ಕನ್ನಡಪ್ರಭ ವಾರ್ತೆ ಬೇಲೂರು
ತಮಿಳು ನಟ ಕಮಲ ಹಾಸನ್ ತಮ್ಮ ಚಿತ್ರದ ಬಿಡುಗಡೆ ಪ್ರಚಾರ ಸಂದರ್ಭದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಕನ್ನಡ ಜನತೆಗೆ ಮಾಡಿದ ಅವಮಾನವಾಗಿದ್ದು, ಈ ಕೂಡಲೇ ಸಾರ್ವತ್ರಿಕವಾಗಿ ಅವರು ಕ್ಷಮಯಾಚನೆ ಮಾಡಬೇಕು ಎಂದು ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡ ಆಗ್ರಹಿಸಿದ್ದಾರೆ.ಕೆಲವರು ತಮ್ಮ ಚಿತ್ರದ ಪ್ರಚಾರದ ಭರಾಟೆ ಹುಚ್ಚಿನಲ್ಲಿ ಪ್ರತೀ ಬಾರಿ ಬಿಡುಗಡೆ ಸಂದರ್ಭದಲ್ಲಿ ಏನಾದರೊಂದು ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದು, ಕನ್ನಡಪರ ಸಂಘಟನೆಗಳು ಒಗ್ಗಟ್ಟನಿಂದ ಕನ್ನಡ ವಿರೋಧಿ ಹೇಳಿಕೆಗಳ ವಿರುದ್ಧ ಸಿಡಿದೆದ್ದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಷ್ಟಾದರೂ ಇನ್ನೂ ಬುದ್ಧಿ ಬಂದಿಲ್ಲ ಎಂಬಂತೆ ನಟ ಶಿವರಾಜ್ ಕುಮಾರ್ ಅವರ ಎದುರೇ ಕಮಲ್ ಹಾಸನ್ ಕನ್ನಡಕ್ಕೆ ಅಪಮಾನ ಮಾಡಿದ್ದಾರೆ, "ಥಗ್ ಲೈಫ್ " ಅನ್ನೋ ತಮಿಳು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಈ ರೀತಿ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದರು.ಇತ್ತೀಚೆಗೆ ಗಾಯಕ ಸೋನು ನಿಗಮ್ ಅವರು ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು, ವಿರೋಧ ವ್ಯಕ್ತವಾಗಿತ್ತು. ನಂತರ ಅವರನ್ನು ಸ್ಯಾಂಡಲ್ವುಡ್ನಲ್ಲಿ ಬ್ಯಾನ್ ಮಾಡಿದ್ದರಿಂದ ಪ್ರತಿಭಟನೆಯ ಕಾವು ಕಡಿಮೆಯಾಗಿತ್ತು. ಇದೀಗ ಕಮಲ್ ಹಾಸನ್ ಸರದಿಯಾಗಿದ್ದು, ಅವರು ಕನ್ನಡದ ಬಗ್ಗೆ ನೀಡಿರುವ ಹೇಳಿಕೆ ಹೇಳಿದ್ದು ಇವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜೂನ್ 5ರಂದು ಥಗ್ ಲೈಫ್ ಚಿತ್ರ ರಿಲೀಸ್ ಆಗುತ್ತಿದೆ. ಕಮಲ್ ಹಾಸನ್ ಕನ್ನಡ ಜನತೆಯ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಆಗ್ರಹಿಸಿದ್ದಾರೆ.