ಶುರುವಾದ ಮರುದಿನವೇ ಸಂಚಾರ ರದ್ದಾದ ಬಸ್‌

KannadaprabhaNewsNetwork |  
Published : Jan 09, 2024, 02:00 AM IST
8ಎಚ್ಎಸ್ಎನ್12 : ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮಕ್ಕೆ ಭಾನುವಾರ ಹೊಸದಾಗಿ ಸಂಚಾರ ಆರಂಭಿಸಿದ ಕೆ.ಎಸ್.ಆರ್.ಟಿ.ಸಿ. ಬಸ್‌ಗೆ ದೊಡ್ಡಮ್ಮ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಲಾಯಿತು. | Kannada Prabha

ಸಾರಾಂಶ

ಹಾಸನದ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮಕ್ಕೆ ಸಂಚಾರ ಆರಂಭಿಸಿದ ಸಾರಿಗೆ ಬಸ್ ಒಂದೇ ದಿನದಲ್ಲಿ ಕಾಂಗ್ರೆಸ್‌ ನಾಯಕ ಹಾಗೂ ಶಾಸಕ ಮಂಜು ನಡುವಿನ ತಿಕ್ಕಾಟದಿಂದ ಸ್ಥಗಿತಗೊಂಡಿದೆ.

ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್‌ ಮುಖಂಡ । ಶಿಷ್ಟಾಚಾರ ಉಲ್ಲಂಘನೆ ತಗಾದೆ ತೆಗೆದ ಶಾಸಕ ಮಂಜುಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ದುಮ್ಮಿಕೊಪ್ಪಲು ಗ್ರಾಮಕ್ಕೆ ಸಂಚಾರ ಆರಂಭಿಸಿದ ಸಾರಿಗೆ ಬಸ್ ಒಂದೇ ದಿನದಲ್ಲಿ ಸ್ಥಗಿತಗೊಂಡ ಪ್ರಸಂಗ ನಡೆದಿದೆ.

ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಅವರು ಪಟ್ಟಣದ ದೊಡ್ಡಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರು ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಭಾನುವಾರ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದರು. ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಶಾಸಕ ಎ. ಮಂಜು ಅವರು ಡಿಪೋ ವ್ಯವಸ್ಥಾಪಕ ಹನುಮಂತಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಸೋಮವಾರ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಶಾಸಕರನ್ನು ಕರೆಸಿ ಒಂದೆರಡು ದಿನದಲ್ಲಿ ಬಸ್ ಸಂಚಾರ ಪುನಾರಂಭಿಸುವುದಾಗಿ ಡಿಪೋ ವ್ಯವಸ್ಥಾಪಕ ಹನುಮಂತಪ್ಪ ತಿಳಿಸಿದರು.

ಗ್ರಾಮಸ್ಥರ ಮನವಿ ಮೇರೆಗೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಬಸ್ ಸೌಲಭ್ಯ ಒದಗಿಸಿರುವ ಕುರಿತು ಸಮಾಜ ಸೇವಕ ಸಿ.ಡಿ. ದಿವಾಕರ್ ಗೌಡ ಹಾಗೂ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಅವರ ಬೆಂಬಲಿಗರ ನಡುವೆ ಜಿದ್ದಾಜಿದ್ದಿನ ಚರ್ಚೆ ಉಂಟಾಗಿದೆ.

ಬಸ್ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಸಲ್ಲಿಸಿದ್ದ ಮನವಿ ಮೇರೆಗೆ ಸರ್ಕಾರ ಆದೇಶ ಹೊರಡಿಸಿದೆ. ನಿತ್ಯ ಬೆಳಿಗ್ಗೆ 7 ಗಂಟೆಗೆ ಅರಕಲಗೂಡಿನಿಂದ ಸಂತೆಮರೂರು ಮಾರ್ಗವಾಗಿ ದುಮ್ಮಿಕೊಪ್ಪಲಿಗೆ ಬಸ್ ಸಂಚರಿಸಲಿದೆ. ಮತ್ತೆ ಸಂಜೆ 4.30ಕ್ಕೆ ದುಮ್ಮಿಕೊಪ್ಪಲಿಗೆ ತೆರಳಲಿದೆ ಎಂದು ಡಿಪೋ ವ್ಯವಸ್ಥಾಪಕ ಹನುಮಂತಪ್ಪ ತಿಳಿಸಿದ್ದರು.

