೆ. ಜನಸಾಮಾನ್ಯರಿಗೆ ಜನೌಷಧಿ ಕೇಂದ್ರದ ಮೂಲಕ ಕೈಗೆಟುಕುವ ದರದಲ್ಲಿ ಔಷಧಿ ಗಳನ್ನು ಒದಗಿಸುತ್ತಿರುವುದು ಬಡವರ ಬಗ್ಗೆ ಬಿಜೆಪಿಗಿರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಸದ ರಾಘವೇಂದ್ರ ತಮಗೆ ನೀಡಿದ ಸಂಸದರ ನಿಧಿಯನ್ನು ವ್ಯವಸ್ಥಿತವಾಗಿ ಕ್ರಿಯಾಯೋಜನೆಯನ್ನು ರೂಪಿಸಿ ಅದನ್ನು ಸಂಪೂರ್ಣವಾಗಿ ಬಳಸಿದ ಕೀರ್ತಿಗೆ ಭಾಜನರಾಗಿ ದ್ದಾರೆ. ಇನ್ನು, ಗ್ಯಾರಂಟಿ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೇಸ್ ಪಕ್ಷ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರಿನ ಮಹಾನಗರ ಪಾಲಿಕೆ ಕಾರ್ಪೋರೇಟರ್ ಸೋಮಶೇಖರ್, ಬಿಜೆಪಿ ಪ್ರಮುಖರಾದ ಬಿ.ಎಚ್.ರಾಘವೇಂದ್ರ, ಹು.ಭಾ.ಅಶೋಕ್, ಕಾಂತ್ರಿಪ್ರಸಾದ್, ರಾಜೇಶ್ ಮಾವಿನಸರ, ರಮೇಶ ಪಂಡ್ರಿ, ರಾಜೇಶ್ ಕೇಡಲಸರ, ಎಂ.ನಾಗರಾಜ್ ಇನ್ನಿತರರು ಹಾಜರಿದ್ದರು.

ಇದು ಭಾರತ ಗೆಲ್ಲಿಸುವ ಚುನಾವಣೆ: ರಘು ಕೌಟಿಲ್ಯ

ಸಾಗರ: ಕುಲ ಕಸುಬು ಆಧಾರಿತ ಸಮುದಾಯಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ತೋರಿಸಿ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.ಪಟ್ಟಣದ ಪಕ್ಷದ ಕಚೇರಿಯಲ್ಲಿ ನಡೆದ ಓಬಿಸಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ವರ್ಗಗಳು ಸ್ವಾವಲಂಬಿ ಆಗಬೇಕಿದ್ದರೆ ಪ್ರಧಾನಿಯವರು ತೋರಿಸಿಕೊಟ್ಟಿರುವ ನಮ್ಮ ಕುಲಕಸುಬು ಆಧರಿತ ಆತ್ಮ ನಿರ್ಭರ ಭಾರತದತ್ತ ಹೆಜ್ಜೆ ಹಾಕಬೇಕಿದೆ. ಹೊರಗಿನಿಂದ ವಿದೇಶಿಯರು ಆಕ್ರಮಣ ಮಾಡುವುದು ಒಂದೆಡೆಯಾದರೆ ದೇಶದ ಒಳಗಿನಿಂದ ಆಗುತ್ತಿರುವ ಆಕ್ರಮಣ ತಪ್ಪಿದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ. ಅದಕ್ಕಾಗಿ ಈಗ ಎದುರಾಗಿರುವುದು ಸ್ವಾಭಿಮಾನದ, ಅಭಿವೃದ್ಧಿ ಪರ ಹಾಗೂ ವಿರೋಧದ ನಡುವಿನ ಚುನಾವಣೆ ಎಂದರು.ಭಾರತವನ್ನು ಗುಡಿಸಲು ವಾಸಿ ಎಂದು ಹಂಗಿಸುತ್ತಿದ್ದ ಜಗತ್ತನ್ನು ಕೆಲವೇ ವರ್ಷದಲ್ಲಿ ವಿಶ್ವಗುರುವನ್ನಾಗಿಸುವತ್ತ ಮುನ್ನಡೆಸಿದ ನಾಯಕನನ್ನು ಗೆಲ್ಲಿಸಬೇಕಿರುವ ಚುನಾವಣೆ ಇದು. ಅದಕ್ಕಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ತೊಟ್ಟ ಚುನಾವಣೆ. ಶಿವಮೊಗ್ಗದಲ್ಲಿ ಅಭಿವೃದ್ಧಿ ಗೆಲ್ಲಿಸಲು ರಾಘವೇಂದ್ರರನ್ನು ಬೆಂಬಲಿಸುವ ಹೋರಾಟ ವಿದು. ಒಟ್ಟಾರೆ ಭಾರತವನ್ನು ಗೆಲ್ಲಿಸುವ ಚುನಾವಣೆ ಎಂದರು.

ಪ್ರಧಾನಿ ಮೋದಿಯವರ ಯೋಜನೆಗಳು ಮತ ಬ್ಯಾಂಕ್ ಸೃಷ್ಟಿಸುವ ಸಲುವಾಗಿ ಮಾಡಿದ್ದಲ್ಲ. ಬದಲಾಗಿ ಹಿಂದುಳಿದ ವರ್ಗಗಳ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶ್ರಮಿ ಸುವ, ಜನಪರ ಕಾಳಜಿಯ ಕಾರ್ಯಗಳವು. ಆದರೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ನಿಗಮಗಳಿಗೆ ಬರಬೇಕಿದ್ದ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ವಿನಿಯೋಗಿಸಿದೆ. ನಾವೆಲ್ಲ ಸಂಖ್ಯೆಯ ದೃಷ್ಟಿಯಲ್ಲಿ ಚಿಕ್ಕಪುಟ್ಟ ಸಮುದಾಯಗಳ ಜನ. ನಾವು ಶಾಸಕರು, ಸಂಸದರಾಗಲು ಸಾಧ್ಯವಿಲ್ಲದಿರಬಹುದು. ಆದರೆ ಅವರ ಹಣೆಬರಹ ನಿರ್ಧರಿಸಲು ಶಕ್ತರಿದ್ದೇವೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.

Share this article