ಜಾಗತೀಕರಣದ ಸಂದರ್ಭದಲ್ಲಿ ದೇಶದಲ್ಲಿ ಸಣ್ಣಪುಟ್ಟ ಭಾಷೆಗಳು ನಶಿಸಿ ಹೋಗುವ ಆತಂಕವಿದೆ, ಅದನ್ನು ಉಳಿಸುವ ಕೆಲಸವನ್ನು ರಾಜ್ಯದ ಪ್ರತಿ ಕನ್ನಡಿಗರು, ಇಲಾಖೆಗಳು ವಿವಿಗಳು ಮಾಡಬೇಕಾಗಿದೆ. ಪ್ರತಿಹಂತದಲ್ಲೂ ಕನ್ನಡ ಉಳಿಸುವ ಕಾರ್ಯ ನಿರಂತರವಾಗಿರಲಿ, ಗಡಿಜಿಲ್ಲೆಯ ವಿವಿ ಇದಾಗಿದ್ದು, ಇಲ್ಲಿ ಕನ್ನಡವನ್ನು ಬೆಳೆಸುವ ಕಾಯಕದಲ್ಲಿ ನಿಮ್ಮ ಪಾತ್ರ ಹೆಚ್ಚಿನದಾಗಿದೆ
ಕನ್ನಡಪ್ರಭ ವಾರ್ತೆ ಕೋಲಾರಕನ್ನಡ ಭಾಷೆಯನ್ನು ಉಳಿಸದೇ ಹೋದಲ್ಲಿ ದೇಶದ ಹಿಂದಿ ಆ ಜಾಗವನ್ನು ಆಕ್ರಮಿಸುತ್ತದೆ ಆದ್ದರಿಂದ ಪ್ರತಿ ಹಂತದಲ್ಲೂ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಟಮಕದ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ವಿವಿ ಕೈಗೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಿವಿಯ ಕುಲಪತಿಗಲಾದ ಪ್ರೊ.ನಿರಂಜನ ಅವರ ಕನ್ನಡ ಪ್ರೇಮ ಶ್ಲಾಘನೀಯ. ಅವರಿರುವ ಕಡೆ ಕನ್ನಡದ ಏಳ್ಗೆ ಕುರಿತು ಚಿಂತೆ ಮಾಡುವ ಅಗತ್ಯವೇ ಇಲ್ಲ ಎಂದರು.ಭಾಷೆ ರಕ್ಷಣೆ ಎಲ್ಲರ ಹೊಣೆ
ಜಾಗತೀಕರಣದ ಸಂದರ್ಭದಲ್ಲಿ ದೇಶದಲ್ಲಿ ಸಣ್ಣಪುಟ್ಟ ಭಾಷೆಗಳು ನಶಿಸಿ ಹೋಗುವ ಆತಂಕವಿದೆ, ಅದನ್ನು ಉಳಿಸುವ ಕೆಲಸವನ್ನು ರಾಜ್ಯದ ಪ್ರತಿ ಕನ್ನಡಿಗರು, ಇಲಾಖೆಗಳು ವಿವಿಗಳು ಮಾಡಬೇಕಾಗಿದೆ ಎಂದ ಅವರು, ಭಾಷೆ ಉಳಿಸುವ ಹೊಣೆ ಪ್ರತಿಯೊಬ್ಬರದ್ದಾಗಿದೆ. ಇದೇ ಸಂದರ್ಭದಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲಿ ವಿವಿ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ತಿಳಿದುಕೊಂಡ ಅವರು, ಪ್ರತಿಹಂತದಲ್ಲೂ ಕನ್ನಡ ಉಳಿಸುವ ಕಾರ್ಯ ನಿರಂತರವಾಗಿರಲಿ, ಗಡಿಜಿಲ್ಲೆಯ ವಿವಿ ಇದಾಗಿದ್ದು, ಇಲ್ಲಿ ಕನ್ನಡವನ್ನು ಬೆಳೆಸುವ ಕಾಯಕದಲ್ಲಿ ನಿಮ್ಮ ಪಾತ್ರ ಹೆಚ್ಚಿನದಾಗಿದೆ ಎಂದರು.
ಮೊರಸುನಾಡು ಕನ್ನಡ ನಿಘಂಟು
ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ವಿವಿಯ ಕನ್ನಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ವಿವಿಯಿಂದ ಸಾಹಿತಿ ಸಾ.ರಘುನಾಥ ಅವರ ಮೊರಸುನಾಡು ಕನ್ನಡ ನಿಘಂಟು ಹೊರತರುವ ಕೆಲಸವನ್ನು ವಿವಿಯಿಂದ ಮಾಡುತ್ತಿರುವುದಾಗಿ ತಿಳಿಸಿದರು. ಕನ್ನಡ ಸಂಸ್ಕೃತಿ, ಭಾಷೆ ಉಳಿಸುವ ನಿಟ್ಟಿನಲ್ಲಿ ವಿವಿಯಿಂದ ಅನೇಕ ಕೆಲಸ ಮಾಡಲಾಗಿದೆ, ಗಡಿ ಜಿಲ್ಲೆಯಲ್ಲೂ ರಾಜ್ಯದ ಶ್ರೀಮಂತ ಕರಾವಳಿ ಕಲೆ ಯಕ್ಷಗಾನವನ್ನು ಇಲ್ಲಿ ಪ್ರದರ್ಶಿಸಿ ಜನತೆಗೆ ಪ್ರೇರಣೆ ನೀಡಲಾಗಿದೆ ಎಂದರು.
ವಿವಿಯಲ್ಲಿ ಕನ್ನಡಕ್ಕೆ ಆದ್ಯತೆ
ಉತ್ತರ ವಿವಿ ಮತ್ತು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಕನ್ನಡ ಉಳಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ, ಕನ್ನಡ ನಾಡು,ನುಡಿ,ನೆಲ,ಜಲ ರಕ್ಷಣೆಗೆ ವಿವಿ ಬದ್ದವಾಗಿದೆ, ಭಾಷೆಯನ್ನು ಬೆಳೆಸುವ ಕಾಯಕ ಮುಂದುವರೆಸಿದೆ ಎಂದು ತಿಳಿಸಿದರು.ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ತಿಮ್ಮೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಂತೋಷ್ ಹಾನಗಲ್, ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ವಿವಿಯ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ತಿಪ್ಪೇಸ್ವಾಮಿ,ಹಣಕಾಸು ಅಧಿಕಾರಿ ವಸಂತಕುಮಾರ್, ಜೆ.ನಾಗರಾಜ್, ಸಿಂಡಿಕೇಟ್ ಸದಸ್ಯ ಬಸವರಾಜ್ ಅಲಗೂರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.