ಆದರೆ ಇಬ್ಬರು ನಾಯಕರ ನಡುವಿನ ಪ್ರತಿಷ್ಠೆ ಹಾಗೂ ಬಸ್‌ ಬಿಡಿಸಿದ ಕೀರ್ತಿ ತಮ್ಮದಾಗಿಸಿಕೊಳ್ಳುವ ಸ್ವಾರ್ಥದ ನಡುವೆ ಬಸ್‌ ಸಂಚಾರ ಸ್ಥಗಿತವಾಗಿದ್ದು, ಗ್ರಾಮಸ್ಥರಿಗೆ ಹಳೆಗಂಡನ ಪಾದವೇ ಗತಿ ಎನ್ನುವಂತಾಗಿರುವುದು ಮಾತ್ರ ದುರಂತ.

ಏನಿದು ಘಟನೆ?:

ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ದುಮ್ಮಿಕೊಪ್ಪಲು ಗ್ರಾಮಕ್ಕೆ ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡಿತು.

ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಸಮಾಜ ಸೇವಕ ಸಿ.ಡಿ. ದಿವಾಕರಗೌಡ ಅವರು ಗ್ರಾಮಸ್ಥರ ಕೋರಿಕೆ ಮೇರೆಗೆ ಊರಿಗೆ ಬಸ್ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು, ವೃದ್ಧರು ನಿತ್ಯ ಪಟ್ಟಣ ಪ್ರದೇಶಕ್ಕೆ ನಡೆದುಕೊಂಡು ಬರುವ ದುಸ್ಥಿತಿ ಎದುರಾಗಿದ್ದು ಬಸ್ ಸಂಚಾರ ಸೇವೆ ಆರಂಭಿಸುವಂತೆ ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದರು.

ಬಳಿಕ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು.

ಸಾರಿಗೆ ಸಚಿವರು ಬಸ್ ಸಂಚಾರ ಆರಂಭಿಸಲು ಆದೇಶ ಮಾಡಿದ್ದರು. ಇದರಿಂದಾಗಿ ಉಭಯ ಮುಖಂಡರ ಬೆಂಬಲಿಗರು ಬಸ್ ಸೌಲಭ್ಯ ಒದಗಿಸಿದ ಕ್ರೆಡಿಟ್ ತಮಗೆ ಸಿಗಬೇಕೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆ ನೀಡಿ ತಮ್ಮ ನಾಯಕನ ಪರ ಚರ್ಚೆ ನಡೆಸಿದ್ದರಿಂದ ರಾಜಕೀಯ ಪೈಪೋಟಿಗೂ ಇದು ಕಾರಣವಾಗಿತ್ತು.

ಭಾನುವಾರ ಬೆಳಿಗ್ಗೆ ಸಿ.ಡಿ. ದಿವಾಕರ್‌ಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗೌರವ ಸಲ್ಲಿಸಿದರು. ಅತ್ತ ಶ್ರೀಧರ್‌ಗೌಡ ಅವರು ಅರಕಲಗೂಡು ದೊಡ್ಡಮ್ಮ ದೇವಸ್ಥಾನದಲ್ಲಿ ಪ್ರಜೆ ಸಲ್ಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ, ಅದೇ ಬಸ್‌ನಲ್ಲಿ ಸಂಚರಿಸಿದ್ದರು.

ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮಕ್ಕೆ ಭಾನುವಾರ ಹೊಸದಾಗಿ ಸಂಚಾರ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗೆ ದೊಡ್ಡಮ್ಮ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!