ಕನ್ನಡಪ್ರಭ ವಾರ್ತೆ ಅರಸೀಕೆರೆ
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಹುಟ್ಟೂರಾಗಿರುವುದರಿಂದ ಸಹಜವಾಗಿಯೇ ತಾಲೂಕಿನಲ್ಲಿ ಕರವೇ ಸಂಘಟನೆ ಪ್ರಬಲವಾಗಿದೆ. ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಂದ್ಗೆ ಬೆಂಬಲ ನೀಡದ ಕಾರಣ ಸಹಜ ದಿನಗಳಂತೆ ಅಂಗಡಿ ಮುಂಗಟ್ಟುಗಳು ನಗರದಲ್ಲಿ ತೆರೆದರೆ, ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು. ಆದರೂ ಮುಂಜಾಗ್ರತ ಕ್ರಮವಾಗಿ ಡಿವೈಎಸ್ಪಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ, ಸಬ್ ಇನ್ಸ್ಪೆಕ್ಟರ್ ದಿಲೀಪ್, ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಬಂದ್ ಹೆಸರಿನಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಬಂದೋಕಮಬಸ್ತ್ ಮಾಡಿದ್ದು ಕಂಡು ಬಂತು.
ಈ ಕುರಿತು ಸುದ್ದಿಗಾರರೊಂದಿಗೆ ಡಿವೈಎಸ್ಪಿ ಲೋಕೇಶ್ ಮಾತನಾಡಿ, ನಮ್ಮ ಪೊಲೀಸ್ ಸಿಬ್ಬಂದಿಯ ಜತೆಗೆ ಒಂದು ಕೆಎಸ್ಆರ್ಪಿ ತುಕುಡಿ ಹಾಗೂ ಹೋಂ ಗಾರ್ಡ್ ಗಳನ್ನು ಬಳಸಿಕೊಂಡು ಬಂದೋಬಸ್ತ್ ಮಾಡಲಾಗಿದೆ. ನಿಯಮ ಮೀರಿ ಯಾರಾದರೂ ನಡೆದುಕೊಂಡರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.* ಹೇಳಿಕೆ: 1
ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಹಾಗೂ ಕನ್ನಡಿಗರ ಮೇಲೆ ನಡೆಯುವ ದೌರ್ಜನ್ಯ ಖಂಡಿಸುವುದಕ್ಕೆ ಹೋರಾಟ ಅನಿವಾರ್ಯ. ಆದರೆ ಬಂದ್ ಮಾಡುವುದೇ ಮೊದಲ ಆದ್ಯತೆ ಅಲ್ಲ, ನಮ್ಮ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣಗೌಡ್ರು ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹಾಗಾಗಿ ನಾವು ಸಹ ಇಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.- ಹೇಮಂತ್ ಕುಮಾರ್, ಕರವೇ ಜಿಲ್ಲಾ ಉಪಾಧ್ಯಕ್ಷ